
ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ತಿನಿಸುಗಳ ಪೈಕಿ ಒಂದಾದ ಖಿಚಡಿ (ಅಕ್ಕಿ, ಬೇಳೆ, ತರಕಾರಿ ಮಿಶ್ರಣದ ಬಾತ್ ರೀತಿಯ ಆಹಾರ)ಗೆ ರಾಷ್ಟ್ರೀಯ ಆಹಾರದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನ.3ರಿಂದ ದೆಹಲಿಯಲ್ಲಿ ಗ್ರೇಟ್ ಇಂಡಿಯಾ ಫುಡ್ ಸ್ಟ್ರೀಟ್ ಎಂಬ ಕಾರ್ಯಕ್ರಮವನ್ನು ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯ ಹಮ್ಮಿಕೊಂಡಿದೆ.
ಇದಕ್ಕೆ ಸ್ವತಃ ಪ್ರಧಾನಿ ಮೋದಿ ಅವರೇ ಚಾಲನೆ ನೀಡಲಿದ್ದಾರೆ. ಇದರ ಅಂಗವಾಗಿ ನ.4ರಂದು ಒಂದೇ ಪಾತ್ರೆಯಲ್ಲಿ 800 ಕೆ.ಜಿ ಖಿಚಡಿ ತಯಾರಿಸಲಾಗುವುದು. ಇದೇ ವೇಳೆ ಖಿಚಡಿಗೆ ರಾಷ್ಟ್ರೀಯ ಆಹಾರದ ಸ್ಥಾನಮಾನ ನೀಡಲಾಗುವುದು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದೊಂದು ವಾರದಿಂದ ಹರಿದಾಡುತ್ತಿದೆ. ಮೋದಿ ಅವರನ್ನು ಮೆಚ್ಚಿಸುವ ಸಲುವಾಗಿ ದೇಶದ ಕೆಲವು ಭಾಗಗಳಲ್ಲಿ ಮಾತ್ರ ಬಳಸುವ ಈ ಆಹಾರಕ್ಕೆ ಇಂಥದ್ದೊಂದು ಸ್ಥಾನಮಾನ ನೀಡಲಾಗುತ್ತಿದೆ ಎಂದು ಮೋದಿ ವಿರೋಧಿಗಳು ಟೀಕೆ ಕೂಡ ಆರಂಭಿಸಿದ್ದಾರೆ. ಹಾಗಿದ್ದರೆ ಇಂಥದ್ದೊಂದು ಸುದ್ದಿ ನಿಜವೇ? ಎಂದು ಹುಡುಕಲು ಹೊರಟಾಗ ಸಿಕ್ಕ ಉತ್ತರ ಇದೊಂದು ವದಂತಿ ಎಂಬುದು.
ಕೇಂದ್ರ ಸರ್ಕಾರ ಭಾರತೀಯ ಆಹಾರಗಳನ್ನು ವಿಶ್ವಮಟ್ಟದಲ್ಲಿ ಪ್ರಚಾರಗೊಳಿಸಲು ಇಂಥದ್ದೊಂದು ಆಹಾರ ಮೇಳವನ್ನು ದೆಹಲಿಯಲ್ಲಿ ಹಮ್ಮಿಕೊಂಡಿದೆ. ಇದೇ ವೇಳೆ ನ.4ರಂದು 800 ಕೆ.ಜಿ ಖಿಚಡಿ ತಯಾರಿಸುವ ಮೂಲಕ ವಿಶ್ವದಾಖಲೆ ಸ್ಥಾಪಿಸಲು ಹೊರಟಿದೆ. ಅದು ಬಿಟ್ಟರೆ, ಅದಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪವೂ ಕೇಂದ್ರದ ಮುಂದಿಲ್ಲ. ಇದನ್ನು ಸ್ವತಃ ಕೇಂದ್ರ ಆಹಾರ ಸಂಸ್ಕರಣಾ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಮತ್ತೊಂದು ವದಂತಿ ಸುಳ್ಳು ಎಂದು ಸಾಬೀತಾಯಿತು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.