ಫೋಟೋಗ್ರಾಫರ್ ಕರೆಸಿಲ್ಲ ಎಂದು ಮದ್ವೆ ನಿರಾಕರಿಸಿದ ವಧು

By Anusha KbFirst Published May 30, 2022, 1:34 PM IST
Highlights

ಉತ್ತರಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಗೆ ಫೋಟೋಗ್ರಾಫರ್‌ನ್ನು ಕರೆಸಿಲ್ಲ ಎಂದು ವಧು ಮದುವೆಯನ್ನೇ ನಿರಾಕರಿಸಿದ್ದಾಳೆ. 
 

ಮದುವೆಗೆ ಫೋಟೋಗ್ರಾಫರ್ ಕರೆಸಿಲ್ಲ ಎಂದು ವಧು ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮದುವೆ ಸಂಪೂರ್ಣ ಮುಗಿಯುವವರೆಗೂ ಇವರ ಮದ್ವೆ ಆಗುವುದು ಇಲ್ಲವೋ ಎಂದು ಹೇಳಲಾಗದು. ಏಕೆಂದರೆ ಅನೇಕ ಮದುವೆಗಳು ಮದುವೆ ಮಂಟಪದಲ್ಲಿ ಕ್ಷುಲ್ಲಕ ಕಾರಣಕ್ಕೆ ನಿಂತ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಕೆಲ ದಿನಗಳ ಹಿಂದೆ ವರನ ತಲೆಯಲ್ಲಿ ಕೂದಲಿಲ್ಲ ಎಂದು ವಧು ಮದುವೆ ಮಂಟಪದಲ್ಲಿ ಮದುವೆ ನಿರಾಕರಿಸಿದ ಘಟನೆ ನಡೆದಿತ್ತು. ಹಾಗೆಯೇ ಈಗ ಮದ್ವೆಗೆ ಫೋಟೋಗ್ರಾಫರ್ ಕರೆಸಿಲ್ಲ ಎಂದು ವಧು ಮದ್ವೆ ನಿರಾಕರಿಸಿದ್ದಾಳೆ.

ಉತ್ತರಪ್ರದೇಶದ ಕಾನ್ಪುರ ದೇಹತ್‌ನ ಮಂಗಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ರೈತನೋರ್ವನ ಮಗಳ ಮದುವೆಯನ್ನು ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಗದಿಪಡಿಸಲಾಗಿತ್ತು. ಮದುವೆಗೆ ಸಕಲ ಸಿದ್ಧತೆಗಳು ನಡೆದಿದ್ದವು. ಗಂಡಿನ ಕಡೆಯವರು ಮೆರವಣಿಗೆ ಕೂಡ ಆಗಮಿಸಿತ್ತು. ಹೂ ಹಾರ ಬದಲಾಯಿಸಿಕೊಳ್ಳುವ ಸಮಾರಂಭಕ್ಕೆ ಮದುವೆ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಆದರೆ ಇಷ್ಟೆಲ್ಲಾ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಛಾಯಾಗ್ರಾಹಕ ಇಲ್ಲ ಎಂದು ತಿಳಿದ ವಧು ಮದುವೆ ನಿರಾಕರಿಸಿ ನೆರೆ ಮನೆಗೆ ಹೋಗಿ ಕುಳಿತಿದ್ದಾಳೆ. 

ಹೂ ಹಾರ ಹಾಕಲು ಕೊರಳೊಡ್ಡದ ವಧು: ವರನ ಟ್ರಿಕ್ಸ್‌ಗೆ ಕ್ಲೀನ್‌ ಬೌಲ್ಡ್‌
 

ಈ ವೇಳೆ ಎಲ್ಲರೂ ಹುಡುಗಿಯ ಮನವೊಲಿಸಲು ತುಂಬಾ ಪ್ರಯತ್ನಿಸಿದ್ದು ಈ ವೇಳೆ ಆಕೆ, ಇಂದು ನಮ್ಮ ಮದುವೆಯ ಬಗ್ಗೆ ಕಾಳಜಿ ವಹಿಸದ ವ್ಯಕ್ತಿ ಮುಂದೆ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂದು ಪ್ರಶ್ನಿಸಿದ್ದಾಳೆ. ಕುಟುಂಬದ ಹಿರಿಯರೂ ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಪ್ರಯತ್ನ ವ್ಯರ್ಥವಾಗಿದೆ. ಬಳಿಕ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿನಿಮಯ ಮಾಡಿಕೊಂಡ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಮಂಗಳಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಡೋರಿ ಲಾಲ್ ಮಾತನಾಡಿ, ಪ್ರಕರಣವನ್ನು ಪರಸ್ಪರ ಬಗೆಹರಿಸಿಕೊಳ್ಳಲಾಗಿದೆ. ಎರಡೂ ಪಕ್ಷಗಳು ಪರಸ್ಪರ ನೀಡಿದ ಸರಕು ಮತ್ತು ಹಣವನ್ನು ಹಿಂದಿರುಗಿಸಿದರು. ಇದಾದ ನಂತರ, ವರನು ವಧುವಿಲ್ಲದೆ ತನ್ನ ಊರಿಗೆ ಹೊರಟುಹೋದನು ಎಂದು ಅವರು ಹೇಳಿದರು. ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಬಗ್ಗೆ ವಿವಾದವಿತ್ತು. ವರನ ಕಡೆಯವರು ವ್ಯವಸ್ಥೆ ಮಾಡಲಿಲ್ಲ ಎಂದು ಹುಡುಗಿ ಕೋಪಗೊಂಡು ಮದುವೆಯಾಗಲು ನಿರಾಕರಿಸಿದಳು ಎಂದು ಅವರು ಹೇಳಿದರು. 

ಕೆಲ ದಿನಗಳ ಹಿಂದೆ ವರನೊಬ್ಬ ತನ್ನ ಮದುವೆಯ ದಿನವೇ ಕುಡಿದು ಮೋಜು ಮಸ್ತಿನಲ್ಲಿ ತೊಡಗಿ ಮದ್ವೆಗೆ ವಿಳಂಬವಾಗಿ ಬಂದ ಎಂಬ ಕಾರಣಕ್ಕೆ ವಧು ಆತನೊಂದಿಗೆ ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿತ್ತು.

ಕನಸಿನ ಹುಡುಗಿಯನ್ನು ಮದ್ವೆಯಾದೆ ಎಂದು ಖುಷಿಯಲ್ಲಿದ್ದ ಹುಡುಗ, ಆಕೆ ಹೆಣ್ಣಲ್ಲ ಎಂದು ತಿಳಿದು ಶಾಕ್ !

ಹೆಚ್ಚಾಗಿ ವಧುಗಳೇ ಕೊನೆ ಕ್ಷಣದಲ್ಲಿ ಮದುವೆಯನ್ನು ನಿರಾಕರಿಸುತ್ತಿದ್ದಾರೆ. ಏಕೆಂದರೆ ಇಂದು ಹೆಣ್ಣು ಮಕ್ಕಳು ಆರ್ಥಿಕವಾಗಿ ಸಧೃಡವಾಗಿದ್ದು, ಒತ್ತಾಯದ ಮದುವೆಗಳಿಗೆ ತಲೆ ಕೊಡಲು ಸಿದ್ಧರಿಲ್ಲ. ಅದರ ಜೊತೆಗೆ ತಮ್ಮಿಷ್ಟದ ಆಯ್ಕೆಗಳಿಗೆ ಹೆಣ್ಣು ಮಕ್ಕಳು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹೆಣ್ಣಿಗೆ ನೂರೆಂಟು ಯೋಗ್ಯತೆಗಳನ್ನು ಕೇಳುವ ಸಮಾಜ ಗಂಡಿಗೆ ಗಂಡಾಗಿದ್ದರೆ ಸಾಕು ಎಂಬಂತೆ ವರ್ತಿಸಿದ ಹಲವು ಘಟನೆಗಳು ನಮ್ಮ ಮುಂದೆಯೇ ನಡೆದಿದೆ. ಆದರೆ ಇಂದಿನ ವಧುಗಳು ಬಾಳ ಸಂಗಾತಿಯ ಆಯ್ಕೆಯಲ್ಲಿ ಸರ್ವ ಸ್ವತಂತ್ರರಾಗಿದ್ದಾರೆ. ಹೀಗಾಗಿ ಮದುವೆಯ ಮಂಟಪದಲ್ಲೇ ಗಟ್ಟಿ ಧೈರ್ಯ ಮಾಡಿ ವಧುಗಳು ಮದುವೆ ಮುರಿಯುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. 

click me!