ಚಿತ್ರ ವಿಮರ್ಶೆ: ನಾನು ಮತ್ತು ಗುಂಡ

By Suvarna NewsFirst Published Jan 25, 2020, 8:38 AM IST
Highlights

ಮನುಷ್ಯನೊಟ್ಟಿಗೆ ಬದುಕುವ ಸಾಕು ಪ್ರಾಣಿಗಳಲ್ಲಿ ತುಂಬಾ ವಿಶೇಷ ಎನಿಸುವ ಪ್ರಾಣಿ ನಾಯಿ. ಅದರ ಸೂಕ್ಷ್ಮ ಗ್ರಹಿಕೆ, ಸಾಕಿದವರನ್ನು ಗುರುತಿಸುವ ಪರಿ, ಕಷ್ಟದ ಸಂದರ್ಭಗಳಲ್ಲಿ ಕಾಪಾಡುವ ಅದರ ಗುಣ ಎಲ್ಲವೂ ಅದರ ನಿಯತ್ತಿನ ಪ್ರತಿರೂಪ. ಅಂತಹದೇ ಒಂದು ನಾಯಿಯ ಕತೆಯ ಮನಕಲುಕವ ದೃಶ್ಯರೂಪವೇ ‘ನಾನು ಮತ್ತು ಗುಂಡ’.

ದೇಶಾದ್ರಿ ಹೊಸ್ಮನೆ

ಒಂದೇ ಮಾತಿನಲ್ಲಿ ಹೇಳುವುದಾದರೆ ಕಥಾ ನಾಯಕ ಶಂಕ್ರ ಮತ್ತು ಆತನ ಸಾಕು ನಾಯಿ ಗುಂಡನ ನಡುವಿನ ಭಾವನಾತ್ಮಕ ಕತೆ ಇದು. ಪ್ರಾಣಿ ಪ್ರಿಯರಿಗೆ ಹಾಗೂ ನಾಯಿಯ ನಿಯತ್ತು ಗೊತ್ತಿರುವವರಿಗೆ ಇದು ತುಂಬಾ ಹಿಡಿಸುವ, ಕಾಡಿಸುವ ಸಿನಿಮಾ. ಸಾಕುನಾಯಿಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಹಚ್ಚಿಕೊಂಡವರಿಗೆ ಹೃದಯಸ್ಪರ್ಶಿ ಚಿತ್ರವೂ ಹೌದು. ಹಾಸ್ಯದೊಂದಿಗೆ ಶುರುವಾಗುವ ಕತೆ ಹಲವು ತಿರುವುಗಳ ಮೂಲಕ ನೋಡುಗರನ್ನು ಭಾವುಕತೆಯ ಮಡುವಿನಲ್ಲಿ ಮುಳುಗಿಸುತ್ತದೆ. ಅದು ಈ ಸಿನಿಮಾದ ಬಹು ದೊಡ್ಡ ಶಕ್ತಿ.

ಚಿತ್ರ ವಿಮರ್ಶೆ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌

ನಿರೂಪಣೆಯಲ್ಲಿ ನಿರ್ದೇಶಕರದ್ದು ತಾಳಿದವನು ಬಾಳಿಯಾನು ಎನ್ನುವ ಸೂತ್ರ. ಅಷ್ಟಾಗಿಯೂ ಅದು ಪ್ರೇಕ್ಷಕರನ್ನು ಕೊನೆ ತನಕ ಹಿಡಿದಿಟ್ಟುಕೊಳ್ಳುವುದು ಗುಂಡ ಮತ್ತು ಶಂಕ್ರನ ಭಾವನಾತ್ಮಕ ಸಂಬಂಧದ ಸನ್ನಿವೇಶಗಳ ಮೂಲಕ. ಅವು ಪ್ರೇಕ್ಷಕನನ್ನು ಕೊನೆತನಕ ಕತೆಯೊಳಗಡೆ ಪ್ರವೇಶಿಸುವಂತೆ ಪ್ರಭಾವಿಸಿಕೊಳ್ಳುವುದು ವಿಶೇಷ. ಆ ಮಟ್ಟಿಗೆ ನಿರ್ದೇಶಕ ಶ್ರೀನಿವಾಸ್‌ ತಿಮ್ಮಯ್ಯಗೆ ತಮ್ಮ ಮೊದಲ ಪ್ರಯತ್ನದಲ್ಲಿ ಪ್ರೇಕ್ಷಕನಿಗೆ ಒಂದೊಳ್ಳೆಯ ಸಿನಿಮಾ ಕೊಟ್ಟ ಕ್ರೆಡಿಟ್‌ ಸಲ್ಲುತ್ತದೆ.

ಚಿತ್ರ ವಿಮರ್ಶೆ: ಶ್ರೀ ಭರತ ಬಾಹುಬಲಿ

ಇದೇನು ಅಂತಹ ವಿಶೇಷ ಕತೆಯಲ್ಲ. ಇದೊಂದು ಸಿಂಪಲ್‌ ಕತೆಯೆ. ಲವ್‌ ಮ್ಯಾರೇಜ್‌ ಆಗಿ ಮಕ್ಕಳಾಗದ ಕೊರಗಿನಲ್ಲಿರುವ ಆಟೋ ಡ್ರೈವರ್‌ ಶಂಕ್ರನಿಗೆ ಒಮ್ಮೆ ಆಕಸ್ಮಿಕವಾಗಿ ಸಿಕ್ಕಿದ್ದು ಈ ನಾಯಿ. ಅದರ ಹೆಸರು ಗುಂಡ. ಅದರ ಮೇಲೆ ಆತನಿಗೆ ಅತೀವ ಪ್ರೀತಿ. ಮಕ್ಕಳಿಲ್ಲದೆ ಕೊರಗು ಕರಗಿ ಹೋಗುವುದಕ್ಕೂ ಆ ನಾಯಿಯೇ ಕಾರಣವಾಗುತ್ತೆ. ಆದರೆ ಅದು ಶಂಕ್ರನ ಹೆಂಡತಿ ಕವಿತಾಗೆ ಕೋಪ ತರಿಸುತ್ತದೆ. ಗಂಡನಿಗೆ ನಾಯಿ ಮೇಲಿರುವ ಪ್ರೀತಿ ತನ್ನ ಮೇಲಿಲ್ಲ ಅಂತ ಮುನಿಸು. ಕೊನೆಗೊಂದು ದಿನ ‘ಈ ಮನೆಯಲ್ಲಿ ನಾನಿರಬೇಕು, ಇಲ್ಲವೇ ಆ ನಾಯಿ ಇರಬೇಕು, ಡಿಸೈಡ್‌ ಮಾಡಿ ಹೇಳು’ ಅಂತ ಸಿಟ್ಟು ಹೊರ ಹಾಕಿ ತವರೂರಿಗೆ ಮುಖ ಮಾಡುತ್ತಾಳೆ. ಅಲ್ಲಿಂದ ಗುಂಡ ಮತ್ತು ಶಂಕ್ರನ ಕತೆಗೆ ಇನ್ನೊಂದು ಟ್ವಿಸ್ಟ್‌.

ಚಿತ್ರ ವಿಮರ್ಶೆ: ಅವನೇ ಶ್ರೀಮನ್ನಾರಾಯಣ

ಇಲ್ಲಿ ಶಿವರಾಜ್‌ ಕೆ.ಆರ್‌. ಪೇಟೆ ಮತ್ತು ಮತ್ತು ನಾಯಿ(ಸಿಂಬಾ) ಇಬ್ಬರು ಹೀರೋ. ಅದರಲ್ಲೂ ಮೂಕ ಪ್ರಾಣಿ ನಾಯಿಯನ್ನು ಪಾತ್ರಕ್ಕೆ ತಕ್ಕಂತೆ ಪಳಗಿಸಿಕೊಳ್ಳುತ್ತ, ಅದರೊಂದಿಗೆ ಮಾತನಾಡುತ್ತಾ ಅದಕ್ಕಾಗಿ ಮಿಡಿಯುವ ಶಂಕ್ರನ ಸೆಂಟಿಮೆಂಟ್‌ ಜರ್ನಿಯೇ ಪ್ರೇಕ್ಷಕರ ಮನ ಕರಗುವಂತೆ ಮಾಡುತ್ತದೆ. ಹಾಸ್ಯಕ್ಕಿಂತ ಭಾವುಕತೆಯಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾರೆ ಶಿವರಾಜ್‌. ಒಂದೊಳ್ಳೆಯ ಕತೆಯ ಮೂಲಕ ಇದೇ ಮೊದಲು ಅವರು ಹೀರೋ ಆಗಿ ಬಂದಿದ್ದು ಇಲ್ಲಿ ಸಾರ್ಥಕ ಎನಿಸಿದೆ. ನಾಯಿ( ಸಿಂಬಾ) ಕೂಡ ಅದ್ಭುತವಾಗಿ ಕಾಣಿಸಿಕೊಂಡಿದೆ. ಮನ ಕಲುಕುವ ಸನ್ನಿವೇಶಗಳಲ್ಲಿ ನಾಯಿ ತೋರುವ ಮೂಕ ರೋದನೆ ಪ್ರೇಕ್ಷಕನ ಕಣ್ಣಾಲಿ ಒದ್ದೆ ಆಗಿಸುತ್ತದೆ. ಗೋವಿಂದೇಗೌಡ ಅವರ ಕಾಮಿಡಿ ಸೆನ್ಸ್‌, ಭಾವುಕ ನಟನೆ ಎಲ್ಲವೂ ಅಚ್ಚಕಟ್ಟು. ಸಂಗೀತ, ಕ್ಯಾಮರಾ ಎಲ್ಲವೂ ತಕ್ಕಮಟ್ಟಿಗೆ ಸಾಥ್‌ ನೀಡಿದ್ದು ಕಾಡಿಸುವ ಕತೆಯ ತೀವ್ರತೆಯನ್ನು ಇನ್ನಷ್ಟುಹೆಚ್ಚಿಸಿದೆ.

click me!