
ಆರ್.ಬಿ.ಎಸ್.
ಭಕ್ತಿಪ್ರಧಾನ ಸಿನಿಮಾಗಳ ಪರಂಪರೆಯೇ ಇದೆ. ಇದೂ ಆ ಸಾಲಿಗೆ ಸೇರುವ ಆಧುನಿಕ ಕಾಲದ ಭಕ್ತಿ ಪ್ರಧಾನ ಸಿನಿಮಾ. ಇಲ್ಲಿ ಮಾರಮ್ಮ ದೇವಿಯೇ ಕೇಂದ್ರ. ಮಾರಮ್ಮ ದೇವಿಯನ್ನೇ ಧ್ಯಾನಿಸುವ ಭಕ್ತರು, ದೇವಿಯ ಮಹಾತ್ಮೆ ತಿಳಿಯದೆ ಅಟ್ಟಹಾಸ ಮೆರೆಯುವ ದುಷ್ಟರು, ಭಕ್ತಿಗೆ ಮರುಳಾಗುವ ದೇವಿ ಇವೆಲ್ಲವೂ ಇರುವ ಸಿನಿಮಾ ಇದು. ಒಂದು ಹಳ್ಳಿಯಲ್ಲಿ ಕತೆ ಆರಂಭವಾಗುತ್ತದೆ. ಆ ಹಳ್ಳಿಗೆ ಮಾರಮ್ಮನೇ ಅಧಿದೇವತೆ.
ಎಲ್ಲರೂ ಮಾರಮ್ಮನ ಭಕ್ತರು. ಅದೇ ಊರಲ್ಲೊಬ್ಬ ವಿಲನ್. ಪ್ರಥಮಾರ್ಧದಲ್ಲಿ ದೇವಿಯ ಆರಾಧನೆ ಅಂಶಗಳು ಬರುತ್ತವೆ. ಶಾಂತ ಸ್ವರೂಪದ ದೇವಿಯನ್ನು ಇಲ್ಲಿ ಕಾಣಬಹುದು. ಭಕ್ತಿಯ ಜೊತೆಗೆ ಒಂದು ಪ್ರೇಮಕತೆ, ಆ ಪ್ರೇಮಕ್ಕೆ ವಿಘ್ನ, ಅದಕ್ಕಾಗಿ ಹೋರಾಟ ಇತ್ಯಾದಿ ನಡೆಯುತ್ತದೆ. ಅವೆಲ್ಲವೂ ಕತೆಯನ್ನು ಮುಂದಕ್ಕೆ ಕರೆದೊಯ್ಯುತ್ತದೆ. ದ್ವಿತೀಯಾರ್ಧದಲ್ಲಿ ಕತೆ ತಾರಕಕ್ಕೆ ಹೋಗುತ್ತದೆ. ಅಲ್ಲಿ ದೇವಿಯ ವಿಜೃಂಭಣೆ. ಶತ್ರು ಸಂಹಾರ ಅಧ್ಯಾಯ. ಒಟ್ಟಾರೆ ಇದೊಂದು ಪರಿಪೂರ್ಣ ಭಕ್ತಿ ಪ್ರಧಾನ ಸಿನಿಮಾ.
ಚಿತ್ರ: ಸಿಂಹರೂಪಿಣಿ
ನಿರ್ದೇಶನ: ಕಿನ್ನಾಳ್ ರಾಜ್
ತಾರಾಗಣ: ಯಶ್ ಶೆಟ್ಟಿ, ಅಂಕಿತಾ ಗೌಡ, ದಿವ್ಯಾ ಆಲೂರು, ಸುಮನ್, ಹರೀಶ್ ರಾಯ್, ಪುನೀತ್ ರುದ್ರನಾಗ
ರೇಟಿಂಗ್: 3
ಆಧುನಿಕ ಜಗತ್ತಲ್ಲಿ ಒಂದು ಧಾರ್ಮಿಕ ಸಿನಿಮಾವನ್ನೂ ರೂಪಿಸಿ, ಅದನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದು ನಿರ್ದೇಶಕ ಕಿನ್ನಾಳ್ ರಾಜ್ ಹೆಗ್ಗಳಿಕೆ. ಅದರ ಜೊತೆಗೆ ಈ ಸಿನಿಮಾದ ದೊಡ್ಡ ಶಕ್ತಿ ಕಲಾವಿದರು. ಹತ್ತಾರು ವರ್ಷಗಳ ಅನುಭವ ಹೊಂದಿರುವ ಕಲಾವಿದರಿಂದ ಹಿಡಿದು ಹೊಸಬರ ತನಕ ಎಲ್ಲರೂ ಸೊಗಸಾಗಿ ನಟಿಸಿದ್ದಾರೆ. ಆದ್ದರಿಂದ ಈ ಕತೆಗೊಂದು ವಿಶೇಷ ಮೆರುಗು ಪ್ರಾಪ್ತವಾಗಿದೆ. ಈ ಚಿತ್ರ ಭಕ್ತಿ ಪ್ರಧಾನ ಸಿನಿಮಾ ಪ್ರೇಕ್ಷಕರಿಗೆ ದೊರಕಿದ ಕೊಡುಗೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.