ಪ್ರಧಾನಿ ಮೋದಿ ವಿರುದ್ಧ ಗರಂ ಆದ ಎಚ್.ಡಿ ರೇವಣ್ಣ

By Kannadaprabha NewsFirst Published May 20, 2021, 2:54 PM IST
Highlights
  •  ಕೊರೋನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ  ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಸಭೆ 
  • ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ ಎಚ್ ಡಿ ರೇವಣ್ಣ
  • ರಾಜ್ಯ ಸರ್ಕಾರದ ಪ್ಯಾಕೇಜ್ ಬಗ್ಗೆಯೂ ರೇವಣ್ಣ ಅಸಮಾಧಾನ

ಹಾಸನ (ಮೇ.20):  ಕೊರೋನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ  ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಮೊದಿಯವರು ಬಿಬಿಎಂಪಿ ಆಯುಕ್ತರೊಂದಿಗೆ ಮಾತಾಡಿದ್ದು ಬಿಟ್ಟರೆ ಯಾವ ಡೀಸಿಗಳೊಂದಿಗೂ ಮಾತನಾಡಲೆ ಇಲ್ಲ. ಹೀಗಾದರೆ ಜಿಲ್ಲೆಗಳ ಪರಿಸ್ಥಿತಿ ಹೇಗೆ ತಿಳಿಯುತ್ತದೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ಪ್ರಧಾನಿ ವಿಡಿಯೋ ಸಂವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 
 
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾತನಾಡಿದ ರೇವಣ್ಣ ಪ್ರಧಾನಿ ವಿಡಿಯೋ ಕಾನ್ಫರೆನ್ಸ್‌ಗೆ 17 ಜಿಲ್ಲೆಗಳ ಡೀಸಿಗಳನ್ನು ಕೂರಿಸಿಕೊಂಡು ಕೇವಲ ಬಿಬಿಎಂಪಿ ಆಯುಕ್ತರನ್ನು ಮಾತ್ರ ಮಾತನಾಡಿಸುವ ಮೂಲಕ ಜಿಲ್ಲಾಧಿಕಾರಿಗಳಿಗೆ ಅಪಮಾನ ಮಾಡಿದ್ದಾರೆ ಎಂದರು. 

ಮೋದಿ ಸಭೆಯಲ್ಲಿ ಡಿಎಂಗೆ ಮಾತನಾಡಲು ಬಿಡದೇ, ಕೇಂದ್ರ ಅವಮಾನಿಸಿದೆ ಎಂದ ದೀದೀ! ...

ಬಿಬಿಎಂಪಿ ಆಯುಕ್ತರು ಯಾವ ಫೋನನ್ನೂ ರಿಸೀವ್ ಆಡುವುದೇ ಇಲ್ಲ. ಅಂತಹ ವ್ಯಕ್ತಿಯನ್ನು ಪರಿಗಣಿಸಿ ಡೀಸಿಗಳನ್ನು ಕಡೆಗಣಿಸಲಾಗಿದೆ.  ಸಭೆ ಮಾಡಿ ಏನು ತಿಳಿದುಕೊಂಡರು ಎಂದು ಪ್ರಶ್ನಿಸಿದರು. ಅಲ್ಲದೇ ಈ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದು ದ್ವೇಷದ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದರು. 

ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್ ಬಗ್ಗೆ ಅಸಮಾಧಾನ ಹೊರಹಾಕಿದ ರೇವಣ್ಣ ಈ ಪ್ಯಾಕೇಜ್ ಯಾವುದಕ್ಕೂ ಸಾಲದು.  ಯಾವ ಮೂಲೆಗೂ ಸಾಲದಂತೆ ಘೋಷಣೆ ಮಾಡಿದ್ದಾರೆ. ನಿಜವಾದ ಅರ್ಹತೆ ಇರುವವರಿಗೆ ಸೂಕ್ತ ಪ್ರಮಾಣದಲ್ಲಿ ಸಿಗಬೇಕು ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!