
ತೆಲಂಗಾಣ: ಮಗಳು, ಪತ್ನಿ ಹಾಗೂ ಅತ್ತಿಗೆಯನ್ನು ಕೊಂದು ವ್ಯಕ್ತಿಯೊರ್ವ ತಾನೂ ನೇಣಿಗೆ ಶರಣಾದಂತಹ ಆಘಾತಕಾರಿ ಘಟನೆ ತೆಲಂಗಾಂದ ವಿಕಾರಾಬಾದ್ನಲ್ಲಿ ನಡೆದಿದೆ. 40 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ, ಕಿರಿಯ ಮಗಳು ಹಾಗೂ ಅತ್ತಿಗೆಯನ್ನು ಕುಡುಗೋಲಿನಿಂದ ಕಡಿದು ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ಈತನ ದಾಳಿಯಿಂದ ತಪ್ಪಿಸಿಕೊಂಡ ಹಿರಿಯ ಮಗಳು ಬದುಕುಳಿದರೂ ಗಾಯಗೊಂಡಿದ್ದಾಳೆ.
ನಸುಕಿನ ಜಾವ ನಿದ್ದೆಯಲ್ಲಿದ್ದಾಗ ದುರಂತ: ಅಪ್ಪನ ಏಟಿನಿಂದ ಪಾರಾದ ಹಿರಿಮಗಳು
ಕುಲ್ಕಚೆರ್ಲಾ ಮಂಡಲದಲ್ಲಿ ಬೆಳಗಿನ ಜಾವ 2.30 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ. ಪೊಲೀಸರು 'ಡಯಲ್ 100' ಗೆ ಬಂದ ಕರೆಯಿಂದ ಮಾಹಿತಿ ಪಡೆದು ಸ್ಥಳಕ್ಕೆ ತಲುಪಿದ್ದಾರೆ. ತನ್ನ ಕುಟುಂಬ ಸದಸ್ಯರೆಲ್ಲರೂ ಮಲಗಿದ್ದ ವೇಳೆ ವ್ಯಕ್ತಿ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಅವರೆಲ್ಲರೂ ಸಿಹಿ ನಿದ್ದೆಯಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ. ವೇಪುರಿ ಮಾದಯ್ಯ ಎಂಬಾತನೇ ಕೊಲೆ ಮಾಡಿದ ವ್ಯಕ್ತಿ. ಆತ ತನ್ನ 30 ವರ್ಷದ ಪತ್ನಿ ಅಲಿವೆಲು ಹಾಗೂ 10 ವರ್ಷ ಪ್ರಾಯದ ಮಗಳು ಹಾಗೂ 40ರ ಹರೆಯದ ಅತ್ತಿಗೆಯನ್ನು ಕಡಿದು ಕೊಂದಿದ್ದಾನೆ. ಆತನ ಹಿರಿಯ ಮಗಳು ಘಟನೆಯಲ್ಲಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರನ್ನು ಕೊಂದ ನಂತರ ಮಾದಯ್ಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಆತ ಈ ರೀತಿ ಮನೆಯವರೆಲ್ಲರ ಕೊಲ್ಲುವುದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಕೌಟುಂಬಿಕ ಕಲಹ ಕಾರಣ ಎಂದ ಪೊಲೀಸರು
ತನಿಖೆ ನಡೆಸಿದ ಪೊಲೀಸರು ಪತ್ನಿ ಜೊತೆಗಿನ ವೈಮನಸ್ಸೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಪರಿಗಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಶ್ರೀನಿವಾಸ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಅವಲೋಕಿಸಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಪತಿ ಮತ್ತು ಅವರ ಪತ್ನಿ ನಡುವೆ ಕೆಲವು ವಿವಾದಗಳಿರುವಂತೆ ತೋರುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Celebration Ends: ದಿನದ ಯಾವುದೇ ಸಮಯದಲ್ಲೂ ಮದ್ಯ ಪೂರೈಸುತ್ತಿದ್ದ ಸೆಲೆಬ್ರೇಷನ್ ಸಾಬು ಅರೆಸ್ಟ್
ಇದನ್ನೂ ಓದಿ: ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳಲು ಹೆಲ್ಮೆಟ್ ಬದಲು ತಲೆಗೆ ಬಾಣಲೆ ಹಾಕಿಕೊಂಡ ಹಿಂಬದಿ ಸವಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ