
ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ, ಶ್ವೇತಾ ಎಂಬಾಕೆ ತನ್ನ ಪ್ರಿಯಕರ ಕೆನತ್ ಜೊತೆ ಸೇರಿ ಹೆತ್ತ ತಂದೆ-ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ್ದಾಳೆ. ಲಿವ್-ಇನ್ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಕೊಲೆಗೆ ಕಾರಣವಾಗಿದ್ದು, ಪಾಂಡಿಚೆರಿಯಲ್ಲಿ ಶ್ವೇತಾಳನ್ನು ಬಂಧಿಸಲಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ತ್ರಿವಳಿ ಕೊಲೆ (Triple Murder Case) ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿ ಮಗಳೇ ಪೊಲೀಸರ ಮುಂದೆ ಕೊಲೆಯ ಭಯಾನಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ. ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನೇ ಪ್ರಿಯಕರನ ಜೊತೆ ಸೇರಿ ಅತ್ಯಂತ ಕ್ರೂರವಾಗಿ ಹತ್ಯೆಗೈದ ಶ್ವೇತಾ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ತನಿಖೆ ವೇಳೆ ಆಕೆ ನೀಡಿರುವ ಒಂದೊಂದು ಹೇಳಿಕೆಗಳು ಕೂಡ ಪೊಲೀಸರನ್ನೇ ಬೆಚ್ಚಿಬೀಳಿಸುವಂತಿವೆ.
ಪಂಚಾಯ್ತಿ ಮಾಡಲು ಬಂದವರ ಹೆಣ ಉರುಳಿಸಿದ ಪ್ರೇಮಿಗಳು!
ಆರೋಪಿ ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದಳು. ಈ ವಿಷಯ ಹೆತ್ತವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಮಗಳಿಗೆ ಬುದ್ಧಿ ಹೇಳಿ, ಬುದ್ಧಿ ಕಲಿಸಲು ತಂದೆ, ತಾಯಿ ಹಾಗೂ ತಂಗಿ ಅಪಾರ್ಟ್ಮೆಂಟ್ನ ಫ್ಲಾಟ್ಗೆ ಬಂದಿದ್ದರು. ಇಬ್ಬರ ನಡುವೆ ಪಂಚಾಯ್ತಿ ನಡೆಯುತ್ತಿದ್ದಾಗಲೇ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪ್ರೇಮಿಗಳಿಬ್ಬರು ಸೇರಿ ಒಬ್ಬೊಬ್ಬರನ್ನೇ ಭೀಕರವಾಗಿ ಕೊಚ್ಚಿ ಕೊಂದಿದ್ದಾರೆ.
ಅಮ್ಮನ ರಕ್ತ ಒರೆಸುವಾಗಲೇ ಎಂಟ್ರಿ ಕೊಟ್ಟ ಅಪ್ಪ!
ಆವತ್ತು ಆ ಫ್ಲಾಟ್ನಲ್ಲಿ ನಡೆದ ಘಟನೆಯನ್ನು ಶ್ವೇತಾ ಪೊಲೀಸರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಮೊದಲು ತಾಯಿಯನ್ನು ಕೊಲೆ ಮಾಡಲಾಗಿತ್ತು. ಹತ್ಯೆ ನಡೆಸಿ ಬೆಡ್ರೂಮ್ನಲ್ಲಿ ಬಿದ್ದಿದ್ದ ರಕ್ತದ ಮಡುವನ್ನು ಶ್ವೇತಾ ಒರೆಸುತ್ತಿದ್ದಳು. ಅದೇ ಸಮಯಕ್ಕೆ ಸರಿಯಾಗಿ ತಂದೆ ರೂಮ್ ಒಳಗೆ ಬಂದಿದ್ದಾರೆ. ತಾಯಿಯ ಕೊಲೆಯನ್ನು ಮುಚ್ಚಿಡುವ ಮುನ್ನವೇ ತಂದೆ ನೋಡಿದ್ದರಿಂದ, ಸಿಕ್ಕಿಬೀಳುವ ಭಯದಲ್ಲಿ ತಂದೆ ಹಾಗೂ ತಂಗಿಯನ್ನೂ ಕೂಡ ಇಬ್ಬರು ಸೇರಿ ಅತ್ಯಂತ ಕ್ರೂರವಾಗಿ ಮುಗಿಸಿಬಿಟ್ಟಿದ್ದಾರೆ.
ಪಾಂಡಿಚೆರಿಯಲ್ಲಿ ಆರೋಪಿ ಲಾಕ್, ಪ್ರಿಯಕರನೂ ಸಿಕ್ಕಿಬಿದ್ದ
ಮೂರು ಹೆಣಗಳನ್ನು ಮನೆಯಲ್ಲೇ ಹಾಕಿ ಆರೋಪಿಗಳಾದ ಶ್ವೇತಾ ಮತ್ತು ಕೆನತ್ ಬೈಕ್ನಲ್ಲಿ ಎಸ್ಕೇಪ್ ಆಗಿದ್ದರು. ಬೆಂಗಳೂರಿನಿಂದ ತಮಿಳುನಾಡು ಮಾರ್ಗವಾಗಿ ಪಾಂಡಿಚೆರಿಗೆ ತೆರಳುವ ಪ್ಲಾನ್ ಇವರದ್ದಾಗಿತ್ತು. ಆದರೆ ಮಾರ್ಗಮಧ್ಯೆ ಬೈಕ್ ರಿಪೇರಿಗೆ ಬಂದಿದ್ದರಿಂದ ಪೊಲೀಸರಿಗೆ ಸಿಕ್ಕಿಬೀಳುವ ಭಯ ಕಾಡಿದೆ. ಹೀಗಾಗಿ ಇಬ್ಬರೂ ಬೇರೆಯಾಗಲು ನಿರ್ಧರಿಸಿ, ಕೆನತ್ ಶ್ವೇತಾಳನ್ನು ಒಂದು ಬಸ್ ಹತ್ತಿಸಿ ತಾನು ಬೇರೆ ಬಸ್ ಹತ್ತಿ ಪರಾರಿಯಾಗಿದ್ದಾನೆ. ಸದ್ಯ ತಾಂತ್ರಿಕ ನೆರವಿನಿಂದ ಪೊಲೀಸರು ಪಾಂಡಿಚೆರಿಯಲ್ಲಿ ಶ್ವೇತಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪರಾರಿಯಾಗಿರುವ ಆಕೆಯ ಪ್ರಿಯಕರ ಕೆನತ್ ಕೂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಕೋರ್ಟ್ಗೆ ಹಾಜರುಪಡಿಸಿದಾಗ 15 ದಿನ ಪೊಲೀಸ್ ಕಸ್ಟಡಿಗೆ ಒಪಪಿಸಲಾಗಿದೆ.