
ಕೆಲವು ಸಿನಿಮಾಗಳು ಸುದ್ದಿ, ಸದ್ದು ಮಾಡದೇ ಬಿಡುಗಡೆಯಾಗುತ್ತವೆ. ನಿರೀಕ್ಷೆ ಇಲ್ಲದೆ ನೋಡಿದರೆ ಅಚ್ಚರಿಯಾಗುವಂತೆ ಮೂಡಿಬಂದಿರುತ್ತವೆ. ಇದು ಅಂಥಾ ಸಿನಿಮಾ. ಅಸ್ಟ್ರಲ್ ಬಾಡಿ ಪರಿಕಲ್ಪನೆ ಇಟ್ಟುಕೊಂಡು ರೂಪುಗೊಂಡಿರುವ, ಥ್ರಿಲ್ಲರ್ ಸ್ವರೂಪದಲ್ಲಿರುವ ಕುತೂಹಲಕರ ಮತ್ತು ಆಸಕ್ತಿಕರ ಸಿನಿಮಾ.
ಈ ಸಿನಿಮಾದ ಮೊದಲ ಫ್ರೇಮ್ನಿಂದ ಕಟ್ಟಕಡೆಯ ಫ್ರೇಮ್ವರೆಗೂ ಅಚ್ಚುಕಟ್ಟುತನ, ಕಸುಬುದಾರಿಕೆ ಕಾಣಿಸುತ್ತದೆ. ಕತೆ ಮತ್ತು ಚಿತ್ರಕತೆ ಎರಡನ್ನೂ ಬಹಳ ಜತನದಿಂದ ಕಟ್ಟಿಕೊಡಲಾಗಿದೆ. ಒಂದು ದಟ್ಟ, ನಿರ್ಜನ ಕಾಡಿನಲ್ಲಿ ಮಧ್ಯರಾತ್ರಿಯಲ್ಲಿ ಚಾಲಕನೊಬ್ಬ ನಿದ್ದೆ ತಾಳದೆ ಕಾರು ನಿಲ್ಲಿಸುವಲ್ಲಿಂದ ಮತ್ತು ಆ ಕಾರಿನಿಂದ ಮನೋವೈದ್ಯೆಯೊಬ್ಬರು ಇಳಿಯುವಲ್ಲಿಂದ ಕತೆ ಆರಂಭವಾಗುತ್ತದೆ.
ಹಾರರ್ ಮಾದರಿಯಲ್ಲಿ ಆರಂಭವಾಗುವ ಕಥನ ನಿಧಾನಕ್ಕೆ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸ್ವರೂಪಕ್ಕೆ ಹೊರಳಿಕೊಳ್ಳುತ್ತದೆ. ಮಧ್ಯದಲ್ಲಿ ಕತೆ ಸ್ವಲ್ಪ ಸಾವಧಾನವಾಗಿ ಸಾಗುತ್ತದೆ. ಕತೆ ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ದೃಷ್ಟಿಕೋನಗಳಲ್ಲಿ ನಡೆಯುತ್ತಿರುತ್ತದೆ. ಆದರೆ ನಿರ್ದೇಶಕರು ಎಷ್ಟು ಸೊಗಸಾಗಿ ಚಿತ್ರಕತೆ ಹೆಣೆದಿದ್ದಾರೆ ಎಂದರೆ ಕುತೂಹಲಕರವಾಗಿ ನೋಡಿಸಿಕೊಂಡು ಹೋಗುತ್ತದೆ. ಅದರಲ್ಲೂ ಸುಮನ್ ರಂಗನಾಥ್, ಸುಚೇಂದ್ರ ಪ್ರಸಾದ್ ತಮ್ಮ ತಮ್ಮ ಪಾತ್ರಗಳನ್ನು ಆವಾಹನೆ ಮಾಡಿಕೊಂಡು ಪಾತ್ರವೇ ಆಗಿ ಕಾಡುತ್ತಾರೆ. ಈ ಚಿತ್ರ ಭಿನ್ನವಾಗಿ ರೂಪುಗೊಳ್ಳಲು ಅವರು ಕೂಡ ಪ್ರಧಾನ ಕಾರಣ.
ಚಿತ್ರ: ತದ್ವಿರುದ್ಧ
ನಿರ್ದೇಶನ: ವಿನೋದ್ ಜೆ. ರಾಜ್
ತಾರಾಗಣ: ವಿಕ್ರಮ್ ರಾಮಯ್ಯ, ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ಐಶ್ವರ್ಯಾ ಶೆಟ್ಟಿ, ಪೂಜಾ ಗೌಡ
ರೇಟಿಂಗ್: 3.5
ಕತೆಯಲ್ಲಿ, ಚಿತ್ರಕತೆಯಲ್ಲಿ, ಮೇಕಿಂಗ್ನಲ್ಲಿ ಸಿದ್ಧ ಸೂತ್ರಗಳನ್ನು ಮೀರಿರುವುದು ಸ್ಪಷ್ಟವಾಗಿ ಗೋಚರಿಸುವಂತೆ ಸಿನಿಮಾ ಮೂಡಿಬಂದಿದೆ. ಅದಕ್ಕಾಗಿ ನಿರ್ದೇಶಕ ವಿನೋದ್ ರಾಜ್ ಅಭಿನಂದನಾರ್ಹರು. ಚಿತ್ರದ ನಾಯಕ ವಿಕ್ರಮ್ ರಾಮಯ್ಯ ಅಚ್ಚರಿಯಾಗುವಂತೆ ಅಭಿನಯಿಸಿದ್ದಾರೆ. ಐಶ್ವರ್ಯಾ ಶೆಟ್ಟಿ ಸೊಗಸಾಗಿ ನಟಿಸಿದ್ದಾರೆ. ಇದೊಂದು ಅಚ್ಚರಿದಾಯಕ, ಶ್ಲಾಘನೀಯ ಪ್ರಾಯೋಗಿಕ ಪ್ರಯತ್ನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.