Viral video: ಮಹಿಳೆ ಮೇಲೆ ಚೀರಾಡಿದ US ದೂತವಾಸ ಕಚೇರಿ ಅಧಿಕಾರಿ

By Suvarna NewsFirst Published Dec 1, 2021, 4:16 PM IST
Highlights
  •  ಭಾರತೀಯ ದೂತವಾಸದ ಕಚೇರಿ ಅಧಿಕಾರಿಯ ದುರ್ವರ್ತನೆ 
  • ವೀಸಾ ಕೇಳಿ ಬಂದ ಮಹಿಳೆಯ ಮೇಲೆ ಚೀರಾಡಿದ ಅಧಿಕಾರಿ
  • ತಂದೆಯ ಸಾವಿನ ಹಿನ್ನೆಲೆ ಭಾರತಕ್ಕೆ ಆಗಮಿಸಲು ಬಯಸಿದ್ದ ಮಹಿಳೆ

ನ್ಯೂಯಾರ್ಕ್‌: ಭಾರತಕ್ಕೆ ತೆರಳಲು  ವೀಸಾಗೆ ಅರ್ಜಿ ಸಲ್ಲಿಸಲು ಬಂದ ಮಹಿಳೆಯ ಮೇಲೆ  ನ್ಯೂಯಾರ್ಕ್‌(New York)ನಲ್ಲಿರುವ ಭಾರತೀಯ ದೂತವಾಸದ ಕಚೇರಿಯ ಅಧಿಕಾರಿಯೊಬ್ಬರು ಸಿಟ್ಟಿನಿಂದ ಚೀರಾಡಿದ ಘಟನೆ ನಡೆದಿದ್ದು, ಅಧಿಕಾರಿ ಸಿಟ್ಟಿನಿಂದ ಕೂಗಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಭಾರತದಲ್ಲಿರುವ ತನ್ನ ತಂದೆ ತೀರಿ ಹೋದ ಹಿನ್ನೆಲೆ ಅಮೆರಿಕಾ(America)ದಲ್ಲಿದ್ದ ಟೀನಾ ಎಂಬ ಮಹಿಳೆ ನವಂಬರ್‌ 24ರಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಗೆ ಭಾರತಕ್ಕೆ ಶೀಘ್ರವಾಗಿ ತೆರಳುವ ಸಲುವಾಗಿ ವೀಸಾಗೆ ಅರ್ಜಿ ಸಲ್ಲಿಸಲು ತೆರಳಿದ್ದಾರೆ.  ಈ ವೇಳೆ ತಾಳ್ಮೆ ಕಳೆದುಕೊಂಡಿದ್ದ ಅಲ್ಲಿನ ಅಧಿಕಾರಿ ವಿಜಯ್‌ ಶಂಕರ್‌ ಪ್ರಸಾದ್‌, ಟೀನಾ(tina) ಮೇಲೆ ಕೋಪದಿಂದ ರೇಗಾಡಿ ಅವರ ಅರ್ಜಿಯನ್ನು ಹಾಗೂ ವೀಸಾಗೆ ನೀಡಿದ ಹಣವನ್ನು ಮರಳಿಸಿ ಹೊರಟು ಹೋಗಿ ಎಂದಿದ್ದಾರೆ.

 

ಈ ವೇಳೆ ಮಹಿಳೆ ಯಾಕೆ ನೀವು ಕೋಪಗೊಂಡಿದ್ದೀರಾ ಎಂದು ಕೇಳಿದ್ದಾಳೆ. ಇದಕ್ಕೂ ಪ್ರತಿಕ್ರಿಯಿಸದ ಅಧಿಕಾರಿ, ಟೀನಾಗೆ ನೀವು ನೀಡಿದ ಅರ್ಜಿ ಹಾಗೂ ಹಣವನ್ನು ತೆಗೆದುಕೊಂಡು ಹೊರಡಿ ಎಂದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌ ಆದ ಬಳಿಕ ಮಹಿಳೆಗೆ ವೀಸಾ ಸಿಕ್ಕಿದ್ದು, ಅಧಿಕಾರಿ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ. 

ನಾರ್ವೆ ದೂತವಾಸ ಕಚೇರಿಯ ಮೇಲೆ ತಾಲಿಬಾನ್‌ ದಾಳಿ: ವೈನ್‌ ಬಾಟಲ್‌, ಪುಸ್ತಕ ನಾಶ!

ಅಮೆರಿಕಾದಲ್ಲಿರುವ ಭಾರತೀಯ ದೂತವಾಸ ಕಚೇರಿಯ ಹಿರಿಯ ಅಧಿಕಾರಿಗಳು ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವೀಸಾಗೆ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ತ್ವರಿತವಾಗಿ ವೀಸಾ ನೀಡಲಾಗಿದೆ. ದೂತವಾಸದ ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ನಾವು ಸದಾ ದಕ್ಷ ಸೇವೆಗೆ ಬದ್ಧವಾಗಿದ್ದೇವೆ. ಕೋವಿಡ್‌ ಸಂದರ್ಭದಲ್ಲೂ ನಾವಿದನ್ನು ಪಾಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

ರೇಗಾಡಿದವರಿಗೆ ಟೀ ತಂದುಕೊಟ್ಟ 'ಹರಿವಂಶ್‌ಜೀ', ಉಪಸಭಾಪತಿಯ ನಡೆಗೆ ಭೇಷ್ ಎಂದ ಮೋದಿ!

ಘಟನೆಯ ಬಗ್ಗೆ ಮಹಿಳೆ ಕೂಡ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ಪೋಟೋದಲ್ಲಿರುವ ಅಧಿಕಾರಿ ವಿಜಯ್‌ ಶಂಕರ್‌ ಪ್ರಸಾದ್‌ (Vijay Shankar Prasad)ಅವರಿಂದಾಗಿ ನನಗೆ ನನ್ನ ತಂದೆಯ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗುವುದನ್ನು ಕಳೆದುಕೊಳ್ಳುತ್ತಿದೆ. ಆದರೆ ದೂತವಾಸದಲ್ಲಿದ್ದ ಕೆಲವು ನಿಜವಾದ ಪರಹಿತ ಚಿಂತನೆಯ ಭಾರತೀಯರಿಂದಾಗಿ ನಾನು ವೀಸಾವನ್ನು ತ್ವರಿತವಾಗಿ ಪಡೆದುಕೊಂಡೆ. ದೂತವಾಸದ ಅಧಿಕಾರಿಗಳಿಂದ ಬೆದರಿಸಲ್ಪಟ್ಟ ಅನೇಕ ಜನರ ಪೈಕಿ ನಾನು ಹಾಗೂ ನನ್ನ ಪತಿ ಕೂಡ ಒಬ್ಬರು ಎಂದು ನಾನು ಭಾವಿಸುವೆ. ಇದು ಬದಲಾವಣೆ ಮತ್ತು ಹೊಣೆಗಾರಿಕೆಯ ಸಮಯ. ಈತ ನನಗೆ ನಾನು ಇದುವರೆಗೆ ಅನುಭವಿಸಿದ್ದಕ್ಕಿಂತ ಹೆಚ್ಚು ಮಾನಸಿಕ ಆಘಾತವನ್ನು ನೀಡಿದ ವ್ಯಕ್ತಿ ಎಂದು ನಂಬಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅಧಿಕಾರಿಗಳನ್ನು ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ನೇಮಿಸಲಾಗುತ್ತದೆ ಆದರೆ ಈತ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಮುಗ್ಧ ಹಾಗೂ ದುರ್ಬಲ ವ್ಯಕ್ತಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಟೀನಾ ಹೇಳಿದ್ದಾರೆ. 

This is Vijay Shankar Prasad - the visa officer in charge . Is this the representation of India? pic.twitter.com/bsqFUo4Tsz

— Tina (@Tina71699557)

 

ಟೀನಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ವೀಡಿಯೋ ಹಾಕುತ್ತಿದ್ದಂತೆ ನೆಟ್ಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. 

click me!