Latest Videos

ಕಾಲಿನ ಗಾಯಕ್ಕೆ ಆಸ್ಪತ್ರೆಗೆ ಹೋದ್ರೆ ಬಾಲಕನಿಗೆ ಸುನ್ನತಿ ಮಾಡಿ ವೈದ್ಯರ ಎಡವಟ್ಟು..!

By Anusha KbFirst Published Jun 29, 2024, 4:09 PM IST
Highlights

 ಕಾಲಿನಲ್ಲಿ ಗಾಯವಾಗಿದೆ ಎಂದು ಶಸ್ತ್ರಚಿಕಿತ್ಸೆಗೆ ದಾಖಲಾದ ಬಾಲಕನಿಗೆ ವೈದ್ಯರು ಕಾಲಿನ ಶಸ್ತ್ರಚಿಕಿತ್ಸೆ ನಡೆಸುವ ಬದಲು ಆತನ ಮರ್ಮಾಂಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. 

ಥಾಣೆ: ಕಾಲಿನಲ್ಲಿ ಗಾಯವಾಗಿದೆ ಎಂದು ಶಸ್ತ್ರಚಿಕಿತ್ಸೆಗೆ ದಾಖಲಾದ ಬಾಲಕನಿಗೆ ವೈದ್ಯರು ಕಾಲಿನ ಶಸ್ತ್ರಚಿಕಿತ್ಸೆ ನಡೆಸುವ ಬದಲು ಆತನ ಮರ್ಮಾಂಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಶಹಾಪುರ ಮೂಲದ 9 ವರ್ಷದ ಬಾಲಕನ ಪೋಷಕರು ಈ ಆರೋಪ ಮಾಡಿದ್ದಾರೆ. ಸ್ಥಳೀಯ ಉಪ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಈ ಎಡವಟ್ಟು ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ವೈದ್ಯರನ್ನು ಕೇಳಿದರೆ ಅವರು ನಾವು ಸರಿಯಾಗಿದ್ದನೆ ಮಾಡಿದ್ದೇವೆ, ಬಾಲಕನಿಗೆ ಫಿಮೊಸಿಸ್ (ಬಿಗಿಯಾದ ಮುಂದೊಗಲು) ಇದ್ದ ಕಾರಣ ಕಾಲಿನ ಶಸ್ತ್ರಚಿಕಿತ್ಸೆಯ ಜೊತೆಗೆ ಸುನ್ನತಿಯನ್ನು ನಡೆಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ಆದರೆ ವೈದ್ಯರ ಮಾತು ಕೇಳದ ಪೋಷಕರು ಈಗ ವೈದ್ಯರ ವಿರುದ್ಧ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಥಾಣೆ ಸಿವಿಲ್ ಆಸ್ಪತ್ರೆಯ ಸಿವಿಲ್ ಸರ್ಜನ್ ತನಿಖೆ ಆರಂಭಿಸಿದ್ದಾರೆ. ಬಾಲಕನ ಕುಟುಂಬವು ಶಹಾಪುರದ ಸಾರಾವಳಿ ಗ್ರಾಮದಲ್ಲಿ ವಾಸಿಸುತ್ತಿದ್ದು, ಬಾಲಕನ ತಂದೆ ದಿನಗೂಲಿ ಕಾರ್ಮಿಕರಾಗಿದ್ದರೆ ತಾಯಿ ಮನೆಗೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದಾರೆ. ಬಾಲಕ ವಿದ್ಯಾರ್ಥಿಯಾಗಿದ್ದು ಓದುತ್ತಿದ್ದಾನೆ. ಕುಟುಂಬದವರ ಪ್ರಕಾರ, ಕಳೆದ ತಿಂಗಳು ಬಾಲಕ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕಾಲಿಗೆ ಗಾಯ ಮಾಡಿಕೊಂಡಿತ್ತು. ಇದರಲ್ಲಿ ಸೋಂಕು ಆಗಿದ್ದರಿಂದ ಅದರ ಚಿಕಿತ್ಸೆಗಾಗಿ ಆಗಾಗ ಆಸ್ಪತ್ರೆಗೆ ಹೋಗಬೇಕಾಗಿತ್ತು. ನಂತರ ಜೂನ್ 15 ರಂದು ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಸ್ವಪ್ನಿಲ್ ಎಂಬ ವೈದ್ಯ ಬಾಲಕನಿಗೆ ಈ ರೀತಿ ಮರ್ಮಾಂಗದಲ್ಲಿ ಸರ್ಜರಿ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. 

ಸ್ತ್ರೀ ಸುನ್ನತಿ/ಯೋನಿ ಛೇದನಕ್ಕಾಗಿ 3 ವರ್ಷದ ಮಗಳ ಕೀನ್ಯಾಗೆ ಕರೆದೊಯ್ದ ಮಹಿಳೆಗೆ ಶಿಕ್ಷೆ

ವೈದ್ಯರು ನನ್ನ ಮಗನನ್ನು ಆಪರೇಷನ್ ಥಿಯೇಟರ್‌ನಿಂದ ಹೊರಗೆ ಕರೆತಂದಾಗ ನನ್ನ ಮಗ ವೈದ್ಯರು ಕಾಲಿನ ಬದಲು ಆ ಜಾಗದಲ್ಲಿ ತನಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ನನ್ನ ಬಳಿ ಹೇಳಿದ್ದಾನೆ. ಬಳಿಕ ಈ ಬಗ್ಗೆ ನಾನು ವೈದ್ಯರ ಬಳಿ ಕೇಳಿದಾಗ ಅವರು ಬಾಲಕನನ್ನು ತರಾತುರಿಯಲ್ಲಿ ಮತ್ತೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ದು ಬಳಿಕ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ವೇಳೆ ವೈದ್ಯರ ಬಳಿ ಬಾಲಕ ಹೇಗಿದ್ದಾನೆ ಎಂದು ಕೇಳಿದ್ದಾಗ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.

ವೈದ್ಯರ ಈ ಎಡವಟ್ಟಿನಿಂದ ಬೆದರಿರುವ ಬಾಲಕನ ಪೋಷಕರು ಬಾಲಕನಿಗೆ ಏನೂ ಆಗುವುದಿಲ್ಲ, ಎಂದು ವೈದ್ಯರು ಲಿಖಿತವಾಗಿ ಬರೆದುಕೊಡುವವರೆಗೆ ತಾವು ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವುದಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಕುಟುಂಬದವರ ದೂರಿನ ನಂತರ, ನಗರದ ಸಾಮಾಜಿಕ ಕಾರ್ಯಕರ್ತರು ಈ ವಿಚಾರದ ಬಗ್ಗೆ ಗಮನ ಸೆಳೆದಿದ್ದು, ಈ ರೀತಿ ಎಡವಟ್ಟು ಅಪರೇಷನ್ ಮಾಡಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Female Genital Mutilation: ಇನ್ನೂ ಜೀವಂತ ಮಹಿಳೆಯರ ಸುನ್ನತಿ: ಹೆಣ್ಣಿನ ಜೀವನವೇ ನರಕ

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಶಹಾಪುರದ ಉಪಜಿಲ್ಲಾ ಆರೋಗ್ಯ ಆಸ್ಪತ್ರೆಯ ಆರೋಗ್ಯಾಧಿಕಾರಿ ಗಜೇಂದ್ರ ಪವಾರ ಮಾತನಾಡಿ, ಮಗುವಿಗೆ ಕಾಲಿಗೆ ಗಾಯವಾಗಿರುವುದರ ಜೊತೆಗೆ ಪಿಮೋಸಿಸ್ ಸಮಸ್ಯೆಯೂ ಇದ್ದು, ಈ ಕಾರಣದಿಂದ ಆತನ ಶಿಶ್ನಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದಿದ್ದಾರೆ.  ಒಟ್ಟಿನಲ್ಲಿ ಬಹುಶ ಈ ಎಡವಟ್ಟಿನ ವೈದ್ಯರಂತಹ ಜನರನ್ನು ನೋಡಿಯೇ 'ಗಣೇಶನ ಮಾಡು ಅಂದ್ರೆ ಅವರಪ್ಪನ ಮಾಡ್ದ' ಎಂಬ ಲೋಕರೂಢಿಯ ಮಾತು ಹುಟ್ಟಿದಿರಬೇಕು  ಅನ್ಸುತ್ತೆ ನೀವೇನಂತೀರಾ?

click me!