ಪಾರ್ಸೆಲ್ ಸ್ಫೋಟಿಸಿ ಅಪ್ಪ ಮಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್‌: ಬಾಂಬ್ ಕಳಿಸಿದ್ದ ಪತ್ನಿಯ ಸ್ಯಾಡಿಸ್ಟ್ ಲವರ್‌

By Anusha KbFirst Published May 5, 2024, 11:24 AM IST
Highlights

ಗುಜರಾತ್‌ನ ವಡಲಿಯಲ್ಲಿ ಪಾರ್ಸೆಲ್ ಬಂದ ಇಲೆಕ್ಟ್ರಿಕಲ್ ಸಾಮಗ್ರಿ ಸ್ಫೋಟಗೊಂಡು ಅಪ್ಪ ಮಗಳು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃತನ ಪತ್ನಿಯ ಪ್ರಿಯಕರ ತನ್ನ ಪ್ರೇಯಸಿ ಮೇಲಿನ ಸೇಡಿಗಾಗಿ ಇಲೆಕ್ಟ್ರಿಕ್ ಸಾಮಗ್ರಿಯಂತೆ ಕಾಣಿಸುವ ಬಾಂಬ್ ಕಳುಹಿಸಿದ್ದ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

ಅಹ್ಮದಾಬಾದ್: ಗುಜರಾತ್‌ನ ವಡಲಿಯಲ್ಲಿ ಪಾರ್ಸೆಲ್ ಬಂದ ಇಲೆಕ್ಟ್ರಿಕಲ್ ಸಾಮಗ್ರಿ ಸ್ಫೋಟಗೊಂಡು ಅಪ್ಪ ಮಗಳು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃತನ ಪತ್ನಿಯ ಪ್ರಿಯಕರ ತನ್ನ ಪ್ರೇಯಸಿ ಮೇಲಿನ ಸೇಡಿಗಾಗಿ ಇಲೆಕ್ಟ್ರಿಕ್ ಸಾಮಗ್ರಿಯಂತೆ ಕಾಣಿಸುವ ಬಾಂಬ್ ಕಳುಹಿಸಿದ್ದ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಘಟನೆಯಲ್ಲಿ 32 ವರ್ಷದ ಜೀತುಭಾಯ್ ಹೀರಾಭಾಯ್ ವಂಜಾರಾ ಹಾಗೂ ಅವರ 12 ವರ್ಷದ ಮಗಳು ಭೂಮಿಕಾ ಸಾವನ್ನಪ್ಪಿದ್ದರೆ ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. 

ಅಪರಿಚಿತರು ಕಳುಹಿಸಿದ ಇಲೆಕ್ಟ್ರಿಕ್ ಸಾಮಗ್ರಿ ಮನೆಗೆ ಬಂದಾಗ ಜೀತುಭಾಯ್ ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ಪಾರ್ಸೆಲ್ ಅನ್ನು ತರೆದು  ಅದರ ಚಾರ್ಜರ್‌ ಅನ್ನು ಸ್ವಚ್‌ಬೋರ್ಡ್‌ಗೆ ಕನೆಕ್ಟ್ ಮಾಡಿ ಸ್ವಿಚ್ ಹಾಕಿದಾಗ ಭಾರಿ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದ ತೀವ್ರತೆಗೆ ಜೀತುಭಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವರ ಮಗಳು ಭೂಮಿಕಾ ಆಸ್ಪತ್ರಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಳು, ಇವರ ಜೊತೆಗೆ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮನೆಗೆ ಪಾರ್ಸೆಲ್ ಬಂದ ಇಲೆಕ್ಟ್ರಿಕ್‌ ಸಾಮಾಗ್ರಿ ಸ್ಫೋಟಗೊಂಡು ಅಪ್ಪ ಮಗಳು ಸಾವು

ಜೀತುಭಾಯ್ ಪತ್ನಿಗೆ ಜಯಂತಿಭಾಯ್ ಬಾಲುಸಿಂಗ್ ವಂಜಾರಾನೊಂದಿಗೆ ವಿವಾಹೇತರ ಸಂಬಂಧವಿತ್ತು. 31 ವರ್ಷದ ಈ ಜಯಂತಿಭಾಯ್ ಬಾಲುಸಿಂಗ್ ವಂಜಾರಾ, ಜೀತುಭಾಯ್ ಮನೆಗೆ ಈ ಪಾರ್ಸೆಲ್ ಅನ್ನು ಆಟೋ ರಿಕ್ಷಾದಲ್ಲಿ ಕಳುಹಿಸಿದ್ದ,  ಪಾರ್ಸೆಲ್ ತೆರೆದು ನೋಡಿದಾಗ ಇದು ಟೇಪ್ ರೆಕಾರ್ಡರ್‌ನಂತೆ ಕಾಣಿಸುತ್ತಿತ್ತು. ಹೀಗಾಗಿ ಅಪ್ಪ ಮಕ್ಕಳು ಸೇರಿಕೊಂಡು ಅದರಲ್ಲಿದ್ದ ಪ್ಲಗ್ ಅನ್ನು ಸ್ವಿಚ್‌ಬೋರ್ಡ್‌ಗೆ ಸಿಕ್ಕಿಸಿ ಸ್ವಿಚ್ ಹಾಕುತ್ತಿದ್ದಂತೆ ಅದು ಸ್ಫೋಟಗೊಂಡಿತ್ತು. ದುರಂತ ಸಂಭವಿಸಿದ ವೇಳೆ ಜೀತುಭಾಯ್ ಪತ್ನಿ ಮನೆಯಲ್ಲಿ ಇರಲಿಲ್ಲ. 

ಇನ್ನು ಈ ರೀತಿ ಸುಧಾರಿತ ಬಾಂಬ್ ತಯಾರಿಸುವುದಕ್ಕಾಗಿ ಜಯಂತಿ ಭಾಯ್ ರಾಜಸ್ಥಾನಕ್ಕೆ ತೆರಳಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಬಂದಿದ್ದ, ಅದರಲ್ಲಿ ಜಿಲೆಟಿನ್ ಹಾಗೂ ಡಿಟೊನೇಟರ್ ಅನ್ನು ಆತ ಅಳವಡಿಸಿದ. ಟೇಪ್ ರೆಕಾರ್ಡರ್ ಸ್ವಿಚ್ ಅನ್ ಮಾಡಿದ ಕೂಡಲೇ ಸ್ಫೋಟಗೊಳ್ಳುವಂತೆ ಆತ ಸೆಟ್ಟಿಂಗ್ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಪಟೇಲ್ ಹೇಳಿದ್ದಾರೆ. ಇತ್ತ ಆಟೋ ರಿಕ್ಷಾ ಚಾಲಕ ಈ ಪಾರ್ಸೆಲ್ ಅನ್ನು ಜೀತುಭಾಯ್ ಮನೆಗೆ ಡೆಲಿವರಿ ಮಾಡಿದ್ದ ಎಂಬುದು ಸಿಸಿಟಿವಿ ಪೂಟೇಜ್‌ನಲ್ಲಿ ಕಾಣಿಸುತ್ತಿದೆ. ಆತನ ಹೇಳಿಕೆಯನ್ನು ಆಧರಿಸಿ ಸ್ಫೋಟ ಸಂಭವಿಸಿದ ಗಂಟೆಗಳ ನಂತರ ಜಯಂತಿಭಾಯ್‌ನನ್ನು ಬಂಧಿಸಲಾಯ್ತು ಎಂದು ಪೊಲೀಸರು ಹೇಳಿದ್ದಾರೆ. 

ಅನೈತಿಕ ಸಂಬಂಧ ವಿಚ್ಚೇದನಕ್ಕೆ ಮಾತ್ರ ಕಾರಣ, ಮಗುವಿನ ಪಾಲನೆಗಲ್ಲ: ಬಾಂಬೆ ಹೈ ಕೋರ್ಟ್

ಜೀತುಭಾಯ್‌ನನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಆತ ಈ ಬಾಂಬ್ ಅನ್ನು ಆತನ ಮನೆಗೆ ಕಳುಹಿಸಿದ್ದ. ತನ್ನ ಗೆಳತಿಯನ್ನು ಮದುವೆಯಾದ ಕಾರಣಕ್ಕೆ ಜಯಂತಿ ಭಾಯ್‌ಗೆ ಜೀತುಭಾಯ್ ಮೇಲೆ ದ್ವೇಷವಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ದುರಂತದಲ್ಲಿ ಜೀತುಭಾಯ್ ಅವರ ಇನ್ನಿಬ್ಬರು 9 ಹಾಗೂ 10 ವರ್ಷದ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ಮಕ್ಕಳ ಕಣ್ಣು ಹಾಗೂ ಎದೆಭಾಗಕ್ಕೆ ಗಾಯವಾಗಿದೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲೊಂದು ಬಾಲಕಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

click me!