
ಕೋಲ್ಕತ್ತಾ (ಜೂ.12): ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಸಾಮ್ರಾಜ್ಞಿಯಂತೆ ಮೆರೆದಿದ್ದ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೋಟೆ ಒಂದೇ ಒಂದು ಚುನಾವಣಾ ಸೋಲಿನ ಆಘಾತಕ್ಕೆ ಧೂಳೀಪಟವಾಗಿದೆ. ಪಕ್ಷದೊಳಗೆ ಭುಗಿಲೆದ್ದಿರುವ ತೀವ್ರ ಅಸಮಾಧಾನದ ಜ್ವಾಲಾಮುಖಿಯಿಂದಾಗಿ ಬರೋಬ್ಬರಿ 60 ಶಾಸಕರು ಹಾಗೂ 20 ಸಂಸದರು ಬಂಡಾಯದ ಬಾವುಟ ಹಾರಿಸಿದ್ದು, ಟಿಎಂಸಿ ಪಕ್ಷ ಎರಡು ಹೋಳಾಗುವ ಹಂತಕ್ಕೆ ಬಂದು ನಿಂತಿದೆ.
ಕಳೆದ ಎರಡು ವಾರಗಳಲ್ಲಿ ಆರು ಪ್ರಮುಖ ನಾಯಕರು ರಾಜೀನಾಮೆ ನೀಡಿದ್ದು, ರೆಬೆಲ್ ನಾಯಕರು ತಾವೇ 'ಅಧಿಕೃತ ಟಿಎಂಸಿ' ಎಂದು ಹಕ್ಕು ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಪಕ್ಷದ ಮೇಲಿನ ಹಿಡಿತ ಸಂಪೂರ್ಣ ಕೈತಪ್ಪಿಹೋಗಿ ಏಕಾಂಗಿಯಾಗಿರುವ ಮಮತಾ ಬ್ಯಾನರ್ಜಿ, ಬಿಕ್ಕಟ್ಟು ಶಮನಗೊಳಿಸಲು ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದ್ದಾರಾದರೂ ರೆಬೆಲ್ ಪಡೆ ಅದಕ್ಕೂ ಅಡ್ಡಗಾಲು ಹಾಕುತ್ತಿದೆ. ಮಹಾರಾಷ್ಟ್ರದ ಮಾದರಿಯಲ್ಲೇ ಬಂಗಾಳದಲ್ಲೂ ಪಕ್ಷದ ಅಸ್ತಿತ್ವಕ್ಕೆ ಮಹಾ ಆಪತ್ತು ಎದುರಾಗಿದೆ.