ದೆಹಲಿಯಲ್ಲಿ ಕಂಡು ಕೇಳರಿಯದ ಮಾಲಿನ್ಯ : ಶಾಲಾ ಕಾಲೇಜುಗಳಿಗೆ ರಜೆ

By Kannadaprabha NewsFirst Published Nov 3, 2023, 9:15 AM IST
Highlights
  • ಪಂಜಾಬ್‌, ಹರ್‍ಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಹೊಗೆ
  • ಮಳೆ ಕೊರತೆ, ಚಳಿಯಿಂದ ವಾಯುಗುಣಮಟ್ಟ ಮತ್ತಷ್ಟು ಕುಸಿತ
  • ಜನರಿಗೆ ಉಸಿರಾಟ ಸಮಸ್ಯೆ, ಕೆಮ್ಮು, ನೆಗಡಿ, ಜ್ವರದ ಆತಂಕ
  • ಇಂದು ಮತ್ತು ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ವಲಯದಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿಮೀರಿದ್ದು, ಈ ಹಿಂದೆಂದೂ ಕಂಡು ಕೇಳರಿಯದಷ್ಟು ‘ಹೊಗೆಮಾಲಿನ್ಯ’ ಸೃಷ್ಟಿಯಾಗಿದೆ. ದಿಲ್ಲಿಯ ಆನಂದ ವಿಹಾರ್‌ ಪ್ರದೇಶದಲ್ಲಿ ವಾಯುಗುಣಮಟ್ಟ ಸೂಚ್ಯಂಕ ನಂಬಲಸಾಧ್ಯವಾದ 999 ಅಂಕಗಳಿಗೆ ಕುಸಿತವಾಗಿದೆ ಎಂದು ಖಾಸಗಿ ಹವಾಮಾನ ಸಂಸ್ಥೆಯೊಂದು ಹೇಳಿದೆ. ಅಲ್ಲದೆ, ಇಡೀ ನಗರದ ಸರಾಸರಿ ಸೂಚ್ಯಂಕವು ‘ಅತಿ ಕಳಪೆ’ ಮಟ್ಟಕ್ಕೆ ಕುಸಿದಿದ್ದು, ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ.

ಹವಾಮಾನ ವರದಿ ನೀಡುವ ಎಕ್ಯುಐಸಿಎನ್‌ ಸಂಸ್ಥೆ ವರದಿಯೊಂದನ್ನು ನೀಡಿದ್ದು, ಆನಂದ ವಿಹಾರ ಪ್ರದೇಶದಲ್ಲಿ ವಾಯುಗುಣಮಟ್ಚ ಸೂಚ್ಯಂಕ 999ಕ್ಕೆ ಕುಸಿದಿದೆ ಎಂದಿದೆ. ಪಕ್ಕದ ನೋಯ್ಡಾದಲ್ಲಿ 469 ದಾಖಲಾಗಿದೆ. ಇದೇ ವೇಳೆ ಸರ್ಕಾರದ ವಾಯುಗುಣಮಟ್ಟ ನಿರ್ವಹಣಾ ಆಯೋಗವು ಬಹುತೇಕ ದೆಹಲಿಯಲ್ಲಿ ಗಾಳಿಯ ಗುಣಮಟ್ಟ 300ರಿಂದ 400 ಅಂಕಗಳನ್ನು ದಾಟಿದೆ ಎಂದಿದೆ. ಈ ಕಾರಣ ದಿಲ್ಲಿಯಲ್ಲಿ ಇಡೀ ದಿನ ದಟ್ಟ ಧೂಳು/ಹೊಗೆ ವಾತಾವರಣ ಇದ್ದು ಕೇವಲ 500 ಮೀ.ಗೆ ಗೋಚರತೆ ಕುಸಿದಿದೆ.

ಮಸೂದೆಗೆ ಸಹಿ ವಿಳಂಬ: ರಾಜ್ಯಪಾಲ ಆರಿಫ್ ವಿರುದ್ಧ ಸುಪ್ರೀಂಗೆ ಕೇರಳ ಸರ್ಕಾರ

ಈ ಹಿನ್ನೆಲೆಯಲ್ಲಿ, ‘ವಾಯುವಿನಲ್ಲಿ ಶ್ವಾಸಕೋಸಕ್ಕೆ ಹಾನಿಕರವಾದ ಸೂಕ್ಷ್ಮ ಕಣಗಳ ಪ್ರಮಾಣ ಅಧಿಕವಾಗಿದ್ದು, ಇದರಿಂದ ಉಸಿರಾಟದ ಸಮಸ್ಯೆ, ನೆಗಡಿ, ಕೆಮ್ಮು, ಶ್ವಾಸಕೋಶದ ಸೋಂಕು ಉಂಟಾಗಬಹುದು. ಹೀಗಾಗಿ ಮನೆಯಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಬಳಕೆ ಮಾಡಬೇಕು’ ಎಂದು ಎಂದು ವೈದ್ಯರು ಸೂಚನೆ ನೀಡಿದ್ದಾರೆ.

ಟ್ರಾಫಿಕ್‌ನಲ್ಲಿ ಸಿಲುಕಿದವರಿಗೆ ಸಂಗೀತಾ ರಸದೌತಣ ನೀಡಿದ ಆಟೋ ಚಾಲಕ: ವೈರಲ್ ವೀಡಿಯೋ

ಇದೇ ವೇಳೆ, ಸರ್ಕಾರವು ಮಾಲಿನ್ಯ ತಡೆಗೆ ತುರ್ತು ಅಗತ್ಯವಲ್ಲದ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ ಹಾಗೂ ಮಾಲಿನ್ಯಕ್ಕೆ ಕಾರಣವಾಗುವ ಡೀಸೆಲ್‌ ಲಾರಿಗಳ ನಗರ ಪ್ರವೇಶವನ್ನು ನಿರ್ಬಂಧಿಸಿದೆ. ವೈಯಕ್ತಿಕ ವಾಹನಗಳ ಬದಲು ಸಿಎನ್‌ಜಿ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚು ಮಾಡುವಂತೆ ಜನರಿಗೆ ಸೂಚನೆ ನೀಡಿದೆ. ಜನರು ಡೀಸೆಲ್‌ ವಾಹನಗಳನ್ನು ಹೆಚ್ಚು ಬಳಸಬಾರದು ಎಂದೂ ಕೋರಿದೆ. ಶುಕ್ರವಾರ ಹಾಗೂ ಶನಿವಾರ ದಿನ ಶಾಲೆಗಳಿಗೆ ರಜೆ ಸಾರಲಾಗಿದೆ.

ಕುಸಿದ ವಾಯುಗುಣಮಟ್ಟ ಸೂಚ್ಯಂಕ:

ವಾಯುಗುಣಮಟ್ಚ ಸೂಚ್ಯಂಕ 0ಯಿಂದ 50ರವರೆಗೆ ಇದ್ದರೆ ಅದನ್ನು ಉತ್ತಮ, 51ರಿಂದ 100ರವರೆಗೆ ಇದ್ದರೆ ಸಮಾಧಾನಕರ, 101ರಿಂದ 200ರೆವರೆಗಿದ್ದರೆ ಸಾಮಾನ್ಯ, 201ರಿಂದ 300 ಕಳಪೆ, 301ರಿಂದ 400 ಅತ್ಯಂತ ಕಳಪೆ ಮತ್ತು 401ರಿಂದ 500ರವರೆಗಿದ್ದರೆ ಅದನ್ನು ತೀವ್ರ ಕಳಪೆ ಎಂದು ಗುರುತಿಸಲಾಗುತ್ತದೆ. ಆದರೆ 500ಕ್ಕಿಂತ ಹೆಚ್ಚು ಸೂಚ್ಯಂಕ ದಾಖಲಾದ ಉದಾಹರಣೆಗಳು ಇರಲಿಲ್ಲ.

ನೀಲಿ ಕಣ್ಣು ತೆಳ್ಳಗೆ ಬೆಳ್ಳಗೆ... ಆಟಗಾರರ ತಾಳಕ್ಕೆ ಕುಣಿದ ಯುನೈಟೆಡ್ ಏರ್‌ಲೈನ್ಸ್‌ : ಕೇಸ್ ಜಡಿದ ಗಗನಸಖಿಯರು..!

ಇದರ ನಡುವೆ ಆನಂದ ವಿವಾರ್‌ನಲ್ಲಿ ಸೂಚ್ಯಂಕ 999ಕ್ಕೆ ಕುಸಿದಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಹೇಳಿದೆ. ಇನ್ನು ದೆಹಲಿಯಲ್ಲಿ ಸರಾಸರಿ ವಾಯುಗುಣಮಟ್ಟ ಗುರುವಾರ 378ರಷ್ಟು ದಾಖಲಾಗಿದ್ದು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲೇ ಮುಂದುವರೆದಿದೆ. ಇದು ಕಳೆದ 3 ದಿನಕ್ಕಿಂತ ಕಳಪೆಯಾಗಿದೆ. ಪಂಜಾಬಿ ಬಾಗ್‌ (416), ದ್ವಾರಕಾ (420), ಜಹಂಗೀರ್‌ ಪುರಿ (403), ರೋಹಿಣಿ (422), ವಾಝಿಪುರ (406), ಆನಂದ ವಿಹಾರ್‌ (425) ಅಂಕಗಳಷ್ಟು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ ಎಂದು ಸರ್ಕಾರ ಹೇಳಿದೆ.

ಕಾರಣ ಏನು?:

ಪಂಜಾಬ್‌ ಹಾಗೂ ಹರ್ಯಾಣದ ಭಾಗಗಳಲ್ಲಿ ಕೃಷಿ ತಾಜ್ಯ ಸುಡುವಿಕೆ ಹೆಚ್ಚಾಗಿರುವುದು ಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ. ಇನ್ನು ಮುಂಗಾರಿನ ಬಳಿಕ ದೆಹಲಿ ವಲಯದಲ್ಲಿ ತೀವ್ರ ಮಳೆ ಕೊರತೆ ಕಂಡು ಬಂದಿರುವುದು ಹಾಗೂ ಉಷ್ಣಾಂಶ 16.3 ಡಿಗ್ರಿ ಸೆ.ಗೆ ತಲುಪಿರುವ ಕಾರಣ ಸೂಕ್ಷ್ಮ ಧೂಳು ಭೂಮಿಯ ಹತ್ತಿರದ ವಾತಾವರಣದಲ್ಲೆ ಉಳಿದುಕೊಂಡಿವೆ. ಇದು ಮಾಲಿನ್ಯದ ಪ್ರಮಾಣವನ್ನು ಹೆಚ್ಚು ಮಾಡಿದೆ ಎಂದಿದ್ದಾರೆ.

ಲಾಸ್‌ ಏಂಜಲೀಸ್‌ ಮಾಲಿನ್ಯಕ್ಕೆ ಹೋಲಿಸಿದ ಅಮೆರಿಕ ರಾಯಭಾರಿ!

ದೆಹಲಿಯಲ್ಲಿ ಉಂಟಾಗಿರುವ ವಾಯುಮಾಲಿನ್ಯವನ್ನು 1970-80ರ ದಶದಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಉಂಟಾಗಿದ್ದ ಮಾಲಿನ್ಯಕ್ಕೆ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೋಲಿಕೆ ಮಾಡಿದ್ದಾರೆ. ಈ ಕಾಲಘಟ್ಟದಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಅತ್ಯಂತ ಕಳಪೆ ಗುಣಮಟ್ಟದ ವಾಯುಗುಣಮಟ್ಟ ಇತ್ತು ಎಂದಿದ್ದಾರೆ.
 

click me!