ಹೊರ ಜಿಲ್ಲೆಗೆ ಹೋದ್ರೆ, ಬಂದ್ರೆ ಹೋಂ ಕ್ವಾರಂಟೈನ್‌ ಕಡ್ಡಾಯ

By Kannadaprabha NewsFirst Published Apr 24, 2020, 1:03 PM IST
Highlights

ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಎಲ್ಲರಿಗೂ ಹೋಂ ಕ್ವಾರಂಟೈನ್‌ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದ್ದಾರೆ. 

ಚಿತ್ರದುರ್ಗ(ಏ.24): ಕೋವಿಡ್‌-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ತುರ್ತುಕಾರ್ಯ ನಿಮಿತ್ತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳಬಯಸುವವರಿಗೆ ಇ-ಪಾಸ್‌ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು. ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಎಲ್ಲರಿಗೂ ಹೋಂ ಕ್ವಾರಂಟೈನ್‌ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವೈದ್ಯಕೀಯ ಚಿಕಿತ್ಸೆ, ಸ್ವಂತ ಮದುವೆ ಹಾಗೂ ಶವಸಂಸ್ಕಾರ ಸೇರಿ ಮೂರು ಪ್ರಮುಖ ಕಾರಣಗಳಿಗಾಗಿ ಮಾತ್ರ ಅಂತರ್‌ ಜಿಲ್ಲೆ ಮತ್ತು ಅಂತರ್‌ರಾಜ್ಯಗಳಿಗೆ ತೆರಳುವವರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯಿಂದ ಇ-ಪಾಸ್‌ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಎಲ್ಲರಿಗೂ ರೋಗ ಲಕ್ಷಣ ಇರಲಿ, ಇಲ್ಲದಿರಲಿ, ಹೋಂ ಕ್ವಾರಂಟೈನ್‌ ಕಡ್ಡಾಯವಾಗಿ ಮಾಡಲಾಗುವುದು ಎಂದರು.

ವೀಳ್ಯ ನೀಡಿ ಕರೆದೊಯ್ಯಲು 50 ಕಾರುಗಳಲ್ಲಿ ಬಂದ್ರು..!

ಇ-ಪಾಸ್‌ ವಿತರಿಸಲು ಏಪ್ರಿಲ್‌ 23ರಿಂದ ಆನ್‌ಲೈನ್‌ನಲ್ಲಿ ಇ-ಪಾಸ್‌ ಪೋರ್ಟಲ್‌ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ತಾವು ಇರುವ ಸ್ಥಳದಲ್ಲೇ ಈ ಪೋರ್ಟಲ್‌ ಮುಖಾಂತರ ಅರ್ಜಿ ಭರ್ತಿಮಾಡಿ, ಗುರುತಿನ ಚೀಟಿ, ಹೊರ ಹೋಗಲು ಕಾರಣ, ದಾಖಲೆಯ ಮಾಹಿತಿ ನೀಡಿ ಕೇವಲ ಒಂದೇ ದಿನದಲ್ಲಿ ಇ-ಪಾಸ್‌ ಪಡೆಯಬಹುದು. ಸಾರ್ವಜನಿಕರ ಅನಾವಶ್ಯಕ ಓಡಾಟ ತಪ್ಪಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಎಲ್ಲ ನೆಗೆಟಿವ್‌:

ಆಂಧ್ರಪ್ರದೇಶದ ಗ್ರಾಮವೊಂದರ ಕೊರೋನಾ ಪಾಸಿಟಿವ್‌ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಇದ್ದ, ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಒಟ್ಟು 10 ಶಂಕಿತರಿಗೆ ಕ್ವಾರಂಟೈನ್‌ ಮಾಡಿ, ಅವರ ಗಂಟಲುದ್ರವ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಿದ್ದು, ಎಲ್ಲರದ್ದೂ ನೆಗೆಟಿವ್‌ ವರದಿ ಬಂದಿದೆ. ಒಂದು ವಾರದ ಬಳಿಕ ಮತ್ತೊಮ್ಮೆ ಅವರ ಗಂಟಲುದ್ರವ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಲಾಗುವುದು

ಲಾಕ್‌ಡೌನ್‌: ಕಾರ್ಮಿಕ ಮಹಿಳೆಯ ಅಂತ್ಯಸಂಸ್ಕಾರ ನಡೆಸಿದ ಯುವಕರು

ದ್ವಿಚಕ್ರ ವಾಹನದಲ್ಲಿ ಒಬ್ಬರು ಹಾಗೂ 4 ಚಕ್ರ ವಾಹನಗಳಲ್ಲಿ ಇಬ್ಬರಿಗೆ ಮಾತ್ರ ಪ್ರಯಾಣಿಸುವ ಅವಕಾಶವಿದೆ. ರೈತರು ಕೃಷಿ ಪರಿಕರಗಳ ಮಾರಾಟ ಮತ್ತು ಕೊಂಡುಕೊಳ್ಳುವಿಕೆಗೆ ಯಾವುದೇ ತೊಂದರೆಯಿಲ್ಲ. ರೈತರು ತಮ್ಮ ಜಮೀನಿನ ಪಹಣಿ ಅಥವಾ ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಂಡಿರಬೇಕು ಎಂದರು.

ಸೇವೆಗಳಿಗೆ ರಿಯಾಯಿತಿ:

ಲಾಕ್‌ಡೌನ್‌ ಮೇ 3ರವರೆಗೆ ಮುಂದುವರೆದಿದ್ದು, ಕೆಲವು ಸೇವೆಗಳಿಗೆ ಏ.23ರಿಂದ ರಿಯಾಯಿತಿ ನೀಡಲಾಗಿದೆ. ಸಾರ್ವಜನಿಕ ಸಾರಿಗೆ, ಅಂತರ್‌ ಜಿಲ್ಲಾ ಮತ್ತು ಅಂತರ್‌ ರಾಜ್ಯ ಸಂಚಾರಕ್ಕೆ ನಿರ್ಬಂಧ ಮುಂದುವರೆದಿದೆ. ಸಿನಿಮಾ ಮಂದಿರ, ಶಾಪಿಂಗ್‌ ಕಾಂಪ್ಲೆಕ್ಸ್‌, ಜಿಮ್‌, ಕ್ರೀಡಾ ಚಟುವಟಿಕೆ, ಈಜುಕೊಳ, ಮದ್ಯ ಮಾರಾಟ, ಸಾರ್ವಜನಿಕ ಸಮಾರಂಭಗಳು ಇವೆಲ್ಲವುಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ.

ಲಾಕ್‌ಡೌನ್‌ ಕಾರಣ ತರಕಾರಿ ಮಾರಿ ಜೀವನ ನಡೆಸುತ್ತಿರುವ ಹಾಸ್ಯ ನಟ ಕಣ್ಣೀರು!

ಗ್ರಾಮೀಣ ಪ್ರದೇಶಗಳಲ್ಲಿನ ಇಂಡಸ್ಟ್ರಿಗಳು, ಕಟ್ಟಡ ನಿರ್ಮಾಣ ಕಾರ್ಯ ಮುಂದುವರೆಸಲು ಅವಕಾಶ ನೀಡಲಾಗಿದೆ, ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು, ಮೆಡಿಕಲ್‌ ಲ್ಯಾಬೊರೇಟರಿ, ಪಶು ಆಸ್ಪತ್ರೆ, ಔಷಧಗಳ ಪೂರೈಕೆ ಇರುತ್ತದೆ. ಎಲೆಕ್ಟ್ರಿಷಿಯನ್‌, ಐಟಿ ರಿಪೇರಿ, ಪ್ಲಂಬ​ರ್‍ಸ್, ಮೋಟಾರ್‌ ಮೆಕ್ಯಾನಿಕ್ಸ್‌ ಮತ್ತು ಕಾರ್ಪೆಂಟ​ರ್‍ಸ್ ನವರಿಗೆ ಸ್ಥಳೀಯವಾಗಿ ಮಾತ್ರ ಕೆಲಸ ನಿರ್ವಹಿಸಲು ಅನುಮತಿ ಇದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸರಕು ಸಾಗಣೆಗೆ ಅವಕಾಶ, ಅಂಗಡಿಗಳಿಗೆ ಇಲ್ಲ:

ಎಲ್ಲ ಸರಕು ಸಾಗಾಣಿಕೆ ವಾಹನಗಳು ಸಿಮೆಂಟ್‌, ಸ್ಟೀಲ್‌, ಜೆಲ್ಲಿ, ಟೈಲ್ಸ್‌, ಪೇಂಟ್ಸ್‌, ಇಟ್ಟಿಗೆ ಮತ್ತು ಟಾರ್‌ ಸಾಮಗ್ರಿಗಳ ಸಾಗಾಣಿಕೆ ವಾಹನಗಳು ಸಂಚರಿಸಲು ಅವಕಾಶವಿದೆ. ಆದರೆ, ಈ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅನುಮತಿ ಇರುವುದಿಲ್ಲ. ಟ್ರಕ್‌ ರಿಪೇರಿ ಶಾಪ್‌ಗಳು, ಹೆದ್ದಾರಿ ಡಾಬಾಗಳು ಕನಿಷ್ಠ ಸಂಖ್ಯೆಯ ನೌಕರರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಿ ಪಾರ್ಸಲ್‌ ನೀಡಬಹುದಾಗಿದೆ. ಕೊರಿಯರ್‌ ಸವೀರ್‍ಸ್‌, ಕೋಲ್ಡ್‌ ಸ್ಟೋರೇಜ್‌, ವೇರ್‌ಹೌಸ್‌ ಸೇವೆ, ಖಾಸಗಿ ಸೆಕ್ಯುರಿಟಿ ಸೇವೆ ಒದಗಿಸಬಹುದು. ಹೋಟೆಲ್‌, ಹೋಮ್‌ಸ್ಟೇ, ಲಾಡ್ಜ್‌ನವರು ಲಾಕ್‌ಡೌನ್‌ ಕಾರಣದಿಂದ ಉಳಿದುಕೊಂಡಿರುವವರಿಗೆ ಮಾತ್ರ ಸೇವೆ ಒದಗಿಸಬಹುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದರು.

click me!