
ಆರ್.ಎಸ್.
ಪರಿಸರ ಬದಲಾಗಿದೆ. ಭೂಮಿ ಬದಲಾಗಿದೆ. ಬದುಕು ಬದಲಾಗಿದೆ. ಅದರಿಂದ ಅಗೋಚರ ಸಮಸ್ಯೆಗಳು ಉಂಟಾಗುತ್ತಿವೆ. ಕೆಲವರಿಗೆ ತಿಳಿದಿದೆ. ಹಲವರಿಗೆ ತಿಳಿದಿಲ್ಲ. ಈ ಸಿನಿಮಾ ಅಂಥದ್ದೊಂದು ಚರ್ಚೆ ಹುಟ್ಟು ಹಾಕುವ ಸಿನಿಮಾ. ಭೂಮಿ ಕುರಿತು, ಮನುಕುಲದ ಕುರಿತು ಆತಂಕ ಹೊಂದಿರುವ ಸಿನಿಮಾ. ಇದರ ಉದ್ದೇಶ ಸ್ಪಷ್ಟವಾಗಿದೆ. ಸಂದೇಶವೂ ತಿಳಿಯಾಗಿದೆ. ಅದನ್ನು ಹೇಳುವುದಕ್ಕೆ ನಿರ್ದೇಶಕ ಸತ್ಯನಾಥ್ ಹಾರರ್ ದಾರಿಯನ್ನು ಹುಡುಕಿದ್ದಾರೆ.
ಜೊತೆಗೆ ಚಿತ್ರಕತೆಯಲ್ಲಿ ನಾನ್ಲೀನಿಯರ್ ವಿಧಾನವನ್ನೂ ಬಳಸಿಕೊಂಡಿದ್ದಾರೆ. ಹಾಗಾಗಿ ಪ್ರಥಮಾರ್ಧದಲ್ಲಿ ಪ್ರಶ್ನೆಗಳಿವೆ. ಏನಾಗುತ್ತಿದೆ ಎಂಬ ಅಂದಾಜು ಸುಲಭಕ್ಕೆ ದೊರೆಯುವುದಿಲ್ಲ. ಅವೆಲ್ಲಾ ಪ್ರಶ್ನೆಗಳಿಗೂ ದ್ವಿತೀಯಾರ್ಧದಲ್ಲಿ ಉತ್ತರ ಕೊಡುತ್ತಾರೆ ನಿರ್ದೇಶಕರು. ಕೊನೆಗೆ ಎಲ್ಲವೂ ತಿಳಿಯಾದಾಗ ಮನಸ್ಸೂ ಭಾರವಾಗುತ್ತದೆ. ಆಲೋಚನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಪೂರಕವಾಗಿ ಅಂತ್ಯದಲ್ಲಿ ಕೆಲವು ಸುದ್ದಿಪತ್ರಿಕೆಗಳ ಕಟಿಂಗ್ಗಳನ್ನೂ ಕೊಟ್ಟಿದ್ದಾರೆ. ನಿರ್ದೇಶಕರ ಉದ್ದೇಶ ಅರಿವಾಗುತ್ತದೆ.
ಈ ಸಿನಿಮಾದ ಪ್ರಥಮಾರ್ಧದಲ್ಲಿ ಸ್ವಲ್ಪ ಸಾವಧಾನ ಬೇಕು. ಏನೂ ಬದಲಾಗುತ್ತಿಲ್ಲ ಅನ್ನಿಸುತ್ತಿರುತ್ತದೆ. ಆದರೆ ಸತ್ಯ ತಿಳಿಯುವುದಕ್ಕೆ ಸ್ವಲ್ಪ ಹೊತ್ತಾಗುತ್ತದೆ. ಅಲ್ಲಿಯವರೆಗೂ ಕಾಯಬೇಕು. ಕಾದವರಿಗೆ ಸಂದೇಶ ಸಿಗುತ್ತದೆ. ನಾಯಕನಾಗಿ ನಟಿಸಿರುವ ಪ್ರಸಾದ್ ವಸಿಷ್ಠ ನಾಯಕ ಅನ್ನುವುದಕ್ಕಿಂದ ಪ್ರಮುಖ ಪಾತ್ರಧಾರಿ. ಆ ಪಾತ್ರವನ್ನು ಧರಿಸಿದ್ದಾರೆ. ಕಿಶೋರ್, ಅವಿನಾಶ್ ಸ್ಕ್ರೀನ್ಗೆ ಮತ್ತು ಚಿತ್ರಕ್ಕೆ ತೂಕ ಹೆಚ್ಚು ಮಾಡಿದ್ದಾರೆ. ಇದು ಉತ್ತಮ ಸಂದೇಶ ಹೊಂದಿರುವ ಹಾರರ್ ಶೈಲಿಯ ಸಿನಿಮಾ.
ಚಿತ್ರ: ಕಬಂಧ
ನಿರ್ದೇಶನ: ಸತ್ಯನಾಥ್
ತಾರಾಗಣ: ಪ್ರಸಾದ್ ವಸಿಷ್ಠ, ಪ್ರಿಯಾಂಕ, ಕಿಶೋರ್, ಅವಿನಾಶ್
ರೇಟಿಂಗ್: 3
ತುಮಕೂರು ಮೂಲದ ಪ್ರಸಾದ್ ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ವಿಭಿನ್ನ ಕಥೆಯ ‘ಕಂಬಂಧ’ ಸಿನಿಮಾ ಮೂಲಕ ನಾಯಕರಾಗಿದ್ದಾರೆ. ಸಿನಿಮಾ ಕುರಿತು ಅಪಾರ ನಂಬಿಕೆ ಇಟ್ಟುಕೊಂಡಿರುವ ಪ್ರಸಾದ್ ವಸಿಷ್ಠ, ‘ಗುಣಮಟ್ಟದ ಸಿನಿಮಾ ಕೊಡಬೇಕು, ವಿಶಿಷ್ಟ ಕಥೆ ಕೊಡಬೇಕು ಎಂಬ ಉದ್ದೇಶದಿಂದ ಮಾಡಿರುವ ಸಿನಿಮಾ ಇದು. ಮನರಂಜನಾತ್ಮಕವಾಗಿಯೇ ಕತೆ ಹೇಳಿ ಕಡೆಗೊಂದು ಸಂದೇಶ ನೀಡುವುದು ನಮ್ಮ ಸಿನಿಮಾದ ವಿಶಿಷ್ಟತೆ. ನಾವು ಮುಂದಿನ ಪೀಳಿಗಿಗೆ ಅನ್ಯಾಯ ಮಾಡಿದ್ದೇವೆ. ಅದೇನು ಅನ್ನುವುದನ್ನು ನಮ್ಮ ಸಿನಿಮಾದ ಕತೆಯ ಹೈಲೈಟ್’ ಎನ್ನುತ್ತಾರೆ ಪ್ರಸಾದ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.