Ombatthane Dikku Film Review: ಸಿರಿತನ ಕನಸಿಗೆ ಬೇಟೆಗಾರನ ಬಾಣ

By Kannadaprabha NewsFirst Published Jan 29, 2022, 9:02 AM IST
Highlights

ಕಳ್ಳನೊಳಗೆ ಮಾನವೀಯತೆ ಹುಟ್ಟಿಕೊಳ್ಳುತ್ತದೆ, ದಡ್ಡನೊಳಗೆ ಅಪರಿಮಿತವಾದ ಸ್ನೇಹ ಹುಟ್ಟುತ್ತದೆ. ಮಾನವೀಯತೆ ಮತ್ತು ಸ್ನೇಹ ಜತೆಯಾಗುತ್ತಿರುವಾಗಲೇ ಬಾಣ ಹಿಡಿದ ಬೇಟೆಗಾರ ಕೊಲ್ಲುವುದಕ್ಕಾಗಿಯೇ ಆ ದಿಕ್ಕಿನಿಂದ ಹೊರಟಿದ್ದಾನೆ. 

ಆರ್ ಕೇಶವಮೂರ್ತಿ

ನಿರ್ದೇಶಕ ದಯಾಳ್ ಪದ್ಮನಾಭನ್ (Dayal Padmanabhan) ಅವರು ಕತೆಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಈಗೀಗ ತುಂಬಾ ಬದಲಾಗುತ್ತಿದ್ದಾರೆ ಎಂಬುದಕ್ಕೆ ‘ಒಂಭತ್ತನೇ ದಿಕ್ಕು’ (Ombatthane Dikku) ಹೊಸ ಸೇರ್ಪಡೆ. ಅವರು ಕತೆ ವಿಚಾರದಲ್ಲಿ ಗಾಳಿಪಟ ಹಾರಿಸಲ್ಲ, ಸರ್ಕಸ್ ತೋರಿಸಲ್ಲ ಎಂಬುದಕ್ಕೆ ‘ಹಗ್ಗದ ಕೊನೆ’, ‘ಆರ್ಟಿಸ್ಟ್’, ‘ಆ ಕರಾಳ ರಾತ್ರಿ’ ಚಿತ್ರಗಳೇ ಸಾಕ್ಷಿ. 

ಈಗ ಪ್ರೇಕ್ಷಕರ ಮುಂದೆ ಬಂದಿರುವ ‘ಒಂಭತ್ತನೇ ದಿಕ್ಕು’ ಅದೇ ರೀತಿಯ ಕಂಟೆಂಟ್‌ಬೇಸ್ ಸಿನಿಮಾ. ಈ ಪೈಕಿ ಚಿತ್ರದಲ್ಲಿ ಬರುವ ಒಬ್ಬ ಕಳ್ಳ ಮತ್ತು ದಡ್ಡನ ಕತೆ ಹೇಳುವ ಹಿರಿಯ ನಟ ಅಶೋಕ್ (Ashok) ಅವರ ಪಾತ್ರ ಕಂಡು ಕ್ಷಣವಾದರೂ ಭಾವುಕರಾಗುತ್ತೀರಿ. ಕಳ್ಳನೊಳಗೆ ಮಾನವೀಯತೆ ಹುಟ್ಟಿಕೊಳ್ಳುತ್ತದೆ, ದಡ್ಡನೊಳಗೆ ಅಪರಿಮಿತವಾದ ಸ್ನೇಹ ಹುಟ್ಟುತ್ತದೆ. 

ಚಿತ್ರ: ಒಂಬತ್ತನೇ ದಿಕ್ಕು

ತಾರಾಗಣ: ಯೋಗಿ, ಅದಿತಿ ಪ್ರಭುದೇವ, ಸಾಯಿಕುಮಾರ್, ಪ್ರಶಾಂತ್ ಸಿದ್ದಿ, ರಮೇಶ್ ಭಟ್, ಅಶೋಕ್

ನಿರ್ದೇಶನ: ದಯಾಳ್ ಪದ್ಮನಾಭನ್

ನಿರ್ಮಾಣ: ಕೆ9 ಸ್ಟುಡಿಯೋಸ್

ಮಾನವೀಯತೆ ಮತ್ತು ಸ್ನೇಹ ಜತೆಯಾಗುತ್ತಿರುವಾಗಲೇ ಬಾಣ ಹಿಡಿದ ಬೇಟೆಗಾರ ಕೊಲ್ಲುವುದಕ್ಕಾಗಿಯೇ ಆ ದಿಕ್ಕಿನಿಂದ ಹೊರಟಿದ್ದಾನೆ. ಬದುಕಿಲಿಕ್ಕಾಗಿಯೇ ತುತ್ತಿನ ಚೀಲ ಹೊತ್ತ ಹಕ್ಕಿಯೊಂದು ಈ ದಿಕ್ಕಿನಿಂದ ಹೊರಟಿದೆ. ಸಾವು ಮತ್ತು ಬದುಕು, ಹಸಿವು ಮತ್ತು ಬೇಟೆ ಒಮ್ಮೆ ಮುಖಾಮುಖಿ ಆದರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತರ ಸರಳವಾಗಿದ್ದರೂ ಅದನ್ನು ಎಷ್ಟು ಆಸಕ್ತಿಕರ ಹಾಗೂ ಕುತೂಹಲಕಾರಿಯಾಗಿ ತೆರೆ ಮೇಲೆ ನಿರೂಪಿಸಬಹುದೋ ಅಷ್ಟೂ ಅಚ್ಚುಕಟ್ಟಾಗಿ ದಯಾಳ್ ಪದ್ಮನಾಭನ್ ಕಟ್ಟಿಕೊಟ್ಟಿದ್ದಾರೆ.

ಲೂಸ್ ಮಾದ ಯೋಗೇಶ್‌ 'ಒಂಬತ್ತನೇ ದಿಕ್ಕು' ಟ್ರೇಲರ್ ರಿಲೀಸ್: ಪುನೀತ್‌ಗೆ ಅರ್ಪಣೆ

6 ಪಾತ್ರಗಳು, 1 ಬ್ಯಾಗಿನ ಮೂಲಕ ಇಡೀ ಚಿತ್ರದ ಕತೆಯನ್ನು ಹೇಳುವಾಗ ಬ್ಯಾಗ್‌ನೊಳಗೇನಿದೆ ಎಂಬ ಸುಳಿವು ಬಿಟ್ಟುಕೊಡಲ್ಲ. ಇದೇ ಚಿತ್ರದ ಪ್ಲಸ್ ಪಾಯಿಂಟ್. ಸಾಯಿಕುಮಾರ್ (Sai Kumar), ಅದಿತಿ ಪ್ರಭುದೇವ (Aditi Prabhudeva), ಸಂಪತ್ (Sampath), ಯೋಗಿ (Loose Mada Yogi), ಪ್ರಶಾಂತ್ ಸಿದ್ದಿ, ರಮೇಶ್ ಭಟ್, ಅಶೋಕ್- ತಮ್ಮ ತಮ್ಮ ಪಾತ್ರಗಳಲ್ಲಿ ಜೀವಿಸುತ್ತಾರೆ. ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ, ರಾಕೇಶ್ ಛಾಯಾಗ್ರಹಣದ ಕಣ್ಣು ಪಾತ್ರಗಳನ್ನು ಸಾಧ್ಯವಾದಷ್ಟು ಪ್ರೇಕ್ಷಕನಿಗೆ ಸನಿಹಗೊಳಿಸುತ್ತವೆ. 

click me!