
ಈ ಸಿನಿಮಾದ ಒಂದು ಸನ್ನಿವೇಶದಲ್ಲಿ ಸುಚೇಂದ್ರ ಪ್ರಸಾದ್ ನಿರ್ವಹಿಸಿದ ಪಾತ್ರವೊಂದಿದೆ. ಕ್ಷಣಕ್ಕೊಮ್ಮೆ ಬೋರ್ನ್ವೀಟಾ ಕುಡಿಯುತ್ತಾ, ಕನ್ಫ್ಯೂಷನ್, ಗಡಿಬಿಡಿ, ಆತಂಕದಲ್ಲಿ ಇತರ ಪಾತ್ರಗಳನ್ನು, ಪ್ರೇಕ್ಷಕನನ್ನು ವಿಹ್ವಲಗೊಳ್ಳುವಂತೆ ಮಾಡುತ್ತದೆ. ಕೊನೆಗೂ ಆ ಪಾತ್ರ ಯಾಕೆ ಬಂತು ಅನ್ನೋದು ಯಾರಿಗೂ ಗೊತ್ತಾಗಲ್ಲ. ಸಿನಿಮಾದ ಚಿತ್ರಕಥೆಯೂ ಪ್ರೇಕ್ಷಕನ ಮೇಲೆ ಇಂಥಾದ್ದೊಂದು ಪರಿಣಾಮ ಬೀರುತ್ತದೆ. ಈ ಸಿನಿಮಾದ ನಾಯಕ ಆಕಾಶ್ ಒಬ್ಬ ಜನಾನುರಾಗಿ ವೈದ್ಯ.
ಆತ ಪ್ರೇಕ್ಷಕನಿಗೆ ಎದುರಾಗುವುದು ಮೂರು ಹೊತ್ತೂ ಕುಡಿದು ತೂರಾಡುವ ಭಗ್ನಪ್ರೇಮಿಯಾಗಿ. ಇಂಥಾ ಅವಸ್ಥೆಯಲ್ಲಿ ನಾಯಕನ ಗ್ರಹಗತಿಗಳೆಲ್ಲ ಉಲ್ಟಾ ಹೊಡೆದು ಇಡೀ ಪರಿಸ್ಥಿತಿ ಆತನ ವಿರುದ್ಧ ತಿರುಗುತ್ತ ಹೋಗುತ್ತದೆ. ನಾಯಕನಿಗೆ ಕುಡಿತವೇ ಪರ್ಮನೆಂಟ್ ಆಗುತ್ತದೆ. ಇನ್ನೊಂದೆಡೆ ವಿಲಕ್ಷಣ ಪೊಲೀಸ್ ಅಧಿಕಾರಿ ಯುವರಾಜ್ ಒಂಟಿಮನಿ ಇದ್ದಾರೆ. ಕುಹಕ, ನಗು, ಗಾಂಭೀರ್ಯ ಅವರ ವ್ಯಕ್ತಿತ್ವದ ಟ್ರಂಪ್ ಕಾರ್ಡ್. ರಮೇಶ್ ಇಂದಿರಾ ಅವರನ್ನು ಈ ಪಾತ್ರದಲ್ಲಿ ನೋಡುವುದೇ ಮಜಾ.
ಚಿತ್ರ : ಕ್ಯಾಲೆಂಡರ್
ನಿರ್ದೇಶನ : ನವೀನ್ ಶಕ್ತಿ
ತಾರಾಗಣ: ಆದರ್ಶ ಗುಂಡುರಾಜ್, ರಮೇಶ್ ಇಂದಿರಾ, ಸುಶ್ಮಿತಾ ನಾಯಕ್, ನಿವಿಷ್ಕಾ ಪಾಟೀಲ್
ಒಂದು ಕಡೆ ಇನ್ವೆಸ್ಟಿಗೇಶನ್, ಇನ್ನೊಂದೆಡೆ ತಲೆ ತಲೆ ಜಜ್ಜಿಕೊಂಡರೂ ಅರ್ಥವಾಗದ ನಾಯಕನ ನಡೆ ಇವೆಲ್ಲವೂ ಪ್ರೇಕ್ಷಕನನ್ನು ಭೀತಗೊಳಿಸುತ್ತದೆ. ವೈದ್ಯನೂ ಆಗಿರುವ ನಾಯಕ ಕ್ಲೈಮ್ಯಾಕ್ಸ್ನಲ್ಲಿ ಪ್ರೇಕ್ಷಕನನ್ನು ರಿಲ್ಯಾಕ್ಸ್ ಮಾಡುತ್ತಾನೆ. ಶೇ.70ರಷ್ಟು ಹೆಣ್ಣುಮಕ್ಕಳನ್ನು ಕಾಡುವ ಸೂಕ್ಷ್ಮ ಸಮಸ್ಯೆಯೊಂದನ್ನು ಬೆಳಕಿಗೆ ತಂದು ಆರಂಭದಿಂದ ಅಲ್ಲಿಯವರೆಗೂ ಕ್ರಿಯೇಟ್ ಆದ ಟೆನ್ಶನ್ಗೆ ಮುಕ್ತಿ ನೀಡುತ್ತಾನೆ. ಸಿನಿಮಾ ಕಥೆಯಾಗಿ ಎಷ್ಟು ನಿಲ್ಲುತ್ತದೋ ಗೊತ್ತಿಲ್ಲ, ಆದರೆ ಇದು ಎತ್ತಿರುವ ಸಮಸ್ಯೆ ಪ್ರಸ್ತುತವಾದುದು. ಇದಕ್ಕಾಗಿ ಸಿನಿಮಾ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.