
ಕಟಕ್: ಮಹಿಳೆಯೊಬ್ಬಳು ತಾನು ಮಾಡುತ್ತಿರುವ ಕೃತ್ಯವನ್ನು ವೀಡಿಯೋ ಮಾಡುವಂತೆ ಅಂಗಡಿ ಮಾಲೀಕರೊಬ್ಬರಿಗೆ ತಿಳಿಸಿ ಬಳಿಕ ಒಡಿಶಾದ ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಳಿಕ ಬೆಂಕಿಯನ್ನು ಹೈಕೋರ್ಟ್ ಆವರಣಕ್ಕೆ ಎಸೆಯಲು ಮುಂದಾದಂತಹ ಘಟನೆ ಕಟಕ್ನಲ್ಲಿ ನಡೆದಿದೆ. ಘಟನೆಯಲ್ಲಿ ಒಂದು ಕಾರು ಹಾಗೂ ಮೂರು ಇತರ ವಾಹನಗಳಿಗೆ ಹಾನಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 38 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಆದರೆ ಆಕೆಯ ಈ ಕೃತ್ಯಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ನಿನ್ನೆ ಬೆಳಗ್ಗೆ 11:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬೆಂಕಿ ಬೇಗನೆ ಹಲವು ವಾಹನಗಳಿಗೆ ವ್ಯಾಪಿಸಿದೆ. ಘಟನೆ ನಡೆದ ಸ್ಥಳದಲ್ಲಿ ಹಲವಾರುವ ವಾಹನಗಳನ್ನು ನಿಲ್ಲಿಸಲಾಗಿತ್ತು. ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಆವರಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ಮತ್ತಷ್ಟು ಹರಡುವ ಮೊದಲೇ ಅದನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಸಮಯದಲ್ಲಿ ವಾಹನಗಳು ಹಾಗೂ ಹೆಚ್ಚಿನ ಜನರು ಅಲ್ಲಿಲ್ಲದ ಕಾರಣ, ಯಾವುದೇ ಸಾವು ನೋವುಗಳು ವರದಿಯಾಗಿಲ್ಲ, ಆದರೆ ನಾಲ್ಕು ವಾಹನಗಳಿಗೆ ತೀವ್ರ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ : ಮದುವೆ ಮಾಡಿಸಲಿಲ್ಲ ಎಂದು ಹೆತ್ತಮ್ಮನನ್ನೇ ಕೊಂದ ಪಾಪಿ ಮಗ
ಹೈಕೋರ್ಟ್ ಮುಂದೆ ಹೀಗೆ ಭಂಡ ಧೈರ್ಯದಿಂದ ಬೆಂಕಿ ಹಚ್ಚಿದ ಆರೋಪಿಯನ್ನು ಮಿನಾಟಿ ಸಾಹೂ ಎಂದು ಗುರುತಿಸಲಾಗಿದ್ದು, ಲಾಲ್ಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಮಹಿಳೆ ವಾಸಿಸುತ್ತಿದ್ದಾರೆ. ಪೆಟ್ರೋಲ್ ತುಂಬಿದ ಎರಡು ಬಾಟಲಿಗಳನ್ನು ಹೊಂದಿರುವ ಚೀಲವನ್ನು ಹೊತ್ತುಕೊಂಡು ಮಿನಾಟಿ ಸಾಹೂ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಆಕೆ ಹತ್ತಿರದಲ್ಲಿದ್ದ ಅಂಗಡಿಯೊಂದರ ವ್ಯಾಪಾರಸ್ಥರಿಗೆ ತನ್ನ ಸೆಲ್ ಫೋನ್ ನೀಡಿ ತನ್ನನ್ನು ರೆಕಾರ್ಡ್ ಮಾಡುವಂತೆ ಹೇಳಿದ್ದಾಳೆ. ಬಳಿಕ ಹೈಕೋರ್ಟ್ ಆವರಣದ ಹೊರಗೆ ಆಕೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾಳೆ. ವರದಿಯ ಪ್ರಕಾರ ಆಕೆ ಪೆಟ್ರೋಲ್ ಇದ್ದ ಬಾಟಲನ್ನು ಹೈಕೋರ್ಟ್ ಆವರಣದೊಳಗೆ ಎಸೆಯಲು ಯತ್ನಿಸಿದ್ದು, ಆದರೆ ಅದು ಗುರಿತಪ್ಪಿ ಇತರ ವಾಹನಗಳ ಮೇಲೆ ಬಿದ್ದಿದೆ. ಪರಿಣಾಮ ವಾಹನಗಳು ಬೆಂಕಿಗಾಹುತಿಯಾಗಿವೆ. ಘಟನೆಯ ಬಳಿಕ ಮಹಿಳೆ ಅಂಗಡಿ ಮಾಲೀಕರ ಬಳಿ ತಾನು ರೆಕಾರ್ಡ್ ಮಾಡಲು ನೀಡಿದ್ದ ಮೊಬೈಲ್ ಫೋನ್ ಕೇಳಿ ಪಡೆದು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಖಿಲಾರಿ ರಿಷಿಕೇಶ್ ದ್ನ್ಯಾಂಡಿಯೊ ತಿಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವರು ಬಾಟಲ್ಗಳಲ್ಲಿ ಪೆಟ್ರೋಲ್ ಖರೀದಿಸಿದ ಪೆಟ್ರೋಲ್ ಪಂಪ್ಗೆ ಪೊಲೀಸರು ಹೋಗಿ ವಿಚಾರಣೆ ನಡೆಸಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಅವರು ಎಲ್ಲಿಂದ ಪೆಟ್ರೋಲ್ ಸಂಗ್ರಹಿಸಿದರು ಎಂಬುದರ ಮೂಲವನ್ನು ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಅವರ ಕೃತ್ಯದ ಹಿಂದಿನ ನಿಖರವಾದ ಉದ್ದೇಶವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಡಿಸಿಪಿ ಖಿಲಾರಿ ರಿಷಿಕೇಶ್ ಹೇಳಿದರು.
ಇದನ್ನೂ ಓದಿ: ಎಕ್ಸ್ಪ್ರೆಸ್ ರೈಲಿನ ಶೌಚಾಲಯದ ಬಾಗಿಲು ತೆರೆದ ಪ್ರಯಾಣಿಕನಿಗೆ ಆಘಾತ: ನಡುಗುತ್ತಾ ಅಳುತ್ತಿತ್ತು ನವಜಾತ ಶಿಶು
ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಹೈಕೋರ್ಟ್ನ ವಕೀಲ ಜ್ಯೋತಿರಂಜನ್ ಮೊಹಂತಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು,ನ್ಯಾಯಾಲಯದ ಸಂಕೀರ್ಣದ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಮಗೆ ಸ್ವಲ್ಪ ಅಸುರಕ್ಷಿತ ಭಾವನೆ ಇದೆ. ಅವರು ಸುಡುವ ಬಾಟಲಿಗಳನ್ನು ಹೈಕೋರ್ಟ್ ಕಡೆಗೆ ಎಸೆಯುತ್ತಿದ್ದರು ಮತ್ತು ಅದೃಷ್ಟವಶಾತ್, ಅವು ಆವರಣವನ್ನು ತಲುಪಲಿಲ್ಲ ಮತ್ತು ಬದಲಾಗಿ ವಾಹನಗಳ ಮೇಲೆ ಬಿದ್ದವು. ಬಾಟಲಿಗಳು ನ್ಯಾಯಾಲಯದ ಆವರಣವನ್ನು ತಲುಪಿದ್ದರೆ ಅದು ಮಾರಕವಾಗುತ್ತಿತ್ತು ಎಂದು ವಕೀಲರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ