ದಾಂಡೇಲಿಯಲ್ಲಿ ಜಿ+2 ಮಾದರಿ ಮನೆ ನನೆಗುದಿಗೆ

By Kannadaprabha NewsFirst Published Oct 3, 2022, 12:47 PM IST
Highlights
  • ದಾಂಡೇಲಿಯಲ್ಲಿ ಜಿ+2 ಮಾದರಿ ಮನೆ ನನೆಗುದಿಗೆ
  • ಆರು ವರ್ಷ ಕಳೆದರೂ ಸಾಕಾರವಾಗದ ಆಶ್ರಯ ಮನೆ ಯೋಜನೆ
  • 10 ಎಕರೆ ಜಾಗದಲ್ಲಿ 1102 ಮನೆ ನಿರ್ಮಾಣಕ್ಕೆ ಉದ್ದೇಶ

ಜಿ.ವಿ. ಜಡೆಹಿರೇಮಠ

ದಾಂಡೇಲಿ (ಅ.3) :  ನಗರದ ಅಂಬೇವಾಡಿಯ ನಾಗದೇವತಾ ದೇವಸ್ಥಾನದ ಹಿಂಭಾಗ ನಿರ್ಮಾಣವಾಗುತ್ತಿರುವ ಜಿ+ಟು ಮಾದರಿಯ ಆಶ್ರಯ ಮನೆಗಳು ಬಡವರಿಗೆ ಗಗನಕುಸುಮವಾಗಿದೆ. ಆರು ವರ್ಷ ಕಳೆದರೂ ಮನೆ ನಿರ್ಮಾಣ ಕಾರ್ಯ ಪೂರ್ಣವಾಗುತ್ತಿಲ್ಲ.

ಸುರಕ್ಷತೆಗೆ ಆದ್ಯತೆ ನೀಡಿ ದಾಂಡೇಲಿ -ಜೋಯಿಡಾದಲ್ಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ

ಇಲ್ಲಿ ಜಿ+ಟು ಮಾದರಿಯ 1102 ಆಶ್ರಯ ಮನೆಗಳ ನಿರ್ಮಾಣಕ್ಕೆ ನಗರಸಭೆಯಿಂದ 10 ಎಕರೆ ಜಾಗ ನೀಡಲಾಗಿದೆ. ವಸತಿ ಯೋಜನೆಯಡಿ ಮಂಜೂರಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ .53 ಕೋಟಿ ಅನುದಾನದಲ್ಲಿ ಮನೆ ನಿರ್ಮಾಣಕ್ಕೆ 2016ರ ಅಕ್ಟೋಬರ್‌ನಲ್ಲಿ ಅಂದಿನ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ ಭೂಮಿಪೂಜೆ ನೆರವೇರಿಸಿದ್ದರು. ಆ ಸಂದರ್ಭದಲ್ಲಿ ಇನ್ನು ಕೆಲವೇ ದಿನದಲ್ಲಿ ಸಾವಿರಾರು ಕುಟುಂಬಗಳಿಗೆ ಇಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ 6 ವರ್ಷಗಳೇ ಕಳೆದು ಹೋಗಿವೆ. ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಈಗಲೂ ಆಮೆಗತಿಯಲ್ಲಿ ಸಾಗುತ್ತಿದೆ. ಮನೆಗಳಿಗಾಗಿ ಅರ್ಜಿ ಹಾಕಿಕೊಂಡವರು ಕಾಯುತ್ತಾ ಕುಳಿತಿದ್ದಾರೆ.

ಆಶ್ರಯ ಮನೆಗಳನ್ನು ಪಡೆಯುವವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಂತಿಗೆ ಹಣ ನೀಡಬೇಕು. ಮತ್ತೆ ಕೆಲವೊಂದಿಷ್ಟುಹಣ ಸಾಲದ ರೂಪದಲ್ಲಿ ಇರುತ್ತದೆ. ಮನೆ ನೀಡಿದ ನಂತರ ಆ ಸಾಲವನ್ನು ಫಲಾನುಭವಿಗಳೇ ಭರಣ ಮಾಡಬೇಕು ಎಂಬ ನಿಯಮವಿದೆ. ದಾಂಡೇಲಿಯಲ್ಲಿ ನಿವೇಶನದ ಸಮಸ್ಯೆ ಇದ್ದ ಕಾರಣಕ್ಕಾಗಿ ಇಲ್ಲಿಯ ಹಲವಾರು ವಸತಿರಹಿತರು, ಬಡಕುಟುಂಬಗಳು ನಿವೇಶನ ಪಡೆಯಲು ಅರ್ಜಿ ಹಾಕಿದ್ದರು. ಅವುಗಳಲ್ಲಿ ಪರಿಶೀಲನೆ ನಂತರ 1100 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.

ಈ ಬಡ ಫಲಾನುಭವಿಗಳಲ್ಲಿ ಕೆಲವರು ಈಗಾಗಲೇ ತಮಗೆ ನಿಗದಿಪಡಿಸಿದ್ದ ಒಂದು, ಎರಡು ಹಂತದ ವಂತಿಗೆ ಹಣವನ್ನು ಬ್ಯಾಂಕ್‌ಗಳಲ್ಲಿ ಸಾಲ-ಸೋಲ ಮಾಡಿ ತುಂಬಿದ್ದಾರೆ. ಹೀಗೆ ವಂತಿಗೆಯನ್ನು ತುಂಬುವ ಸಂದರ್ಭದಲ್ಲಿ ಬಡ ಫಲಾನುಭವಿಗಳು ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲಕ್ಕೆ ಇದೀಗ ಅದರ ಬಡ್ಡಿಯನ್ನು ಬ್ಯಾಂಕ್‌ಗಳಿಗೆ ತುಂಬುತ್ತಿದ್ದಾರೆಯೇ ಹೊರತು, ಅವರಿಗೆ ಜಿ+ಟು ನಿವೇಶನದಲ್ಲಿ ಮನೆ ಭಾಗ್ಯ ಮಾತ್ರ ಇದುವರೆಗೂ ಸಿಗದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

ನಿರ್ಮಾಣ ಕಾರ್ಯ ಸ್ಥಗಿತ:

.53 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯ ಹಣ ಗುತ್ತಿಗೆದಾರನಿಗೆ ಸಕಾಲದಲ್ಲಿ ಸಂದಾಯವಾಗುತ್ತಿಲ್ಲ. ಗುತ್ತಿಗೆದಾರ ಮಾಡಿದ ಕೆಲಸಕ್ಕೆ ಅವರಿಗೆ ಸಿಗಬೇಕಾದ ಹಣ ಸಿಗಲಿಲ್ಲವಾದ ಕಾರಣ ಗುತ್ತಿಗೆದಾರ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆಂದು ತಿಳಿದುಬಂದಿದೆ.

Uttara Kannada: ಜೋಯಿಡಾ-ದಾಂಡೇಲಿಯಲ್ಲಿ ಕಾನೂನು ನಿಯಮ ಮೀರಿ ಜಲಸಾಹಸ ಚಟುವಟಿಕೆ

ಈ ಆಶ್ರಯ ಮನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ಸಕಾಲದಲ್ಲಿ ತುಂಬಬೇಕಾಗಿರುವ ಹಣವನ್ನು ಭರಣ ಮಾಡದೇ ಇರುವ ಕಾರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮಗೆ ನೀಡಬೇಕಾಗಿರುವ ಬಿಲ್‌ ಬಿಡುಗಡೆ ಮಾಡುತ್ತಿಲ್ಲ. ಫಲಾನುಭವಿಗಳ ಹಣವನ್ನು ಸರ್ಕಾರಕ್ಕೆ ಭರಣ ಮಾಡಿದರೆ ಸರ್ಕಾರ ನಮ್ಮ ಬಿಲ್‌ ಬಿಡುಗಡೆ ಮಾಡುತ್ತದೆ. ಇದರಲ್ಲಿ ವ್ಯತ್ಯಯವಾಗಿರುವ ಕಾರಣಕ್ಕಾಗಿ ನಮಗೆ ಬಿಲ್‌ ಬಟವಾಡೆಯಾಗದೆ ಸಮಸ್ಯೆಯಲ್ಲಿದ್ದೇವೆ.

-ಶಿವು ಮಹಾಜನರವರ್‌,ಗುತ್ತಿಗೆದಾರ ಸಂಸ್ಥೆಯ ಅಧಿಕಾರಿ

click me!