ಕಾಡಲ್ಲೊಂದು ಮಾಫಿಯಾ, ಕಾಪಾಡದ ಮಾಯಾವಿ

By Kannadaprabha NewsFirst Published Apr 30, 2022, 8:27 AM IST
Highlights

ಸಂಚಾರಿ ವಿಜಯ್‌ ನಟನೆಯ ಕೊನೆಯ ಚಿತ್ರವಿದು. ಪತ್ರಕರ್ತ ನವೀನ್‌ ಕೃಷ್ಣ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿರುವ ಹರಳು ಮಾಫಿಯಾ ಸುತ್ತ ಕತೆ ಹೇಳಿರುವ ಸಿನಿಮಾ ಇದು.

ಆರ್‌. ಕೇಶವಮೂರ್ತಿ

ಮಾಫಿಯಾ ಕತೆಗಳು ಸಿನಿಮಾ ಪರದಗೆ ಹೊಸದೇನು ಅಲ್ಲ. ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲೂ ಒಂದು ಮಾಫಿಯಾ ಇದೆ. ಅದು ವಿಶೇಷವಾಗಿದೆ. ಬಹುತೇಕರಿಗೆ ಅಂಥದ್ದೊಂದು ಮಾಫಿಯಾ ಕಾಡಿನಲ್ಲಿ ಬರುತ್ತಿದೆಯೇ ಎಂಬುದು ಗೊತ್ತೇ ಇಲ್ಲ‡. ಹೀಗೆ ಗೊತ್ತೇ ಇಲ್ಲದೆ ಹರಳು ಮಾಫಿಯಾ ಕತೆಯನ್ನು ನಿರ್ದೇಶಕ ಬಿ ನವೀನ್‌ ಕೃಷ್ಣ ತೆರೆ ಮೇಲಿಟ್ಟಿದ್ದಾರೆ. ಕರಾವಳಿ ಭಾಗದ ಸ್ವರ್ಗ ಹೆಸರಿನ ಹಳ್ಳಿಯಲ್ಲಿ ನಡೆಯುವ ಮಾಫಿಯಾ ಇದು. ಇದರಿಂದ ಕಾಡು, ಮನುಷ್ಯರ ಬದುಕು ಹೇಗೆ ನಾಶ ಆಗುತ್ತಿದೆ ಎಂದು ಈ ಚಿತ್ರ ಪತ್ತೆ ಮಾಡುವ ಪ್ರಯತ್ನ ಮಾಡುತ್ತದೆ.

ತಾರಾಗಣ: ಸಂಚಾರಿ ವಿಜಯ್‌, ಚಕ್ರವರ್ತಿ ಚಂದ್ರಚೂಡ್‌, ಅನನ್ಯ ಶೆಟ್ಟಿ

ನಿರ್ದೇಶನ: ಬಿ ನವೀನ್‌ ಕೃಷ್ಣ

ರೇಟಿಂಗ್‌: 2

ಕರಾವಳಿ ಭಾಗದ ಕಾಡಿನಲ್ಲಿ ಹರಳು ಮಾಫಿಯಾ ನಡೆಯತ್ತಿದೆ. ಇದರ ಹಿಂದೆ ರಾಜಕಾರಣಿಗಳು ಇದ್ದಾರೆ. ಇದರಿಂದ ಕಾಡು ನಾಶ ಆಗುತ್ತಿದೆ. ಕೊಲೆಗಳಾಗುತ್ತಿವೆ ಎನ್ನುವ ಮಾಹಿತಿಯನ್ನೇ ನಂಬಿಕೊಂಡು ಇಡೀ ಸಿನಿಮಾ ಸುತ್ತಿದ್ದಾರೆ. ಸತ್ವ ಇಲ್ಲದ ಚಿತ್ರಕತೆ, ಬೇಡದಿದ್ದ ದೃಶ್ಯಗಳು, ನೆನಪಿಸಿಕೊಳ್ಳುವುದಕ್ಕೆ ಕಷ್ಟವಾಗುವ ಸಂಭಾಷಣೆಗಳು, ಗೊತ್ತು ಗುರಿ ಇಲ್ಲದೆ ಸಾಗುವ ಕತೆ ಎಂಬ ಮಾಹಿತಿಗಳು... ಇವಿಷ್ಟು‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ಹೇಗೆ ಬೇಕೋ ಹಾಗೆ ಮೇಳೈಸಿವೆ. ಸಿಗುವ ಕುತೂಹಲಕಾರಿ ಮಾಹಿತಿಗಳನ್ನು ಕತೆಯಾಗಿಸುವ, ಆ ಕತೆಗೆ ಚಿತ್ರಕಥೆಯನ್ನು ರೂಪಿಸುವ, ಆ ಚಿತ್ರಕಥೆಗೆ ತಕ್ಕಂತೆ ಪಾತ್ರಧಾರಿಗಳನ್ನು ಕಟ್ಟಿಕೊಂಡುವ ಯಾವ ತಯಾರಿಯೂ ಇಲ್ಲದೆ ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂಬುದು ಈ ಚಿತ್ರ ಅತ್ಯುತ್ತಮ ಉದಾಹರಣೆ.

Raaji Film Review: ಅಂತಃಕರಣದ ಹೆಣ್ಣೋಟ

ಹರಳು ಮಾಫಿಯಾ ಕತೆ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದು. ಅದನ್ನು ತುಂಬಾ ಚೆನ್ನಾಗಿ ಹೇಳುವ ಅವಕಾಶವನ್ನು ಮಿಸ್‌ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಈ ಕುರಿತು ಬರುವ ಕವರ್‌ ಸ್ಟೋರಿ ಸುದ್ದಿಯೇ ಇಡೀ ಚಿತ್ರದ ಕುತೂಹಲ ಕೇಂದ್ರಬಿಂದು. ಅದೇ ರೀತಿ ಅಕ್ಕಿ ಕದ್ದವನನ್ನು ಮರಕ್ಕೆ ಕಟ್ಟಿಹೊಡೆದು ಸಾಯಿಸಿದ ನೈಜ ಘಟನೆಯೂ ಸಿನಿಮಾದಲ್ಲಿ ಬರುತ್ತದೆ. ಪ್ರತಿಯೊಬ್ಬರನ್ನು ದಹನ ಮಾಡುವಾಗ ಇರುವೆ ಪಾತ್ರಧಾರಿ ಹೇಳುವ ಮಾತುಗಳು, ಪಾತ್ರಧಾರಿಗಳಿಗೆ ಇಟ್ಟಕಿವಿ, ಸಕ್ಕರೆ, ಇರುವೆ ಎನ್ನುವ ಹೆಸರುಗಳು ಚಿತ್ರದಲ್ಲಿ ಕಂಡುಬರುವ ಹೊಸತನಗಳು. ನಟನೆಯಲ್ಲಿ ಸಂಚಾರಿ ವಿಜಯ್‌ ನೆನಪಿನಲ್ಲಿ ಉಳಿಯುತ್ತಾರೆ.

click me!