
ಹಾಸನ (ಜ.28): ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪ್ರತಿ ಇಲಾಖೆಗಳಿಂದ ಪ್ರತಿ ತಿಂಗಳು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಇದು ಸುಳ್ಳು ಎನ್ನುವುದಾದರೆ ಹಾಸನಾಂಬೆ ದೇವಸ್ಥಾನದ ಮುಂದೆ ಬಂದು ಆಣೆ ಮಾಡಲಿ ಎಂದು ಕಾಂಗ್ರೆಸ್ ಮುಖಂಡರಾದ ಬಿ.ಕೆ.ರಂಗಸ್ವಾಮಿ ಸವಾಲು ಹಾಕಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಇಲಾಖೆಯಲ್ಲೂ ಮಾಮೂಲಿ ವಸೂಲಿ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳು ಇದನ್ನು ಹೇಳುತ್ತಾರೆಯೇ ವಿನಹ ಇದಕ್ಕೆ ಯಾವ ಸಾಕ್ಷಿಯನ್ನೂ ಒದಗಿಸಲಾಗುವುದಿಲ್ಲ. ಹಾಗಾಗಿ ಶಾಸಕರಾದ ಪ್ರೀತಂಗೌಡರು ದೇವರ ಮುಂದೆ ಆಣೆ ಮಾಡಲಿ ನೋಡೋಣ ಎಂದು ಹೇಳಿದರು.
ದೇವೇಗೌಡರಿಗೆ ಬೆಂಬಲ ಕೊಡುತ್ತೇನೆ : ಬಿಜೆಪಿ ಶಾಸಕ ...
ಗೂಂಡಾ ವರ್ತನೆ: ಶಾಸಕ ಪ್ರೀತಂಗೌಡರು ರೈಲ್ವೆ ಮೇಲ್ಸೇತುವೆ ವಿಚಾರದಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಎನ್ಆರ್ ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗಾಗಿ ಆ ಮಾರ್ಗದಲ್ಲಿರುವ ಅಲ್ಪಸಂಖ್ಯಾತರ ಜಾಗಗಳನ್ನು ವಶಪಡಿಸಿಕೊಳ್ಳುವ ವಿಚಾರದಲ್ಲಿ ಶಾಸಕರು ಕಾನೂನು ರೀತಿ ಹೋಗದೆ ರಾಜಕೀಯ ಗೂಂಡಾಗಳನ್ನು ಮುಂದೆ ಬಿಟ್ಟುಕೊಂಡು ಅಲ್ಪಸಂಖ್ಯಾತರನ್ನು ಹೆದರಿಸಿ ಬೆದರಿಸುವ ತಂತ್ರ ಮಾಡುತ್ತಿದ್ದಾರೆ. ಕೇವಲ ಒಮ್ಮೇ ಶಾಸಕರಾಗಿರುವ ಇವರು ತಮ್ಮ ಮೊದಲ ಅವದಿಯಲ್ಲೇ ಈ ರೀತಿ ವರ್ತಿಸುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಸಲಹೆ ನೀಡಿರು.
'ಮುಂದಿನ ಚುನಾವಣೆಯಲ್ಲಿ ಎಚ್.ಡಿ ರೇವಣ್ಣ ಇಲ್ಲೇ ಸ್ಪರ್ಧಿಸಲಿ' ...
ಶಾಸಕರಿಂದ ಅಧಿಕಾರಿಗಳ ದುರುಪಯೋಗ: ಕಾಂಗ್ರೆಸ್ ಮುಖಂಡರಾದ ಎಚ್.ಕೆ.ಮಹೇಶ್ ಮಾತನಾಡಿ, ಶಾಸಕರು ತಮ್ಮ ದೌರ್ಜನ್ಯಕ್ಕಾಗಿ ಅದಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ರೈಲ್ವೆ ಮೇಲ್ಸೇತುವೆಗಾಗಿ ಜಾಗ ವಶಪಡಿಸಿಕೊಳ್ಳುವಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ದೌರ್ಜನ್ಯಕ್ಕೆ ಅದಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಗರಸಭೆ ಆಯುಕ್ತರ ಮೇಲೆ ಒತ್ತಡ ತಂದು ಗೌಸ್ ಮೋಹಿಯುದ್ದೀನ್ ಬಟ್ಟೆಅಂಗಡಿಗೆ ಬೀಗ ಹಾಕಿಸಿದ್ದರು. ಇದಕ್ಕೆ ಕಾರಣ ಸೆಂಟ್ ಫಿಲೋಮಿನಾ ಎದುರು ಗೌಸ್ ಮೋಹಿಯುದ್ದೀನ್ ಸೇರಿದಂತೆ ಹಲವು ಮುಸಲ್ಮಾನರ ಮನೆಗಳಿವೆ. ಈ ಜಾಗ ಮೇಲ್ಸೇತುವೆಗೆ ಬಳಕೆಯಾಗಲಿದೆ. ಜಾಗ ಬಿಟ್ಟುಕೊಡಲು ಮಾಲೀಕರು ಸಿದ್ಧರಿದ್ದಾರೆ. ಅದಕ್ಕೂ ಮೊದಲು ಸರ್ವೆ ಮಾಡಿಸಿ ಅದರಲ್ಲಿ ಸರ್ಕಾರಿ ಜಾಗ ಎಷ್ಟುತಮ್ಮ ಸ್ವಂತ ಜಾಗವೆಷ್ಟುಎನ್ನುವುದನ್ನು ಸ್ಪಷ್ಟಪಡಿಸಿ. ವಶಪಡಿಸಿಕೊಳ್ಳಲಾಗುವ ನಮ್ಮ ಜಾಗಕ್ಕೆ ಪರಿಹಾರ ನೀಡಿ ಎಂದು ಕೇಳಿದ್ದರು. ಆದರೆ, ಕಾನೂನು ರೀತಿ ಹೋಗದ ಶಾಸಕರು ತಮ್ಮ ರಾಜಕೀಯ ಗೂಂಡಾಗಳನ್ನು ಮುಂದೆಬಿಟ್ಟು ಗೌಸ್ ಮೋಹಿಯುದ್ದೀನ್ ಮಾಲೀಕರನ್ನು ಕಾರಿನಲ್ಲಿ ಎಳೆದೊಯ್ದರು. ಇದಾದ ನಂತರದಲ್ಲಿ ನಗರಸಭೆ ಅದಿಕಾರಿಗಳನ್ನು ಛೂ ಬಿಟ್ಟು ಅವರ ಬಟ್ಟೆಅಂಗಡಿಗೆ ಬೀಗ ಹಾಕಿಸಿದ್ದರು ಎಂದು ಆರೋಪಿಸಿದರು.