Wildlife: ಒಂದು ವರ್ಷದಲ್ಲಿ 14 ಬಗೆಯ 100 ವನ್ಯಜೀವಿಗಳ ರಕ್ಷಣೆ: ಸಿಐಡಿ

By Kannadaprabha NewsFirst Published Jan 29, 2023, 12:36 PM IST
Highlights

ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅರಣ್ಯ ಘಟಕದ ಪೊಲೀಸರು ಒಂದು ವರ್ಷದ ಅವಧಿಯಲ್ಲಿ 14 ವಿವಿಧ ಬಗೆಯ ವನ್ಯಜೀವಿಗಳನ್ನು ರಕ್ಷಣೆ ಮಾಡಿ, 5.96 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು (ಜ.29) :

ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅರಣ್ಯ ಘಟಕದ ಪೊಲೀಸರು ಒಂದು ವರ್ಷದ ಅವಧಿಯಲ್ಲಿ 14 ವಿವಿಧ ಬಗೆಯ ವನ್ಯಜೀವಿಗಳನ್ನು ರಕ್ಷಣೆ ಮಾಡಿ, 5.96 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅರಣ್ಯಗಳ ರಕ್ಷಣೆಗೆ ಸಿಐಡಿಯ ಅರಣ್ಯ ಘಟಕದಲ್ಲಿನ 18 ಅರಣ್ಯ ಸಂಚಾರಿ ದಳಗಳು ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸುತ್ತವೆ. ಪ್ರಾಣಿಗಳು ಹಾಗೂ ಕಾಡಿನ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಜಾಲದ ಮೇಲೆ ಸಂಚಾರಿ ದಳಗಳು ನಿರಂತರ ನಿಗಾ ವಹಿಸಿವೆ ಎಂದು ಸಿಐಡಿ ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕೆ.ವಿ.ಶರತ್‌ ಚಂದ್ರ ತಿಳಿಸಿದ್ದಾರೆ.

ಚಿರತೆ ದಾಳಿಯಿಂದ ಮರಿಗಳನ್ನು ರಕ್ಷಿಸಿದ ಮುಳ್ಳುಹಂದಿ... ವಿಡಿಯೋ ಸಖತ್ ವೈರಲ್

2022ರಲ್ಲಿ ವನ್ಯಜೀವಿ ಕಳ್ಳ ಸಾಗಣೆದಾರರು ಹಾಗೂ ಬೇಟೆಗಾರರ ವಿರುದ್ಧ 101 ಪ್ರಕರಣಗಳನ್ನು ದಾಖಲಿಸಿ 204 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮಣ್ಣು ಮುಕ್ಕ ಹಾವು, ಆಮೆಗಳು, ನವಿಲು, ಕಾಡು ಹಂದಿ ಹಾಗೂ ಕೌಜುಗಲ ಹಕ್ಕಿಗಳು ಸೇರಿದಂತೆ 14 ವಿವಿಧ ಬಗೆಯ 100 ವನ್ಯಜೀವಿಗಳನ್ನು ರಕ್ಷಿಸಲಾಗಿದೆ. ಅಲ್ಲದೆ ಶ್ರೀಗಂಧ ಮರ ಸೇರಿದಂತೆ ಇತರೆ ಕಾಡಿನ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಸಂಬಂಧ 661 ಪ್ರಕರಣಗಳಲ್ಲಿ 898 ಆರೋಪಿಗಳ ಬಂಧನವಾಗಿದೆ. ಇವರಿಂದ 5.96 ಕೋಟಿ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

ರಕ್ಷಣೆಯಾದ ವನ್ಯಜೀವಿಗಳ ವಿವರ ಹೀಗಿದೆ

ವನ್ಯ ಜೀವಿ ಸಂಖ್ಯೆ

  • ಮಣ್ಣು ಮುಕ್ಕ ಹಾವು 15
  • ಆಮೆಗಳು 16
  • ಗಿಳಿಗಳು 17
  • ಕಾಡು ಹಂದಿ 6
  • ಉಡಗಳು 4
  • ಗೂಬೆ 1
  • ನವಿಲು 4
  • ಕೌಜುಗಲ ಹಕ್ಕಿ 28
  • ಗಿಡುಗ 1
  • ಚಿಪ್ಪು ಹಂದಿ 1
  • ಜಿಂಕೆ 1
  • ಕೋತಿ 3
  • ಕಾಡು ಕುರಿ 1
  • ಕಾಡು ಪಾಪ 2

ಪ್ರಾಣಿಗಳ ದಂತ, ಚರ್ಮ ಜಪ್ತಿ

ಆನೆ ದಂತಗಳು, ಚಿರತೆ ಚರ್ಮ, ಉಗುರು, ಹುಲಿ ಚರ್ಮ ಮತ್ತು ಉಗುರುಗಳು, ಮಾಂಸ, ಕೊಂಬು, ಕೃಷ್ಣ ಮೃಗ ಚರ್ಮಗಳು, ಚಿಪ್ಪು ಹಂದಿಯ ಚಿಪ್ಪುಗಳು ಹಾಗೂ ಕಾಡು ಕೋಣದ ಕೊಂಬುಗಳನ್ನು ಅರಣ್ಯ ಘಟಕದ ಸಂಚಾರ ದಳದ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಎಡಿಜಿಪಿ ಕೆ.ವಿ.ಶರತ್‌ ಚಂದ್ರ ತಿಳಿಸಿದ್ದಾರೆ.

5.96 ಕೋಟಿ ರು. ಅರಣ್ಯ ಉತ್ಪನ್ನ ವಶ

ಅರಣ್ಯ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳಿಂದ 5.96 ಕೋಟಿ ರು. ಮೌಲ್ಯದ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ. ಇದರಲ್ಲಿ ಶ್ರೀಗಂಧ ಹಾಗೂ ರಕ್ತಚಂದನ ಮರಗಳು ಸೇರಿವೆ. ಹಾಗೆಯೇ ಕಾಡುಗಳ್ಳರಿಂದ 163 ವಾಹನಗಳನ್ನು ಕೂಡ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Ranjani Raghavan: ಕರಡಿ ಜೊತೆ ಕನ್ನಡತಿ! ರಂಜನಿ ರಾಘವನ್ ಎಲ್ಲಿದ್ದಾರೆ ನೋಡಿ..

ವನ್ಯಜೀವಿ ಹಾಗೂ ಅರಣ್ಯ ಉತ್ಪನ್ನಗಳ ಮಾರಾಟ ಅಥವಾ ಸಾಗಾಣಿಕೆ ಬಗ್ಗೆ ಮಾಹಿತಿ ಇದ್ದರೆ ಅರಣ್ಯ ಸಂಚಾರಿ ದಳಗಳಿಗೆ ಸಾರ್ವಜನಿಕರು ನೀಡಬೇಕು. ಈ ಮಾಹಿತಿ ಅನುಸಾರ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಾನೂನುರೀತ್ಯ ಕ್ರಮಗಳನ್ನು ಜರುಗಿಸಲಾಗುತ್ತದೆ.

- ಕೆ.ವಿ.ಶರತ್‌ ಚಂದ್ರ ಎಡಿಜಿಪಿ, ಸಿಐಡಿ

click me!