ಯುದ್ಧದ ಯಶಸ್ಸು ಸೇನೆಗೆ ಮಾತ್ರ, ಯಾವ ಪಕ್ಷಕ್ಕೂ ಅದರಲ್ಲಿ ಹಕ್ಕಿಲ್ಲ: ಸಿದ್ದರಾಮಯ್ಯ

Published : May 13, 2025, 07:36 AM ISTUpdated : May 13, 2025, 07:37 AM IST
ಯುದ್ಧದ ಯಶಸ್ಸು ಸೇನೆಗೆ ಮಾತ್ರ, ಯಾವ ಪಕ್ಷಕ್ಕೂ ಅದರಲ್ಲಿ ಹಕ್ಕಿಲ್ಲ: ಸಿದ್ದರಾಮಯ್ಯ

ಸಾರಾಂಶ

ಸೇನಾ ಕಾರ್ಯಾಚರಣೆಯ ಯಶಸ್ಸು ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಅದರಲ್ಲಿ ಹಕ್ಕು ಪ್ರತಿಪಾದನೆ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು: ಪಾಕಿಸ್ತಾನ ವಿರುದ್ಧದ ಅಪರೇಷನ್ ಸಿಂದೂರ' ಸೇನಾ ಕಾರ್ಯಾಚರಣೆಯ ಯಶಸ್ಸು ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಅದರಲ್ಲಿ ಹಕ್ಕು (ಕ್ರೆಡಿಟ್) ಪ್ರತಿಪಾದನೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಎಚ್.ಡಿ.ಕೋಟೆಯಲ್ಲಿ ಸೋಮವಾರ ಸುದ್ದಿ ಗಾರರೊಂದಿಗೆ ಮಾತನಾಡಿ, ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆ ಸಂಬಂಧ ಕೇಂದ್ರದ ತೀರ್ಮಾನಕ್ಕೆ ಬದ್ಧ. ಇದಕ್ಕೂ ಮುನ್ನ ಸರ್ವಪಕ್ಷಗಳ ಸಭೆ, ವಿಶೇಷ ಅಧಿವೇಶನ ಕರೆಯಬೇಕಿತ್ತು ಎಂದರು. 

1971ರ ಯುದ್ದಕ್ಕೂ, ಇವತ್ತಿನ ಸಂದರ್ಭಕ್ಕೂ ನಾನು ಹೋಲಿಕೆ ಮಾಡುವುದಿಲ್ಲ. ಆವತ್ತಿನ ಪರಿಸ್ಥಿತಿ ಬೇರೆ, ಇಂದಿನ ಪರಿಸ್ಥಿತಿ ಬೇರೆ. ಇನ್ನು, ಕದನ ವಿರಾಮ ಘೋಷಣೆ ಸಂಬಂಧ ಅಮೆರಿಕ ಅಧ್ಯಕ್ಷ ಟ್ರಂಪ್ 
ಮಾಡಿರುವ ಟ್ವಿಟ್ ಬಗ್ಗೆಯಾಗಲಿ, ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ. ನನ್ನ ಮಾತನ್ನು ಯುದ್ಧ ವಿರಾಮಕ್ಕಷ್ಟೇ ಸೀಮಿತಗೊಳಿಸುತ್ತೇನೆ ಎಂದರು. 

3 ಮಕ್ಕಳು ಇದ್ದಾರೆ: ರಾಜ್ಯದಲ್ಲಿನ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹೊರಗೆ ಕಳುಹಿಸಿದ್ದೇವೆ. ಮೈಸೂರಿನಲ್ಲಿ ಮೂವರು ಮಕ್ಕಳು ಮಾತ್ರ ಇದ್ದಾರೆ ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವರು. ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ, ಮಕ್ಕಳು ಮಾತ್ರ ಇಲ್ಲೆ ಇದ್ದಾರೆ ಎಂದು ಅವರು ತಿಳಿಸಿದರು.

ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕ್ಕೊಂಡು ಕುರಿ ಕಾಯ್ತಿದ್ದೆ, ಜಾಸ್ತಿ ಅಂದರೆ ಹೊಲ ಊಳುತ್ತಿದ್ದೆ ಅಷ್ಟೇ. ನನ್ನ ಜತೆ ವೀರಮಕ್ಕಳ ಕುಣಿತ ಕುಣಿಯುತ್ತಿದ್ದ ಇಬ್ಬರು ಮಾತ್ರ ಓದಿದರು. ಉಳಿದವರು ಓದಲಿಲ್ಲ. ನಾನು ಓದಿದಕ್ಕಾಗಿ ಇಲ್ಲಿಯ ತನಕ ಬಂದೆ. ನನ್ನ ಅಣ್ಣ, ತಮ್ಮ, ಅಕ್ಕಂದಿರು ಯಾರೂ ಓದಲಿಲ್ಲ, ಅವರೆಲ್ಲಾ ಅಲ್ಲೇ ಉಳಿದು ಬಿಟ್ಟರು. ಓದು ಮುಖ್ಯ, ಯಾವುದಕ್ಕೂ ಹಣೆಬರಹ, ಪೂರ್ವ 
ಜನ್ಮದ ಪಾಪ-ಪುಣ್ಯ ಎಂದು ನಂಬಬೇಡಿ ಎಂದು ಸಿದ್ದರಾಮಯ್ಯ ಹೇಳಿದರು. 

ಬಿಜೆಪಿಯವರು ಸುಳ್ಳು ಹೇಳ್ತಾರೆ, ನೀವು ನಂಬಿ
ಬಳಿಕ, ಎಚ್.ಡಿ.ಕೋಟೆಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ.  ಅವರು ಸುಳ್ಳು ಹೇಳ್ತಾರೆ, ನೀವು ನಂಬ್ತಿರಿ, ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂದು ಒಂದೇ ದಿನ 2140 ಕೋಟಿಗಳ ಅಭಿವೃದ್ಧಿ ಕಾರ್ಯಗಳನ್ನು ಎಚ್.ಡಿ.ಕೋಟೆ ಜನಕ್ಕೆ ಅರ್ಪಿಸಿದ್ದೇವೆ ಎಂದು ತಿರುಗೇಟು ನೀಡಿದರು. ಈ ಬಾರಿ 28,000 ಕೋಟಿಗಳನ್ನು ಶಾಸಕರ ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ. 255 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ತೆಗೆದಿರಿಸಿದ್ದೀವಿ. 80 ಸಾವಿರ ಕೋಟಿಗಳನ್ನು ಬಂಡವಾಳ ವೆಚ್ಚಕ್ಕೆ ಮೀಸಲಿರಿಸಿದ್ದೇವೆ. ಈ ಹಣ ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು. 

ಆರ್ಥಿಕ ಸಮಾನತೆಯನ್ನು ತಂದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಆರ್ಥಿಕ ಸಮಾನತೆಯನ್ನು ತರಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ 252 ಸಾವಿರ ಕೋಟಿ ಹಾಗೂ 1 ಲಕ್ಷದ 34 ಸಾವಿರ ಕೋಟಿಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದರು. 
ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಾರೆ. ಹಾಲಿನ ದರ 24 ಹೆಚ್ಚು ಮಾಡಿ ಇದರಲ್ಲಿ ಒಂದು ರೂಪಾಯಿಯನ್ನೂ ನಾವು ಇಟ್ಟುಕೊಳ್ಳದೆ ಅಷ್ಟನ್ನೂ ರೈತರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೇವೆ. ಆದರೆ, ಚಿನ್ನ, ಬೆಳ್ಳಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ಬೇಳೆ, ಗೊಬ್ಬರ, ಎಣ್ಣೆ ಕಾಳು ಸೇರಿ ಎಲ್ಲದರ ಬೆಲೆ ಹೆಚ್ಚಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ, ಮೋದಿ ಸರ್ಕಾರ. ಆದ್ದರಿಂದ ಜನಾಕ್ರೋಶ ಇರುವುದು ಬಿಜೆಪಿ ಸರ್ಕಾರದ ಮೋದಿಯ ವಿರುದ್ಧವೇ ಹೊರತು, ನಮ್ಮ ಕಾಂಗ್ರೆಸ್ ಸರ್ಕಾರದ ಮೇಲಲ್ಲ ಎಂದು ಅವರು ಬಿಜೆಪಿಯ ಜನಕ್ರೋಶ ಯಾತ್ರೆ ಬಗ್ಗೆ ವ್ಯಂಗ್ಯವಾಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ