ಹುಲಿ ಯೋಜನೆ ತೀರ್ಮಾನ ಸಿಎಂಗೆ ಬಿಟ್ಟದ್ದು: ಸಚಿವ ಕತ್ತಿ

By Govindaraj SFirst Published Aug 8, 2022, 11:58 PM IST
Highlights

ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡುವುದು ಮುಖ್ಯಮಂತ್ರಿಗಳ ತೀರ್ಮಾನ, ಅವರ ನಿಲುವೇ ಅಂತಿಮ ಎಂದು ಅರಣ್ಯ ಸಚಿವ ಉಮೇಶ್‌ ಕತ್ತಿ ಹೇಳಿದರು.

ಚಾಮರಾಜನಗರ (ಆ.08): ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡುವುದು ಮುಖ್ಯಮಂತ್ರಿಗಳ ತೀರ್ಮಾನ, ಅವರ ನಿಲುವೇ ಅಂತಿಮ ಎಂದು ಅರಣ್ಯ ಸಚಿವ ಉಮೇಶ್‌ ಕತ್ತಿ ಹೇಳಿದರು. ಜಿಲ್ಲೆಯ ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಲೆಮಹದೇಶ್ವರ ವನ್ಯಜೀವಿಧಾಮ ಅನುಮೋದನೆಗೊಂಡು ರಾಜ್ಯ ಸರ್ಕಾರಕ್ಕೆ ಬಂದಿದೆ. 

ಸೋಮಣ್ಣ ಬೇಡ ಎನ್ನುವುದು, ನಾನು ಬೇಕು ಎನ್ನುವುದೇನೂ ನಡೆಯಲ್ಲ. ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮ. ಅರಣ್ಯ ಸಚಿವನಾಗಿ ನನ್ನ ಅಭಿಪ್ರಾಯ ಹುಲಿ ಸಂರಕ್ಷಿತ ಪ್ರದೇಶ ಆಗಬೇಕು. ಕಾಡು ಉಳಿಯಲಿದೆ, ಮಲೆಮಹದೇಶ್ವರನ ವಾಹನವೂ ಹುಲಿಯಾದ್ದರಿಂದ ಈ ಪ್ರದೇಶ ಹುಲಿ ಸಂರಕ್ಷಿತ ಆಗಬೇಕು. ಆಗ ಕಾಡಿನ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಚಾಮರಾಜನಗರ: ಸಾವಿನಲ್ಲೂ ಸಾರ್ಥಕತೆ, ಮಗನ ಅಂಗಾಂಗ ದಾನ ಮಾಡಿದ ತಂದೆ-ತಾಯಿ

ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆ ಕುಡಿಯುವ ನೀರಿಗೆ ಸಂಬಂಧಿಸಿದ್ದು, ಆ ಯೋಜನೆ ಆಗಲೇಬೇಕು, ಮಾಡೇ ಮಾಡುತ್ತೇವೆ. ಸರ್ಕಾರ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ತಮಿಳುನಾಡಿಗೂ ಮನವಿ ಮಾಡುತ್ತಿದ್ದೇವೆ. ಮೇಕೆದಾಟು ಯೋಜನೆಯಾದರೆ ಬೆಂಗಳೂರು, ಚಾಮರಾಜನಗರಕ್ಕೆ ನೆರವಾಗಲಿದೆ ಎಂದು ಭರವಸೆ ನೀಡಿದರು.

ಹೊಗೆನಕಲ್ ಜಲಪಾತ ಅಭಿವೃದ್ಧಿ: ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾದ ಹೊಗೆನಕಲ್ ಜಲಪಾತವನ್ನು ಅಭಿವೃದ್ಧಿಪಡಿಸಲಾಗುವುದು. ವೀಕ್ಷಣಾ ಗೋಪುರ ಹಾಗೂ ಸೇತುವೆ ನಿರಂತರ ಮಳೆಯಿಂದ ಹಾನಿಯಾಗಿದ್ದು, ಶೀಘ್ರ ಕಾಮಗಾರಿ ಕೈಗೊಂಡು ಸರಿಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ವೇಳೆ ಕಾಡೊಳಗಿನ ಗ್ರಾಮ ಚಂಗಡಿ ಜನರಿಗೆ ಪುನರ್ವಸತಿ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೆರೆಡು ತಿಂಗಳಲ್ಲಿ ಅಂತಿಮವಾಗಲಿದೆ ಎಂದು ಭರವಸೆ ನೀಡಿದರು.

ನನಗೂ ಬುದ್ದಿ ಇದೆ: ಮೈಸೂರಿನ ವೀರನಹೊಸಹಳ್ಳಿಯಲ್ಲಿ ಶೂ ಹಾಕಿಕೊಂಡು ಗಜಪಡೆಗೆ ಪೂಜೆ ಸಲ್ಲಿಸಿದ್ದರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಅರಣ್ಯ ಸಚಿವ ಉಮೇಶ್‌ ಕತ್ತಿ ಆ ವಿಚಾರಕ್ಕೆ ಹನೂರಲ್ಲಿ ಪ್ರತಿಕ್ರಿಯಿಸಿದ್ದಾರೆ. ತಾನು ಹಾಕಿರುವುದು ಬಟ್ಟೆಶೂ ಆಗಿದ್ದು, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ. ಪೂಜೆ ಮಾಡುವ ಮುನ್ನ ಬಿಚ್ಚಿದ್ದೆ ಬಳಿಕ ಆನೆಗಳಿಗೆ ಸ್ವಾಗತ ಕೋರುವಾಗ ಹಾಕಿಕೊಂಡಿದ್ದೆ. ನನಗೂ 61 ವರ್ಷ ವಯಸ್ಸಾಗಿದ್ದು ಬುದ್ದಿ ಇದೆ. ಅದನ್ನೇ ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ. ಬೇಕಾದರೆ ನಾನು ಹಾಕಿಕೊಳ್ಳುವ ಶೂ ಅನ್ನು ಪರಿಶೀಲಿಸಬಹುದು. ಬಟ್ಟೆಯಿಂದ ಮಾಡಿರುವುದು ಎಂದು ಸಮಜಾಯಿಷಿ ನೀಡಿದರು.

ನಮ್ಮದು ಪಾಪರ್‌ ಸರ್ಕಾರವಲ್ಲ ಸೂಪರ್‌ ಸರ್ಕಾರ: ಸಚಿವ ಅಶೋಕ್‌

ದಸರಾ ಗಜಪಡೆಗೆ ಶೂ ಧರಿಸಿ ಕತ್ತಿ ಪೂಜೆ: ದಸರಾ ಗಜಪಯಣಕ್ಕೆ ಚಾಲನೆ ನೀಡುವ ವೇಳೆ ಅರಣ್ಯ ಸಚಿವ ಉಮೇಶ್‌ ಕತ್ತಿ ಅವರು ಶೂ ಧರಿಸಿಕೊಂಡೇ ಪೂಜೆ ಸಲ್ಲಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಅರಣ್ಯ ಸಚಿವರು ಗಜಪಯಣಕ್ಕೆ ಪೂಜೆ ಸಲ್ಲಿಸುವ ವೇಳೆ, ಪುಷ್ಪಾರ್ಚನೆ ಮಾಡುವ ವೇಳೆಯಲ್ಲಿ ತಮ್ಮ ಕಾಲಿನಲ್ಲಿದ್ದ ಶೂಗಳನ್ನು ತೆಗೆಯದೆ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಕ್ರಮದಲ್ಲಿದ್ದ ಇತರೆ ಗಣ್ಯರು ಬರಿಗಾಲಲ್ಲಿ ಪೂಜೆ ಸಲ್ಲಿಸಿದರೆ ಉಮೇಶ್‌ ಕತ್ತಿ ಮಾತ್ರ ಶೂ ಧರಿಸಿದ್ದರು. ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವಾಗ ಚಪ್ಪಲಿ, ಶೂ ಧರಿಸುವುದಿಲ್ಲ. ಆದರೆ, ಸಚಿವ ಉಮೇಶ್‌ ಕತ್ತಿ ಎಲ್ಲವನ್ನೂ ಮರೆತು ಶೂ ಧರಿಸಿ ಪೂಜೆ ಸಲ್ಲಿಸುವ ಮೂಲಕ ಟೀಕೆಗೆ ಗುರಿಯಾದರು.

click me!