
ಗುಡ್ಡಬೆಟ್ಟಗಳಿಂದ ಸುತ್ತುವರಿದ ರಮಣೀಯ ಪ್ರಕೃತಿ ಸೌಂದರ್ಯದ ಒಂದೂರು. ಅಲ್ಲೊಂದು ಕೃಷ್ಣನ ದೇವಸ್ಥಾನ. ಅಲ್ಲಿ ವರ್ಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಚಂಡೆ ಸೇವೆ ವಿಶೇಷ. ಆ ಚೆಂಡೆ ಸೇವೆಯ ವಿಚಾರಕ್ಕೆ ಎದ್ದ ಭಿನ್ನಾಭಿಪ್ರಾಯವೊಂದು ಸಚ್ಚಾರಿತ್ರ್ಯವಂತ ಯುವಕನ ಬದುಕಿನ ಮೇಲೆ ಹೇಗೆ ಪ್ರಹಾರ ಮಾಡುತ್ತದೆ ಎಂಬುದು ಸಿನಿಮಾದ ಒನ್ಲೈನ್. ಸಿನಿಮಾ ಕಥೆಯ ಆಂತರ್ಯದಲ್ಲಿ ವಿಷಾದದ ಹರಿವು ಇದೆ. ದುರಂತದ ಕಾರ್ಮೋಡವಿದೆ.
ಪೀಟರ್ ಎಂಬ ತರುಣ ನಮಗೆ ಎದುರಾಗುವುದೂ ಇಂಥಾದ್ದೊಂದು ವಿಷಾದದಲ್ಲಿ ಅದ್ದಿ ತೆಗೆದಂಥಾ ಮುಖದಲ್ಲಿ. ಆತನ ವೇದನೆಗೆ ಕಾರಣವಾದ ಸಂಗತಿಗಳು ಅಸ್ಪಷ್ಟವಾಗಿ ತೆರೆದುಕೊಳ್ಳುತ್ತಾ, ಭೂತ ವರ್ತಮಾನಗಳ ನಡುವೆ ಕಣ್ಣಾಮುಚ್ಚಾಲೆಯಾಡುತ್ತದೆ. ಕೊನೆಯಲ್ಲಿ ಪರ್ವತವನ್ನು ಆವರಿಸುವ ಮೋಡ ಇದ್ದಕ್ಕಿದ್ದ ಹಾಗೆ ಚದುರಿ ಗುಡ್ಡಗಳೆಲ್ಲ ಸ್ಪಷ್ಟವಾದಂತೆ ಸನ್ನಿವೇಶ ರಿವೀಲ್ ಆಗುತ್ತದೆ. ಪೀಟರ್ ಬಹಳ ಪ್ರೀತಿಸುವ ಚೆಂಡೆ ವಾದನವೇ ಆತನಿಗೆ ಹೇಗೆ ಪರೀಕ್ಷೆಯೊಡ್ಡುತ್ತ ಹೋಗುತ್ತದೆ ಅನ್ನುವ ವಿಚಾರ ಮುಖ್ಯವಾಗಿದೆ. ಪ್ರೀತಿ, ಸಂಬಂಧಗಳ ಬಿರುಕು, ಆಘಾತಗಳೆಲ್ಲ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತದೆ.
ಚಿತ್ರ: ಪೀಟರ್
ನಿರ್ದೇಶನ: ಸುಕೇಶ್ ಶೆಟ್ಟಿ
ತಾರಾಗಣ: ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಡಾ. ಜಾನ್ವಿ ರಾಯಲ, ರಾಮ್ ನಾಡಗೌಡ್
ಪೀಟರ್ ಪಾತ್ರದ ಆಂತರ್ಯವನ್ನು ರಾಜೇಶ್ ಧ್ರುವ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಪೀಟರ್ನ ಪ್ರೇಮಿ ಮೀರಾಳ ಪಾತ್ರದಲ್ಲಿ ರವೀಕ್ಷಾ ಶೆಟ್ಟಿ ಅವರದು ಸಹಜವಾದ ಅಭಿನಯ. ರಾಮ್ ನಾಡಗೌಡ, ಪ್ರತಿಮಾ ನಾಯಕ್ ಅವರ ಪ್ರತಿಭೆಯ ಅನಾವರಣವೂ ಇಲ್ಲಾಗುತ್ತದೆ. ಸುಕೇಶ್ ಶೆಟ್ಟಿ ಅವರು ಹೊಸ ವಿನ್ಯಾಸದಲ್ಲಿ ಕಥೆಯನ್ನು ನಿರೂಪಿಸಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಕ್ಯಾಮರ ವರ್ಕ್ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಸುಂದರವಾಗಿ ಸೆರೆ ಹಿಡಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.