
-ಪ್ರಿಯಾ ಕೆರ್ವಾಶೆ
ಚಿತ್ರ : ವೀರ ಕಂಬಳ
ನಿರ್ದೇಶನ : ರಾಜೇಂದ್ರ ಸಿಂಗ್ ಬಾಬು
ತಾರಾಗಣ: ಸ್ವರಾಜ್ ಶೆಟ್ಟಿ, ನವೀನ್ ಡಿ. ಪಡೀಲ್, ಗೋಪಿನಾಥ್ ಭಟ್, ಶ್ರೀನಿವಾಸ ಗೌಡ, ಆದಿತ್ಯ, ಗೀತಾ ಸುರತ್ಕಲ್, ಉಷಾ ಭಂಡಾರಿ
‘ಕಂಬಳ ಎಂಬುದು ನಮ್ಮ ಪಾಲಿಗೆ ಕೋಣಗಳ ರೇಸ್ ಅಷ್ಟೇ ಅಲ್ಲ, ನಮ್ಮ ಜೀವನದ ಭಾಗ. ಗದ್ದೆಯ ನೀರು ನಿಮ್ಮ ಕಣ್ಣಿಗೆ ಕೊಚ್ಚೆ ಆಗಿರಬಹುದು, ನಮ್ಮ ಪಾಲಿಗದು ತೀರ್ಥ, ಗದ್ದೆಗೆ ಕಾಲಿಡುವ ಮೊದಲು ಎರಡು ತೊಟ್ಟು ನೀರನ್ನು ಬಾಯಿಗೆ ಹಾಕಿಯೇ ಗದ್ದೆಗಿಳಿಯುತ್ತೇವೆ!’
ಕಂಬಳಕ್ಕೆ ಸ್ಟೇ ತಂದಾಗ ಕೋರ್ಟಿನಲ್ಲಿ ಸೀನಿಯರ್ ಲಾಯರ್ ಸಂಪತ್ (ಪ್ರಕಾಶ್ ರೈ) ಭಾರೀ ಅಭಿಮಾನದಿಂದ ಹೇಳುವ ಡೈಲಾಗ್ ಇದು. ಇಡೀ ಸಿನಿಮಾ ಕಂಬಳ ಎಂಬ ಎಮೋಶನ್ನ ತಳಹದಿಯಲ್ಲೇ ಕಟ್ಟಲ್ಪಟ್ಟಿದೆ.
ತುಳುವ ಮನೆತನಗಳಾದ ಮಂಜೊಟ್ಟಿಗುತ್ತು ಮತ್ತು ಮಿತ್ತಬೈಲು ನಡುವೆ ವೈಷಮ್ಯ ಭುಗಿಲೆದ್ದು, ಈ ದ್ವೇಷದಾಟಕ್ಕೆ ಕಂಬಳ ಬಲಿಯಾಗುತ್ತದೆ. ಇದರಿಂದ ಉಂಟಾದ ನಿರ್ವಾತ ಹಲವು ದಶಕಗಳವರೆಗೆ ಮುಂದುವರಿದು ಮತ್ತೆ ಈ ಕ್ರೀಡೆಗೆ ಮರುಜೀವ ಬರುವವರೆಗಿನ ಅಗಾಧ ಕ್ಯಾನ್ವಾಸ್ ಸಿನಿಮಾದಲ್ಲಿದೆ.
ಕಂಬಳದ ಹಿನ್ನೆಲೆಯಲ್ಲಿ ಕೋಣ ಓಡಿಸುವವರ ಕಥನ, ಕೋಣದ ಧಣಿಗಳ ಮನಸ್ಥಿತಿ, ರಾಜಕೀಯ ಮೇಲಾಟ, ದ್ವೇಷ, ಪ್ರೇಮ, ಸನ್ನಿವೇಶಕ್ಕೆ ತಕ್ಕಂಥ ಹಾಸ್ಯ ಇತ್ಯಾದಿಗಳಿವೆ. ಕರ್ಣನ ಪಾತ್ರದಲ್ಲಿ ನವೀನ್ ಡಿ ಪಡೀಲ್, ನೆಗೆಟಿವ್ ಶೇಡ್ನ ರುಕ್ಮಯನಾಗಿ ಮೈಮ್ ರಮೇಶ್, ಆದಿತ್ಯ, ಸ್ವರಾಜ್ ಶೆಟ್ಟಿ, ದಿವ್ಯಾ, ಗೋಪಿನಾಥ್ ಭಟ್, ಗೀತಾ ಸುರತ್ಕಲ್, ಉಷಾ ಭಂಡಾರಿ ಸೇರಿದಂತೆ ಎಲ್ಲರೂ ಸೊಗಸಾದ ಅಭಿನಯ ನೀಡಿದ್ದಾರೆ.
ಕಥೆ ಬಹಳ ವಿಸ್ತಾರಕ್ಕೆ ಚಾಚಿರುವ ಕಾರಣ ಆಳಕ್ಕಿಳಿಯುವುದು ಸಾಧ್ಯವಾಗಿಲ್ಲ. ಏಕತಾನತೆ ಬಾಧಿಸುತ್ತದೆ. ಅನಾವಶ್ಯಕ ಹಾಡು, ಪ್ರೇಮದ ದೃಶ್ಯಗಳಿವೆ. ಇಷ್ಟಾದರೂ ತುಳುನಾಡ ಸೊಗಡನ್ನು ಕಟ್ಟಿಕೊಡುವಲ್ಲಿ ಸಿನಿಮಾ ಸಫಲವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.