
ಟಾಟಾ ಸಮೂಹದ ಪ್ರಮುಖ ಅಂಗ ಸಂಸ್ಥೆಯಾದ 'ಟಾಟಾ ಸನ್ಸ್' ಅನ್ನು ನಿಯಂತ್ರಿಸುವ 'ಟಾಟಾ ಟ್ರಸ್ಟ್ಸ್' ಇದೀಗ ಒಂದೇ ಬಾರಿಗೆ ಎರಡು ದೊಡ್ಡ ಕಾನೂನು ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ. ಒಂದೆಡೆ, ಟಾಟಾ ಸನ್ಸ್ ಸಂಸ್ಥೆಯನ್ನು ತಕ್ಷಣವೇ ಶೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವಂತೆ (IPO) ಸೆಪ್ಟೆಂಬರ್ 11 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಟ್ರಸ್ಟ್ ಮುಂದಾಗಿದೆ. ಮತ್ತೊಂದೆಡೆ, ಟಾಟಾ ಸನ್ಸ್ನಲ್ಲಿ ಶೇ. 23.57 ರಷ್ಟು ಪಾಲು ಹೊಂದಿರುವ ಎರಡನೇ ಅತಿದೊಡ್ಡ ಟ್ರಸ್ಟ್ 'ಸರ್ ರತನ್ ಟಾಟಾ ಟ್ರಸ್ಟ್' (SRTT) ತನ್ನ ಮಂಡಳಿ ಸಭೆಗಳನ್ನು ನಡೆಸದಂತೆ ವಿಧಿಸಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ದತ್ತಿ ಆಯುಕ್ತರಿಗೆ ನಿರ್ದೇಶನ ಕೋರಲು ಸಿದ್ಧತೆ ಮಾಡಿದೆ.
ಮಾರ್ಚ್ 2024 ರಲ್ಲಿ ಟಾಟಾ ಸನ್ಸ್ ತನ್ನ 'NBFC-CIC' (ಕೋರ್ ಇನ್ವೆಸ್ಟ್ಮೆಂಟ್ ಕಂಪನಿ) ಪರವಾನಗಿಯನ್ನು ಹಿಂತಿರುಗಿಸಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆರ್ಬಿಐ, ಈ ಐಪಿಒ ನಿರ್ದೇಶನ ನೀಡಿದೆ. ಈ ಬೆಳವಣಿಗೆಯು ಟಾಟಾ ಸನ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರನ್ನು ಸಂದಿಗ್ಧ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.
SRTT ಮಂಡಳಿ ಸಭೆಗಳ ಮೇಲಿನ ತಡೆಯಾಜ್ಞೆ ತೆರವುಗೊಳ್ಳದ ಹೊರತು, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಉತ್ತರಾಧಿಕಾರದ ಆಯ್ಕೆ ಹಾಗೂ ಪ್ರಸ್ತಾವಿತ ಐಪಿಒ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಟಾಟಾ ಸನ್ಸ್ನ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಮಂಡಳಿ ನಿರ್ಧಾರವೂ ಸರ್ವಾನುಮತದಿಂದಲೇ ಆಗಬೇಕು. ಸೆಪ್ಟೆಂಬರ್ 17 ರಂದು ಟಾಟಾ ಸನ್ಸ್ ಮಂಡಳಿಯ ನಿರ್ಣಾಯಕ ಸಭೆ ನಡೆಯಲಿದ್ದು, ಒಂದೇ ಬಾರಿಗೆ ಮೂರು ಪ್ರಮುಖ ಸವಾಲುಗಳು ಎದುರಾಗಿವೆ. ಆರ್ಬಿಐ ನೀಡಿದ ಐಪಿಒ , ಚಂದ್ರಶೇಖರನ್ ಅವರ ನಂತರದ ಉತ್ತರದಾಯಿತ್ವ ಯಾರಿಗೆ ಎಂಬ ಅನಿಶ್ಚಿತತೆ, SRTT ಯಲ್ಲಿ ಮುಂದುವರಿದಿರುವ ಆಡಳಿತ ಬಿಕ್ಕಟ್ಟು.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ತುರ್ತಾಗಿ ಕಾನೂನು ಹೋರಾಟ ನಡೆಸುವುದು ಒಂದೇ ಪರಿಹಾರ ಎಂದು ತೀರ್ಮಾನಿಸಿದ್ದು, ಟ್ರಸ್ಟ್ಗಳು ಹಾಗೂ ಟಾಟಾ ಸನ್ಸ್ ನ್ಯಾಯಾಲಯದ ಮೊರೆ ಹೋಗುವುದು ಪಕ್ಕಾ ಆಗಿದೆ. ಆರ್ಬಿಐ ನೀಡಿದ ಐಪಿಒ ಆದೇಶವನ್ನು ರದ್ದುಗೊಳಿಸಲು ಜಂಟಿ ರಿಟ್ ಅರ್ಜಿ ಮತ್ತು ಟ್ರಸ್ಟ್ಗಳ ಪರವಾಗಿ ಮತ್ತೊಂದು ಅರ್ಜಿಯನ್ನು ಈ ವಾರದ ಕೊನೆಯಲ್ಲಿ ಬಾಂಬೆ ಹೈಕೋರ್ಟ್ಗೆ ಸಲ್ಲಿಸುವ ಸಾಧ್ಯತೆಯಿದೆ. ತಿದ್ದುಪಡಿ ಮಾಡಿದ ನಿಯಮಗಳನ್ನು ಪೂರ್ವಾಪರ ಅನ್ವಯವಾಗುವಂತೆ ಜಾರಿಗೆ ತರುತ್ತಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಾರ್ವಜನಿಕ ದತ್ತಿ ಟ್ರಸ್ಟ್ಗಳನ್ನು ನಿಯಂತ್ರಿಸುವ ತಿದ್ದುಪಡಿ ನಿಯಮಗಳ ಪ್ರಕಾರ, ಟ್ರಸ್ಟಿಗಳಲ್ಲಿ ಕೇವಲ ಕಾಲು ಭಾಗದಷ್ಟು (ಶೇ. 25) ಜನರು ಮಾತ್ರ ಅಜೀವ ಸದಸ್ಯರಾಗಿರಬೇಕು. ಆದರೆ, SRTT ಯ ಒಟ್ಟು ಆರು ಟ್ರಸ್ಟಿಗಳಲ್ಲಿ ಅರ್ಧದಷ್ಟು (ಶೇ. 50) ಜನರು ಜೀವಿತಾವಧಿ ಸದಸ್ಯರಾಗಿದ್ದಾರೆ. ನೋಯೆಲ್ ಟಾಟಾ, ಜಿಮ್ಮಿ ಟಾಟಾ ಮತ್ತು ಜೆಹಾಂಗೀರ್ ಎಚ್.ಸಿ. ಜಹಾಂಗೀರ್ ಅವರು ಈ ನಿಯಮ ಜಾರಿಗೆ ಬರುವ ಹಲವು ವರ್ಷಗಳ ಮೊದಲೇ ಜೀವಿತಾವಧಿ ಟ್ರಸ್ಟಿಗಳಾಗಿ ನೇಮಕಗೊಂಡಿದ್ದರು. ಈ ಆಧಾರದ ಮೇಲೆ ವಕೀಲರೊಬ್ಬರು ದೂರು ನೀಡಿದ್ದರಿಂದ ಮೇ ಆರಂಭದಲ್ಲಿ ದತ್ತಿ ಆಯುಕ್ತರು SRTT ಸಭೆಗಳ ಮೇಲೆ ತಡೆಯಾಜ್ಞೆ ತಂದಿದ್ದರು.
ಮೇಲ್ಮಟ್ಟದ ಎನ್ಬಿಎಫ್ಸಿ (NBFC) ನಿಯಂತ್ರಿಸುವ ಹೊಸ ಆರ್ಬಿಐ ಮಾನದಂಡಗಳನ್ನು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಸಮಾನವಾಗಿ ಅನ್ವಯಿಸುತ್ತಿಲ್ಲ. ಸರ್ಕಾರಿ ಎನ್ಬಿಎಫ್ಸಿಗಳಿಗೆ ಐಪಿಒ ಕಡ್ಡಾಯಗೊಳಿಸದೆ, ಖಾಸಗಿ ಸಂಸ್ಥೆಗಳಿಗೆ ಮಾತ್ರ ಒತ್ತಡ ಹೇರುವುದು ಅಸಮಾನತೆಯಿಂದ ಕೂಡಿದೆ.
ಒಂದು ವೇಳೆ ಟಾಟಾ ಸಮೂಹವು ಕೋರ್ಟ್ ಮೆಟ್ಟಿಲೇರಿದರೆ, ಇತ್ತೀಚಿನ ವರ್ಷಗಳಲ್ಲಿ ಆರ್ಬಿಐ ನಿರ್ದೇಶನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿರುವ ಎರಡನೇ ಪ್ರಕರಣ ಇದಾಗಲಿದೆ. ಈ ಹಿಂದೆ ಡಿಸೆಂಬರ್ 2018 ರಲ್ಲಿ, ಉದಯ ಕೊಟಕ್ ನೇತೃತ್ವದ ಕೊಟಕ್ ಮಹೀಂದ್ರಾ ಬ್ಯಾಂಕ್, ಈಕ್ವಿಟಿ ಶೇರುಗಳನ್ನು ಹಿಂತೆಗೆದುಕೊಳ್ಳುವ ಆರ್ಬಿಐ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ಪ್ರಕರಣವು ನಂತರ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿ, ಕೊಟಕ್ ತಮ್ಮ ಮತದಾನದ ಹಕ್ಕನ್ನು ಶೇ. 15 ಕ್ಕೆ ಮಿತಿಗೊಳಿಸಿ, ಬ್ಯಾಂಕಿನಲ್ಲಿ ಶೇ. 26 ರಷ್ಟು ಪಾಲು ಹೊಂದಲು ಆರ್ಬಿಐ ಅನುಮತಿ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ