ವಿಜಯ್‌ಗೆ ಅಣ್ಣಾ ಡಿಎಂಕೆ 1 ಬಣದ ಬೆಂಬಲ: ಇಂದು ಜಯಾ ಪಕ್ಷ ಹೋಳು?

Kannadaprabha News   | Kannada Prabha
Published : May 13, 2026, 09:16 AM IST
Tamilnadu New CM AIADMK Faction Extends Support to Vijay Majority Becomes Easy Today

ಸಾರಾಂಶ

ಎಐಎಡಿಎಂಕೆಯ 30 ಬಂಡಾಯ ಶಾಸಕರು ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಈ ಬೆಳವಣಿಗೆಯಿಂದ ಪಕ್ಷವು ಹೋಳಾಗುವ ಹಂತ ತಲುಪಿದ್ದು, ಎಡಪ್ಪಾಡಿ ಪಳನಿಸ್ವಾಮಿ ಬಣವು ವಿಶ್ವಾಸಮತದ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದೆ.

ಚೆನ್ನೈ (ಮೇ.13): ಟಿವಿಕೆ ಸರ್ಕಾರ ಬೆಂಬಲಿಸುವ ಕುರಿತು ಅಣ್ಣಾಡಿಎಂಕೆ ಪಕ್ಷದಲ್ಲಿ ಕಾಣಿಸಿಕೊಂಡ ಭಿನ್ನಮತ ಬಹುತೇಕ ಸ್ಫೋಟಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪಕ್ಷ ಎರಡು ಹೋಳಾಗುವುದು ನಿಚ್ಚಳವಾಗಿದೆ. ಇದಕ್ಕೆ ಪೂರಕವೆಂಬಂತೆ ಮುಖಂಡರಾದ ಎ.ಪಿ.ವೇಲುಸ್ವಾಮಿ ಮತ್ತು ಸಿ.ವಿ.ಷಣ್ಮುಗಂ ನೇತೃತ್ವದ 30 ಶಾಸಕರ ಎಐಎಡಿಎಂಕೆಯ ಬಂಡಾಯ ಬಣ, ಮಂಗಳವಾರ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.

ಹೀಗಾಗಿ ಸರ್ಕಾರ ರಚನೆಗೆ 118 ಸ್ಥಾನಕ್ಕೂ ಪರದಾಡುತ್ತಿದ್ದ ವಿಜಯ್‌ ಬಲ, ಅಣ್ಣಾಡಿಎಂಕೆ ಬಂಡಾಯ ಬಣವು ಬೆಂಬಲಿಸಿದರೆ 150ಕ್ಕೆ ಏರಲಿದೆ. 47 ಶಾಸಕರ ಬಲ ಅಣ್ಣಾಡಿಎಂಕೆಗೆ ಇದೆ. ಬಂಡಾಯ ಶಾಸಕರ ಸಂಖ್ಯೆ 30 ಆಗಿರುವ ಕಾರಣ (3ನೇ 2ರಷ್ಟು), ಅನರ್ಹತೆ ಭೀತಿ ಇಲ್ಲ.

ಆದಾಗ್ಯೂ ವಿಶ್ವಾಸಮತ ಯಾಚನೆ ವೇಳೆ ಸರ್ಕಾರವನ್ನು ವಿರೋಧಿಸುವ ನಿಲುವನ್ನು ಪಕ್ಷವು ತೆಗೆದುಕೊಂಡಿದೆ. ‘ಒಂದು ವೇಳೆ ಯಾರಾದರೂ ಪಕ್ಷಕ್ಕೆ ವಿರುದ್ಧವಾಗಿ ಅಡ್ಡಮತದಾನ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಅಧ್ಯಕ್ಷ ಎಡಪ್ಪಾಡಿ ಬಣದ ಅಗ್ರಿ ಎಸ್‌.ಎಸ್‌. ಕೃಷ್ಣಮೂರ್ತಿ ಹೇಳಿದ್ದಾರೆ.

ಹೀಗಾಗಿ ಬುಧವಾರದ ವಿಶ್ವಾಸಮತದ ವೇಳೆ ಷಣ್ಮುಗಂ ಬಣ ಸರ್ಕಾರದ ಪರ ಮತ ಹಾಕಿದರೆ, ಎಡಪ್ಪಾಡಿ ಬಣ ಏನು ಮಾಡಲಿದೆ? ವಿಪ್‌ ಉಲ್ಲಂಘಿಸಿದ್ದಕ್ಕೆ ಸದಸ್ಯತ್ವದಿಂದ ಅನರ್ಹ ಮಾಡುವಂತೆ ಕೋರಲಿದೆಯೇ? ಹಾಗೆ ಮಾಡಿದರೆ ಎದುರಾಳಿ ಬಣವನ್ನೇ ನೈಜ ಪಕ್ಷ ಎಂದು ಸ್ಪೀಕರ್‌ ಮಾನ್ಯ ಮಾಡಿದರೆ ತಮ್ಮ ಬಣಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗುವ ಕಾರಣ ಎಡಪ್ಪಾಡಿ ಬಣ ಸುಮ್ಮನೆ ಇರಲಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.

ಏನೇ ಆದರೂ ಬುಧವಾರದ ಬೆಳವಣಿಗೆ ಬಳಿಕ ಪಕ್ಷ ವಿಭಜನೆಯ ಅಥವಾ ಪಕ್ಷದ ನಾಯಕತ್ವದಿಂದ ಎಡಪ್ಪಾಡಿ ಪಳನಿಸ್ವಾಮಿ ಕೆಳಗಿಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗುವುದು ಖಚಿತ ಎನ್ನಲಾಗಿದೆ.

ಡಿಎಂಕೆ ಜೊತೆ ಸರ್ಕಾರ:

ಇದೇ ವೇಳೆ ಪಳನಿಸ್ವಾಮಿ ಡಿಎಂಕೆ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗುವ ಇರಾದೆ ಹೊಂದಿದ್ದರು. ಆದರೆ ಅವರ ಪ್ರಸ್ತಾಪವನ್ನು ಬಹುತೇಕ ಶಾಸಕರು ನಿರಾಕರಿಸಿದರು. ಯಾಕೆಂದರೆ ಈ ಪ್ರಸ್ತಾಪ ಎಐಎಡಿಎಂಕೆಯ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿತ್ತು. ಡಿಎಂಕೆ ವಿರೋಧಿಸಲೆಂದೇ ಎಐಎಡಿಎಂಕೆ ಸ್ಥಾಪಿಸಲಾಗಿತ್ತು. ಡಿಎಂಕೆ ಜತೆಗೇನಾದರೂ ಪಕ್ಷ ಮೈತ್ರಿ ಮಾಡಿಕೊಂಡರೆ ಭವಿಷ್ಯದಲ್ಲಿ ಎಐಎಡಿಎಂಕೆ ಸಂಪೂರ್ಣವಾಗಿ ನಾಶವಾಗುವ ಅಪಾಯವಿತ್ತು ಎಂದು ಸುದ್ದಿಗಾರರಿಗೆ ಷಣ್ಮುಗಂ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಎಡಪ್ಪಾಡಿ ಬಣ ಮತ್ತು ಡಿಎಂಕೆ ಎರಡೂ ತಳ್ಳಿಹಾಕಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಜಯ್‌ ಸಿಎಂ ಆದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ಕೈ ಮುಗಿದ ರಜನಿ: ವಿಡಿಯೋ ವೈರಲ್‌
TVK Astrologer: ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ವಿಜಯ್‌ಗೆ ವಿಶೇಷ ಕರ್ತವ್ಯಾಧಿಕಾರಿ!