
ಪ್ರಿಯಾ ಕೆರ್ವಾಶೆ
ಇದೊಂದು ಕಥೆಯ ಹಂಗಿನೊಳಗೆ ಸಿಲುಕದೆ ಅನುಭವವಾಗಿ ಉಳಿಯುವ ಸಿನಿಮಾ. ಗಡಿಯಾರವೇ ಚಲಿಸದ ಒಂದೂರು ಅನ್ನುವ ಕಲ್ಪನೆಯೇ ಚಂದ. ಇದರಲ್ಲಿ ಹೈಡ್ರಾಮಾಗಳಾಗಲೀ, ಏರಿಳಿತಗಳಾಗಲೀ ಇಲ್ಲ. ಜೀವನೋತ್ಸಾಹದಿಂದ ಕೂಡಿದ ಹಳ್ಳಿ ಬದುಕಿನ ಚೆಲುವಿದೆ. ನಿರೂಪಣೆ, ಕಥೆ ಫೋಕಸ್ಡ್ ಆಗಿ ಇದ್ದಿದ್ದರೆ ಇದು ಒಂದೊಳ್ಳೆ ಸಿನಿಮಾವಾಗುತ್ತಿತ್ತು. ಮುಸ್ಸಂಜೆ ದಾಟಿ ಕತ್ತಲಾಗುವ ಹೊತ್ತಿಗೆ ಆ ಕೆಂಪು ಬಸ್ ಒಂದೂರಲ್ಲಿ ಸ್ಟಾಪ್ ಆಗುತ್ತೆ.
ಕಂಡಕ್ಟರ್ ಬೇಡ ಅಂದರೂ ಕೇಳದೇ ಬಸ್ ಇಳಿದು ಟೀ ಅಂಗಡಿಗೆ ಹೋಗುವ ಪ್ರಯಾಣಿಕನೊಬ್ಬನಿಂದ ಆ ಊರಿನ ಕಥೆ ಶುರು. ಆ ವಿಲಕ್ಷಣ ಗ್ರಾಮದ ಹೆಸರು ‘ಇದ್ನೋಡ್’. ಅಲ್ಲಿ ಗಡಿಯಾರವೇ ಚಲಿಸೋದಿಲ್ಲ. ಸಮಯದ ಹಿಂದೆ ಓಡುವ ಇಂದಿನ ಜಗತ್ತಿನಲ್ಲಿ ಸಮಯದ ಹಂಗೇ ಇಲ್ಲದೆ ಬದುಕುವ ಊರು ಹೇಗಿರುತ್ತದೆ, ಅಲ್ಲಿ ಗಡಿಯಾರ ಯಾಕೆ ಚಲಿಸೋದಿಲ್ಲ, ಅಲ್ಲಿಗೆ ಬಂದಿಳಿದ ಆ ಸಂಶಯಾತ್ಮಕ ವ್ಯಕ್ತಿ ಯಾರು, ಈ ವಿಸ್ಮಯ ಹೊರಜಗತ್ತಿನಿಂದ ಯಾಕೆ ಗೌಪ್ಯವಾಗಿದೆ ಅನ್ನುವುದು ಸಿನಿಮಾದ ತಿರುಳು.
ನಿರ್ದೇಶಕ : ಸುಜಯ್ ಶಾಸ್ತ್ರಿ
ತಾರಾಗಣ : ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ತಾರಾ, ಮಂಜು ಪಾವಗಡ, ರಾಕೇಶ್ ಪೂಜಾರಿ
ನಿರ್ದೇಶಕ ಸುಜಯ್ ಶಾಸ್ತ್ರಿ ಸಿನಿಮಾ ಮಾಡುವಾಗ ಪಾತ್ರಸೃಷ್ಟಿಯಲ್ಲಿ ಧಾರಾಳತನ ತೋರಿದ್ದಾರೆ. ಹೀಗಾಗಿ ಕಥೆಗೆ ಸಂಬಂಧವೇ ಇಲ್ಲದ ಒಂದಿಷ್ಟು ಪಾತ್ರಗಳು, ಸನ್ನಿವೇಶಗಳು ಧುತ್ತೆಂದು ಬಂದು ಬೆಚ್ಚಿ ಬೀಳಿಸುತ್ತವೆ. ಕಾಲಪುರುಷನ ಗೆಟಪ್ನಲ್ಲಿ ವಿಂಟೇಜ್ ಕಾರಲ್ಲಿ ಬಂದಿಳಿಯುವ ದತ್ತಣ್ಣ ಪಾತ್ರ ಅವುಗಳಲ್ಲೊಂದು. ಆರಂಭದಲ್ಲಿ ಐತಿಹಾಸಿಕ ವ್ಯಕ್ತಿ ಭುಜಬಲನ ಪ್ರಸಂಗ ಬರುತ್ತದೆ. ಆ ಪ್ರಸಂಗದ ಪ್ರಸ್ತುತತೆ ಏನು ಅನ್ನುವುದು ತಿಳಿಯುವುದಿಲ್ಲ. ಸಿನಿಮಾ ಕಾನ್ಸೆಪ್ಟ್ನಲ್ಲಿ ಒಂದೊಳ್ಳೆ ಹೊಳಹು ಇದೆ. ಆದರೆ ಇದನ್ನು ನಿರ್ದೇಶಕರು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವ ಸಾಧ್ಯತೆ ಇತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.