Jamaligudda Review: ಜಮಾಲಿಗುಡ್ಡದ ಮರೆಯಲಾಗದ ಪ್ರೇಮ ಕತೆ

By Kannadaprabha NewsFirst Published Jan 1, 2023, 10:14 AM IST
Highlights

ಧನಂಜಯ್‌, ಅದಿತಿ ಪ್ರಭುದೇವ, ಭಾವನಾ ರಾಮಣ್ಣ, ಪ್ರಕಾಶ್‌ ಬೆಳವಾಡಿ, ಯಶ್‌ ಶೆಟ್ಟಿ, ಪ್ರಾಣ್ಯ ಅಭಿನಯಿಸಿರುವ  ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ ನೋಡಿ..

ಆರ್‌ ಕೇಶವಮೂರ್ತಿ

ಹಿರೋಶಿಮಾ... ಹೀಗೆಂದಾಗ ನಾಗಸಾಕಿಯೂ ನೆನಪಾಗುವುದು ಸಹಜ. ಹೀಗಾಗಿ ಇದು ಹಿರೋಶಿಮಾ ಮತ್ತು ನಾಗಸಾಕಿಯ ಕತೆ. ಹಾಗಂತ ಇದು ದೇಶಗಳದ್ದಲ್ಲ, ವ್ಯಕ್ತಿಗಳದ್ದು. ಮುಗ್ದ ಯುವಕ ಹಿರೋಶಿಮಾನಾದರೆ, ಕ್ರೈಮ್‌ ಅನ್ನೇ ತನ್ನ ಕೆಲಸ ಮಾಡಿಕೊಂಡಿರುವ ವ್ಯಕ್ತಿ ನಾಗಸಾಕಿ. ಇಲ್ಲಿ ನಾಗಸಾಕಿ ಸಾಯುತ್ತಾನೆ. ಹಾಗಾದರೆ ಹಿರೋಶಿಮಾ ಸಾಯಲ್ಲವೇ ಎನ್ನುವ ಪ್ರಶ್ನೆ ಮೂಡಿದರೆ ನೀವು ಸಿನಿಮಾ ನೋಡಬೇಕು. ನಾಗಸಾಕಿ ಸತ್ತು, ಹಿರೋಶಿಮಾ ಸಾಯುವ ನಡುವೆ ಒಂದು ಭಾವನಾತ್ಮಕ ಪಯಣ ಸಾಗುತ್ತದೆ. ಆ ಪಯಣ ನಮ್ಮದೇ ಜಗತ್ತಿನ ಕತೆಯಾಗುತ್ತದೆ. ಅಥವಾ ನಾವು ನೋಡಿರುವ ಮತ್ತು ಕೇಳಿರುವ ಘಟನೆ, ಸನ್ನಿವೇಶಗಳೆನಿಸುತ್ತವೆ. ಅಷ್ಟರ ಮಟ್ಟಿಗೆ ‘ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’ ಸಿನಿಮಾ ನೋಡುಗನ ಹತ್ತಿರದ ಸಂಬಂಧಿ ಆಗುತ್ತದೆ. ಇದರ ಕ್ರೆಡಿಟ್ಟು ಸಂಪೂರ್ಣವಾಗಿ ಸೇರಬೇಕಿರುವುದು ಹಿರೋಶಿಮಾ ಪಾತ್ರಧಾರಿ ಧನಂಜಯ್‌ ಹಾಗೂ ನಿರ್ದೇಶಕ ಕುಶಾಲ್‌ ಗೌಡ ಅವರಿಗೆ.

ತಾರಾಗಣ: ಧನಂಜಯ್‌, ಅದಿತಿ ಪ್ರಭುದೇವ, ಭಾವನಾ ರಾಮಣ್ಣ, ಪ್ರಕಾಶ್‌ ಬೆಳವಾಡಿ, ಯಶ್‌ ಶೆಟ್ಟಿ, ಪ್ರಾಣ್ಯ.

ನಿರ್ದೇಶನ: ಕುಶಾಲ್‌ ಗೌಡ

ರೇಟಿಂಗ್‌: 3

PADAVI POORVA REVIEW: ಟೀನ್‌ ಬದುಕಿನ ಸಿಹಿ, ಕಹಿ ಮತ್ತು ಒಗರು

ಈ ಹಿಂದೆ ಬಂದ ‘ಮಾನ್ಸೂನ್‌ ರಾಗ’ದಲ್ಲಿರುವ ಆಪ್ತತೆ, ‘ಡಾಲಿ’ಯಲ್ಲಿರುವ ಮಾಸ್‌ ಎರಡೂ ಸೇರಿದಂತೆ ಜಮಾಲಿಗುಡ್ಡ ಆಗುತ್ತದೆ ಎನ್ನಬಹುದು. ಧನಂಜಯ್‌ ಅವರು ತಣ್ಣನೆಯ ಕೌರ್ಯದ ಕತೆಗಳಿಗೆ ಹೀರೋ ಮಾತ್ರವಲ್ಲ, ಇಂಥ ಫೀಲ್‌ಗುಡ್‌ ಕತೆಗಳ ಸಾರಥಿಯೂ ಹೌದು ಎಂಬುದನ್ನು ಆಗಾಗ ಸಾಬೀತು ಮಾಡುತ್ತಲೇ ಬರುತ್ತಿದ್ದಾರೆ. ಮಳೆ, ಗುಡ್ಡ, ಹಸಿರು, ಪ್ರಯಾಣ, ಸಂಬಂಧಗಳು, ಪ್ರೀತಿ- ಪ್ರೇಮದ ತಿರುಳು ಚಿತ್ರದ ಹೈಲೈಟ್‌ಗಳು. ಯಾವ ದೃಶ್ಯ, ಪಾತ್ರಗಳಿಗೂ ಅನಗತ್ಯ ವೈಭವೀಕರಣ ಇಲ್ಲದೆ ತೀರಾ ಸಾಧಾರಣವಾಗಿ ನಿರೂಪಿಸುತ್ತ, ಇದು ಕತೆ ಕೇಂದ್ರಿತ ಸಿನಿಮಾ ಆಗಿಸುವ ನಿರ್ದೇಶಕ ಕುಶಾಲ್‌ ಗೌಡ, ನಾಯಕನನ್ನು ಪೊಲೀಸರು ಸುತ್ತುವರಿಯುವ ದೃಶ್ಯದ ಡ್ರಾಮಾ, ವಾಸ್ತವಕ್ಕೆ ಕೊಂಚ ದೂರವಾಗಿ ಚಿತ್ರೀಕರಿಸಿದ್ದಾರೆ. ಇದರ ಹೊರತಾಗಿ ‘ಜಮಾಲಿಗುಡ್ಡ’ವನ್ನು ಅಯಾಸ ಇಲ್ಲದೆ ರೋಮಾಂಚನಕಾರಿಯಾಗಿ ಹತ್ತಿ ಇಳಿಯಬಹುದು. ಬಾಬಾಬುಡಗಿರಿಯ ಕುರುವಂಜಿ ಹೂವುಗಳು, ಕೊಡಚಾದ್ರಿ ಹಾಗೂ ಕುದುರೆಮುಖದ ಹಸಿರು ನೋಡಿದಾಗ ಆಗುವ ಸಂತೋಷ, ಈ ಚಿತ್ರ ನೋಡಿದಾಗಲೂ ಸಿಗುತ್ತದೆ.

Vedha Review ವೇದನ ರೋಷ ಇಪ್ಪತ್ತು ವರುಷ

ಹಿರೋಶಿಮಾ ಬಾರ್‌ನಲ್ಲಿ ಸಪ್ಲೆಯರ್‌. ಆತನಿಗೆ ಅದೇ ಊರಿನ ಮಸಾಜ್‌ ಪಾರ್ಲಲ್‌ನಲ್ಲಿ ಕೆಲಸ ಮಾಡುವ ರುಕ್ಮಿಣಿ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಪ್ರೀತಿ ಜತೆಗೆ ಪ್ರಾಣ ಸಂಕಟವನ್ನು ತಂದುಕೊಳ್ಳುತ್ತಾನೆ. ಪ್ರೀತಿಯ ಕಾರಣಕ್ಕೆ ಹಿರೋಶಿಮಾ ಹಾಗೂ ರುಕ್ಮಿಣಿ ಊರು ಬಿಡಲು ಸಜ್ಜಾಗುತ್ತಾರೆ. ಈಗ ಪೊಲೀಸರ ಅತಿಥಿಯಾಗುತ್ತಾನೆ ಹಿರೋಶಿಮಾ. ಇತ್ತ ರುಕ್ಮಿಣಿ, ಮಸಾಜ್‌ ಪಾರ್ಲಲ್‌ ನಾಯಕಿ ಕಾಟಕ್ಕೆ ತುತ್ತಾಗುತ್ತಾಳೆ. ಜೈಲು ಸೇರುವ ಹಿರೋಶಿಮಾಗೆ ಒಬ್ಬ ಕ್ರಿಮಿನಲ್‌ ಪರಿಚಯ ಆಗುತ್ತಾನೆ. ಆತನೇ ನಾಗಸಾಕಿ. ಇಬ್ಬರು ಸೇರಿ ಜೈಲಿನಿಂದ ತಪ್ಪಿಕೊಳ್ಳುತ್ತಾರೆ. ಹೀಗೆ ತಪ್ಪಿಸಿಕೊಂಡವರಿಗೆ ಕಾರಿನ ಜತೆಗೆ ಬಾಲಕಿ ಸಿಗುತ್ತಾಳೆ. ಆ ಮಗು ಕಾರಣಕ್ಕೆ ನಾಗಸಾಕಿಯನ್ನು ಹಿರೋಶಿಮಾ ಸಾಯಿಸುತ್ತಾನೆ. ಪೊಲೀಸರ ಬೇಟೆ ಮತ್ತಷ್ಟುಚುರುಕುಗೊಳ್ಳುತ್ತದೆ. ಮತ್ತೊಂದು ಕಡೆ ಜಮಾಲಿಗುಡ್ಡದಲ್ಲಿ ಹಿರೋಶಿಮನಿಗಾಗಿ ರುಕ್ಮಿಣಿ ಕಾಯುತ್ತಿದ್ದಾಳೆ. ಇವರಿಬ್ಬರು ಒಂದಾಗುತ್ತಾರೆಯೇ, ಈಗ ದೊಡ್ಡವಳಾಗಿರುವ ಬಾಲಕಿ ಬಂಗಾರಿ ಇಬ್ಬರನ್ನು ಒಂದು ಮಾಡುತ್ತಾಳೆಯೇ ಎಂಬುದು ಚಿತ್ರದ ಮುಂದಿನ ಕತೆ.

ಅನೂಪ್‌ ಸೀಳಿನ್‌ ಹಿನ್ನೆಲೆ ಸಂಗೀತ, ಕಾರ್ತಿಕ್‌ ಅವರ ಛಾಯಾಗ್ರಾಹಣ ಚಿತ್ರದ ತಾಂತ್ರಿಕತೆಯ ಗುಣಮಟ್ಟವನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಹೆಚ್ಚು ಪಾತ್ರಗಳು ಇದ್ದರೂ ಪ್ರತಿಯೊಂದು ಪಾತ್ರವೂ ಹಾಗೆ ಬಂದು ಹೀಗೆ ಹೋದಂತೆ ಆಗುತ್ತದೆ. ಒಂದು ಕಾಲ್ಪನಿಕ ಕತೆಯನ್ನು ಎಷ್ಟುಚಿಕ್ಕದಾಗಿ, ಚೊಕ್ಕದಾಗಿ ಹೇಳಿಮುಗಿಸಬೇಕೋ ಅಷ್ಟೇ ಹೇಳಿ ಮುಗಿಸುತ್ತಾರೆ ನಿರ್ದೇಶಕರು. ಹೀಗಾಗಿ ನಿರೂಪಣೆಯ ಎಳೆದಾಟದ ಸಾಹಕ್ಕೆ ನಿರ್ದೇಶಕರು ಹೋಗಲ್ಲ. ಎಂದಿನಂತೆ ಧನಂಜಯ್‌, ಅದಿತಿಪ್ರಭುದೇವ ಇಷ್ಟವಾಗುತ್ತಾರೆ. ನಂದಗೋಪಾಲ್‌, ಭಾವನಾ ರಾಮಣ್ಣ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

click me!