
ಬೆಂಗಳೂರು, (ಅ.24): ಸಿನಿಮಾ ಕಲಾನಿರ್ದೇಶಕ, ಚಿತ್ರನಿರ್ದೇಶಕ, ನಿರ್ಮಾಪಕ ಜಿ.ಮೂರ್ತಿ (56 ವರ್ಷ) ಇಂದು (ಶನಿವಾರ) ಮಧ್ಯಾಹ್ನ 1 ಗಂಟೆಗೆ ಅಗಲಿದ್ದಾರೆ.
ಮನೆಯಲ್ಲಿ ಜಾರಿ ಬಿದ್ದು ಅವರ ತಲೆಗೆ ಪೆಟ್ಟಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಅವರು ಬ್ರೈನ್ ಹ್ಯಾಮರೇಜ್ನಿಂದಾಗಿ ಇಹಲೋಕ ತ್ಯಜಿಸಿದ್ದಾರೆ.
ಬಿಜೆಪಿ ನಾಯಕನಿಗೆ ಕೊರೋನಾ, ಬಿಗ್ಬ್ಯಾಶ್ ಆಡ್ತಾರಾ ರೈನಾ? ಅ.24ರ ಟಾಪ್ 10 ಸುದ್ದಿ!
ಜಿ.ಮೂರ್ತಿ ಅವರು ಹಿರಿಯ ಚಿತ್ರನಿರ್ದೇಶಕ ಜಿ.ವಿ.ಅಯ್ಯರ್ ಅವರ ನಿಕಟವರ್ತಿಯಾಗಿದ್ದರು. ಅಯ್ಯರ್ ಅವರ ಸಿನಿಮಾಗಳಿಗೆ ಕಲಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಪಿ.ಕೃಷ್ಣಮೂರ್ತಿ ಅವರಿಗೆ ಸಹಾಯಕರಾಗಿ ಮೂರ್ತಿಯವರು ವೃತ್ತಿ ಆರಂಭಿಸಿದ್ದು. ಮುಂದೆ ಸ್ವತಂತ್ರ್ಯ ನಿರ್ದೇಶಕರಾಗಿ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಈ ಪಟ್ಟಿಯಲ್ಲಿ ಕನ್ನಡವಷ್ಟೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳೂ ಸೇರಿವೆ.
‘ಚಂದ್ರಚಕೋರಿ’ ಮತ್ತು ‘ಕುರುನಾಡು’ ಚಿತ್ರಗಳ ಅತ್ಯುತ್ತಮ ಕಲಾನಿರ್ದೇಶನಕ್ಕಾಗಿ ಅವರಿಗೆ ಎರಡು ಬಾರಿ ರಾಜ್ಯಪ್ರಶಸ್ತಿ ಸಂದಿದೆ. ‘ಕುರುನಾಡು’ ಅವರ ನಿರ್ದೇಶನದ ಚಿತ್ರವೂ ಹೌದು. ಅವರ ನಿರ್ದೇಶನದ ‘ಶಂಕರ ಪುಣ್ಯಕೋಟಿ’ ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ (2008-09) ಗೌರವ ಸಂದಿದೆ.
ವೈಷ್ಣವಿ, ಹಳ್ಳಿಯ ಮಕ್ಕಳು, ಅರಳುವ ಹೂಗಳು, ಸಿದ್ದಗಂಗ, ಸುಗಂಧಿ ಸೇರಿದಂತೆ ಒಟ್ಟು ಅವರು ಎಂಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಟ ಶ್ರೀನಿವಾಸ ಪ್ರಭು ಅವರ ಜೊತೆಗೂಡಿ ‘ಬಿಂಬ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದರು. ಒಂದೇ ಶಾಟ್ನಲ್ಲಿ ಒಬ್ಬನೇ ಕಲಾವಿದ ಅಭಿನಯಿಸಿದ್ದ ಜಗತ್ತಿನ ಮೊದಲ ಚಿತ್ರವಾಗಿ ಇದು ದಾಖಲಾಗಿದೆ.
ಜಿ.ಮೂರ್ತಿ ನಿರ್ದೇಶನದ ಸಿನಿಮಾಗಳು ದೇಶ, ವಿದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಮೂರ್ತಿ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.