
ಚೆನ್ನೈ (ಮಾ.7): ಸೂಪರ್ಸ್ಟಾರ್ ವಿಜಯ್, ಅಭಿಮಾನಿಗಳಿಂದ ದಳಪತಿ ವಿಜಯ್ ಎಂದೇ ಗುರುತಿಸಿಕೊಂಡಿರುವ ನಟ, ರಂಜಾನ್ ತಿಂಗಳಿನಲ್ಲಿ ಶುಕ್ರವಾರ ಚೆನ್ನೈನಲ್ಲಿ ಇಫ್ತಾರ್ ಪಾರ್ಟಿ ಆಯೋಜನೆ ಮಾಡಿದ್ದರು. ರಾಜಕಾರಣಿಯಾಗಿ ಬದಲಾಗಿರುವ ನಟ, ಇಫ್ತಾರ್ ಪಾರ್ಟಿಯಲ್ಲಿ ಮುಸ್ಲಿಂ ಟೋಪಿ ಧರಿಸಿ, ಸಂಜೆಯ ನಮಾಜ್ನಲ್ಲಿ ಭಾಗಿಯಾದರು. ಆ ಮೂಲಕ ರೋಜಾದಲ್ಲಿ ಭಾಗಿಯಾಗಿ ಉಪವಾಸ ಮುಗಿಸಿದ ಜನರೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡರು. ವಿಜಯ್ ಅವರ ಫೋಟೋಗಳು ಮತ್ತು ವೀಡಿಯೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ಮತ್ತು ಮುಖ್ಯಸ್ಥರು ತಮ್ಮ ಮುಸ್ಲಿಂ ಸಹೋದರರೊಂದಿಗೆ ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸುವಾಗ ಸಂಪೂರ್ಣ ಬಿಳಿ ಬಣ್ಣದ ಉಡುಪನ್ನು, ಸ್ಕಲ್ ಕ್ಯಾಪ್ಅನ್ನು ಧರಿಸಿರುವುದು ಕಂಡುಬಂದಿದೆ.
ವರದಿಗಳ ಪ್ರಕಾರ, ವಿಜಯ್ ಇಡೀ ದಿನ ಉಪವಾಸ ಮಾಡಿ ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ಪ್ರಾರ್ಥನೆ ಸಲ್ಲಿಸಿದರು, ನಂತರ ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸಿ ಸಾವಿರಾರು ಸ್ಥಳೀಯರಿಗೆ ಔತಣಕೂಟ ಏರ್ಪಡಿಸಿದರು. ಚೆನ್ನೈನ ರಾಯಪೆಟ್ಟಾದಲ್ಲಿರುವ ವೈಎಂಸಿಎ ಮೈದಾನದಲ್ಲಿ ಅವರ ಪಕ್ಷವು ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸ್ಥಳೀಯ 15 ಮಸೀದಿಗಳ ಇಮಾಮ್ಗಳನ್ನು ಭಾಗವಹಿಸಲು ಆಹ್ವಾನಿಸಲಾಗಿತ್ತು ಮತ್ತು ಸುಮಾರು 3,000 ಜನರಿಗೆ ಅವಕಾಶ ಕಲ್ಪಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ವಿಜಯ್ ಪ್ರಸ್ತುತ 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಮತ್ತು ವರದಿಗಳ ಪ್ರಕಾರ, ಅವರು AIADMK ಜೊತೆ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ವಿಜಯ್ ಅವರ ಮುಂಬರುವ ಚಿತ್ರ ಜನ ನಾಯಗನ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅದೇ ಅವರ ಕೊನೆಯ ಚಿತ್ರವೂ ಆಗಲಿದೆ. ಅಕ್ಟೋಬರ್ನಲ್ಲಿ ಟಿವಿಕೆಗಾಗಿ ನಡೆದ ಅವರ ಮೊದಲ ಸಮಾವೇಶದಲ್ಲಿ, ವಿಜಯ್, "ನನ್ನ ವೃತ್ತಿಜೀವನದ ಸಂಪೂರ್ಣ ಉತ್ತುಂಗದಲ್ಲಿ, ನಾನು ಅಲ್ಲಿಂದ ಹೊರಬರುತ್ತಿದ್ದೇನೆ. ನಾನು ಪಡೆಯುತ್ತಿದ್ದ ಸಂಬಳವನ್ನು ಬಿಡುತ್ತಿದ್ದೇನೆ ಮತ್ತು ನಾನು ನಿಮ್ಮ ವಿಜಯ್ ಆಗಿ ನಿಮ್ಮ ಬಳಿಗೆ ಬರುತ್ತಿದ್ದೇನೆ. ನಾನು ನಿಮ್ಮ ಮೇಲೆ ನನ್ನೆಲ್ಲ ನಂಬಿಕೆ ಇಡುತ್ತಿದ್ದೇನೆ" ಎಂದು ಹೇಳಿದ್ದರು.
ನಟನೆಗೆ ಕಾಲಿಟ್ಟಾಗ ತಮ್ಮನ್ನು ಹೇಗೆ ಕೀಳಾಗಿ ಕಾಣಲಾಗುತ್ತಿತ್ತು ಎಂದು ಅವರು ಹೇಳಿಕೊಂಡರು, ಆದರೆ ಅಭಿಮಾನಿಗಳ ಪ್ರೀತಿಯೇ ಅವರನ್ನು ಸೂಪರ್ಸ್ಟಾರ್ ಆಗಿ ಮಾಡಿತು. ತಮ್ಮ ರಾಜಕೀಯ ಜೀವನದ ಬಗ್ಗೆ ಅದೇ ಪ್ರೀತಿಯನ್ನು ಬಯಸುತ್ತಾ, "ಮೊದಲು ನನ್ನ ಮುಖ ಚೆನ್ನಾಗಿಲ್ಲ ಎಂದು ಅವರು ಹೇಳಿದರು. ನಂತರ, ನನ್ನ ವ್ಯಕ್ತಿತ್ವ ಚೆನ್ನಾಗಿಲ್ಲ ಎಂದು ಅವರು ಹೇಳಿದರು. ನಂತರ, ನನ್ನ ಶೈಲಿ, ನನ್ನ ಕೂದಲು, ನನ್ನ ನಡಿಗೆ ಇತ್ಯಾದಿಗಳ ಬಗ್ಗೆ ಅವರು ನನ್ನನ್ನು ಅವಮಾನ ಮಾಡಿದರು. ಆ ಸಮಯದಲ್ಲಿ ನನ್ನನ್ನು ನಿಜವಾಗಿಯೂ ಒಟ್ಟಿಗೆ ಇಟ್ಟಿದ್ದು ನಿಮ್ಮ ಬೆಂಬಲ. ಆ ಪ್ರೀತಿ ಮತ್ತು ವಿಶ್ವಾಸವೇ ಇಂದು ನನ್ನನ್ನು ರಾಜಕೀಯಕ್ಕೆ ಕರೆತಂದಿದೆ" ಎಂದು ಹೇಳಿದ್ದರು.
ಟ್ರೋಲ್ ಆದ ದಳಪತಿ ವಿಜಯ್ ಶುಭಾಶಯ, ಅಷ್ಟಕ್ಕೂ ಆಗಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ