ರಾಮನಗರ (ಆ.25): ಲವ್ ಯು ರಚ್ಚು ಚಿತ್ರೀಕರಣ ವೇಳೆ ಸಹಾಯಕ ಫೈಟರ್ ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು. ನೋಟಿಸ್ ನೀಡಿದ್ದರಿಂದ ನಟಿ ರಚಿತಾ ರಾಮ್ ಮಂಗಳವಾರ ಸಂಜೆ ಠಾಣೆಗೆ ಹಾಜರಾದರು. ಡಿವೈಎಸ್ಪಿ ಮೋಹನ್ ಕುಮಾರ್ ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಲವ್ ಯು ರಚ್ಚು ಚಿತ್ರೀಕರಣದ ವೇಳೆ ಸಹಾಯಕ ಫೈಟರ್ ವಿವೇಕ್ ಮೃತಪಟ್ಟಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಆರೋಪಿಗಳ ನ್ಯಾಯಾಂಗ ಬಂಧನವನ್ನು ರಾಮನಗರ ಸಿಜೆಎಂ ನ್ಯಾಯಾಲಯ ಸೆಪ್ಟೆಂಬರ್ 7ರವರೆಗೆ ವಿಸ್ತರಿಸಿದೆ.
ಆ ದುರ್ಘಟನೆ ನಡೆದಾಗ ನಾನು ಸೆಟ್ನಲ್ಲಿಇರಲಿಲ್ಲ: ನಟಿ ರಚಿತಾ ರಾಮ್
ಕಳೆದ ಆಗಸ್ಟ್ 9ರಂದು ಬಿಡದಿ ಹೋಬಳಿ ಜೋಗನಪಾಳ್ಯದಲ್ಲಿ ಲವ್ ಯು ರಚ್ಚು ಚಲನಚಿತ್ರದ ಚಿತ್ರೀಕರಣದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸಾಹಸ ಕಲಾವಿದ ವಿವೇಕ್ ಮೃತಪಟ್ಟು ಮತ್ತೊಬ್ಬ ಕಲಾವಿದ ತೀವ್ರವಾಗಿ ಗಾಯಗೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ ರಾಜ್, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ ವಿರುದ್ಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿಜೆಎಂ ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನದ ಆದೇಶ ನೀಡಿತ್ತು. ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಆರೋಪಿಗಳಿದ್ದು, ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸಿದರು.