ಯಮುನೆ ಅಬ್ಬರ ಇಳಿಕೆ: ದಿಲ್ಲಿ ನಿಟ್ಟುಸಿರು; ಪರಿಹಾರ ಕೆಂದ್ರಗಳಿಂದ ಮನೆಗಳಿಗೆ ಹೊರಟ ಜನ

By Kannadaprabha NewsFirst Published Jul 17, 2023, 12:48 PM IST
Highlights

ರಾಷ್ಟ್ರ ರಾಜಧಾನಿಯಲ್ಲಿ ಜನಜೀವನ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಿರಾಶ್ರಿತರ ಕೇಂದ್ರಕ್ಕೆ ಆಗಮಿಸಿದ್ದ ಜನರೆಲ್ಲ ತಮ್ಮ ಮನೆಗಳತ್ತ ತೆರಳುತ್ತಿದ್ದು, ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತಿದೆ.

ನವದೆಹಲಿ (ಜುಲೈ 17, 2023): ಕಳೆದ 45 ವರ್ಷದಲ್ಲೇ ದಾಖಲೆಯ ಪ್ರಮಾಣದಲ್ಲಿ ಉಕ್ಕೇರಿ ದಿಲ್ಲಿಯಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಸಿದ್ದ ಯಮುನಾ ನದಿ ಮಟ್ಟ ಭಾನುವಾರ ಮತ್ತಷ್ಟು ಇಳಿಕೆ ಕಂಡಿದ್ದು, ನದಿ ನೀರಿನ ಮಟ್ಟ 205.9 ಮೀ.ಗೆ ಕುಸಿದಿದೆ. ಇದರಿಂದಾಗಿ, ಆತಂಕಕ್ಕೀಡಾಗಿದ್ದ ದೆಹಲಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಜನಜೀವನ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಿರಾಶ್ರಿತರ ಕೇಂದ್ರಕ್ಕೆ ಆಗಮಿಸಿದ್ದ ಜನರೆಲ್ಲ ತಮ್ಮ ಮನೆಗಳತ್ತ ತೆರಳುತ್ತಿದ್ದು, ಹಲವೆಡೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗುತ್ತಿದೆ.

ಕಳೆದುಕೊಂಡವರಿಗೆ ಹೊಸ ಆಧಾರ್‌:
ಈ ನಡುವೆ ‘ಪ್ರವಾಹದಲ್ಲಿ ತಮ್ಮ ಆಧಾರ್‌ ಕಾರ್ಡ್‌ ಸೇರಿದಂತೆ ಇತರ ದಾಖಲೆಗಳನ್ನು ಕಳೆದುಕೊಂಡ ಜನರಿಗಾಗಿ ಸರ್ಕಾರ ವಿಶೇಷ ಕ್ಯಾಂಪ್‌ ಸ್ಥಾಪಿಸಲಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಶಾಲಾ ಸಮವಸ್ತ್ರದ ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

Latest Videos

ಇದನ್ನು ಓದಿ: ಯಮುನೆಯ ಅವಾಂತರ: ನೀರಲ್ಲೇ ಮುಳುಗಿದ ದೆಹಲಿಗೀಗ ಜೀವಜಲದ ಕೊರತೆ!

ಅಲ್ಲದೇ ‘ಯಮುನಾ ನದಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಸದ್ಯದಲ್ಲೇ ಭಾರೀ ಮಳೆಯಾಗದಿದ್ದರೆ ಪರಿಸ್ಥಿತಿ ಸಾಮಾನ್ಯವಾಗಲಿದೆ. ಆದರೆ ಪ್ರವಾಹ ಸ್ಥಿತಿ ಸಂಪೂರ್ಣ ಮುಗಿದಿಲ್ಲ’ ಎಂದಿದ್ದಾರೆ.

ನೀರಿನ ಮಟ್ಟ ಇಳಿಕೆ, ವಹಿವಾಟು ಶುರು:
ಗುರುವಾರ ಅತಿ ಗರಿಷ್ಠ 208.66 ಮೀ.ಗೆ ಏರಿದ್ದ ನದಿ ಮಟ್ಟ, ಭಾನುವಾರ 205.91 ಮೀ.ಗೆ ಇಳಿದಿದೆ. ಹೀಗಾಗಿ ನಗರ ಬಹುತೇಕ ಅಪಾಯಮಟ್ಟದಿಂದ ಹೊರಬಂದಂತಾಗಿದೆ. ನೀರಿನ ಮಟ್ಟ 205 ಮೀ.ಗಿಂತ ಕೆಳಗೆ ಇಳಿದರೆ, ಅದು ಸಂಪೂರ್ಣ ಅಪಾಯಮುಕ್ತ ಎನ್ನಿಸಿಕೊಳ್ಳುತ್ತದೆ.

ಇದನ್ನೂ ಓದಿ: ಕಣ್ಮರೆಯಾಗುತ್ತಾ ಭಾರತದ ಪ್ರಮುಖ ನಗರ? ಕೇಜ್ರಿವಾಲ್ ಮನೆ ಆವರಣಕ್ಕೆ ನುಗ್ಗಿದ ಯಮುನಾ ನೀರು!

ಜಲಾವೃತವಾಗಿದ್ದ ಕಾಶ್ಮೀರಿ ಗೇಟ್‌ ಪ್ರದೇಶದಲ್ಲಿ ಜನರು ಅಂಗಡಿಗಳನ್ನು ತೆರೆಯುತ್ತಿದ್ದು, ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಭಾನುವಾರ ನಗರದಲ್ಲಿ ಅಲ್ಪಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಜನ ಮತ್ತೆ ಆತಂಕಕ್ಕೆ ಸಿಲುಕುವಂತಾಗಿತ್ತು. ಆದರೆ ಯಾವುದೇ ಅಪಾಯವಿಲ್ಲ ಎನ್ನಲಾಗಿದೆ.

ಇನ್ನು ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರಿಂದ ಪ್ರವೇಶ ಮತ್ತು ನಿರ್ಗಮನಗಳನ್ನು ಸ್ಥಗಿತಗೊಳಿಸಲಾಗಿದ್ದ ಮೆಟ್ರೋ ನಿಲ್ದಾಣಗಳನ್ನು ಭಾನುವಾರ ಪ್ರಯಾಣಿಕರಿಗೆ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ.

ಇದನ್ನೂ ಓದಿ: ಅಪಾಯದ ಮಟ್ಟ ಮೀರಿ 45 ವರ್ಷದ ದಾಖಲೆ ಮುರಿದ ಯಮುನಾ ನದಿ, ತುರ್ತು ಸಭೆ ಕರೆದ ಸಿಎಂ!

ನಿರಾಶ್ರಿತರ ಕೇಂದ್ರಗಳಿಗೂ ನುಗ್ಗಿದ ನೀರು: ಪರದಾಟ
ಈ ನಡುವೆ ಹಲವೆಡೆ ಅದರಲ್ಲೂ ನಗರದ ಯಮುನಾ ಬಜಾರ್‌ನಲ್ಲಿರುವ ಪರಿಹಾರ ಕೇಂದ್ರಗಳೂ ಅಥವಾ ಟೆಂಟ್‌ಗಳು ಜಲಾವೃತವಾಗಿವೆ. ಅಲ್ಲದೇ ಇಲ್ಲಿ ಅವ್ಯವಸ್ಥೆಯೇ ತುಂಬಿ ತುಳುಕುತ್ತಿದೆ ಎಂದು ಜನರು ಆಕ್ರೋಶಿಸಿದ್ದಾರೆ. ಜನರು ಊಟ ಮತ್ತು ನೀರಿಗಾಗಿ ಪರದಾಡಬೇಕಾಗಿದೆ. ಹಾಗೂ ಊಟಕ್ಕಾಗಿ ಜನರು ತಾಸುಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಒಟ್ಟು 2,700 ಟೆಂಟ್‌ಗಳನ್ನು ನಿರ್ಮಿಸಿದ್ದು 27,000 ಜನರು ಪರಿಹಾರ ಟೆಂಟ್‌ಗಳಲ್ಲಿ ವಾಸಿಸಲು ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಭಾರತದಲ್ಲಿ ಜಲಪ್ರಳಯ : ಅಮರನಾಥ ಯಾತ್ರೆಗೆ ಹೋಗಿ ನಿರಾಶ್ರಿತ ಕೇಂದ್ರ ಸೇರಿದ ಕನ್ನಡಿಗರ ಪರದಾಟ

click me!