ಕಠಿಣ ನಿರ್ಬಂಧ ಪಾಲಿಸಿದರೆ 3ನೇ ಅಲೆ ಬರೋದಿಲ್ಲ: ಮೋದಿ ಸಲಹೆಗಾರ!

By Kannadaprabha NewsFirst Published May 8, 2021, 7:13 AM IST
Highlights

‘ಕೊರೋನಾ 3ನೇ ಅಲೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದ ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರ| ಕಠಿಣ ನಿರ್ಬಂಧ ಪಾಲಿಸಿದರೆ 3ನೇ ಅಲೆ ಬರೋದಿಲ್ಲ| ಕೇಂದ್ರದ ವೈಜ್ಞಾನಿಕ ಸಲಹೆಗಾರ

ನವದೆಹಲಿ(ಮೇ.08):  ‘ಕೊರೋನಾ 3ನೇ ಅಲೆಯನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದ ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್‌ ರಾಘವನ್‌ ಈಗ ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ‘ಒಂದು ವೇಳೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ 3ನೇ ಅಲೆಯನ್ನು ತಡೆಯುವುದು ಸಾಧ್ಯವಿದೆ’ ಎಂದು ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕೊರೋನಾ ದೇಶದೆಲ್ಲೆಡೆ ವಿವಿಧ ಭಾಗದಲ್ಲಿ ವಿಭಿನ್ನ ರೀತಿಯ ತುತ್ತತುದಿ ಹಾಗೂ ಇಳಿಕೆಯನ್ನು ಕಾಣಲಿದೆ. ಸೋಂಕು ಏರಿಕೆ ಆಗುವ ಸ್ಥಳ, ಸಮಯ ಹಾಗೂ ತೀವ್ರತೆಯನ್ನು ಇದು ಅವಲಂಬಿಸಿದೆ. ಸ್ಥಳೀಯ ಮಟ್ಟದಲ್ಲಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳುವ ಕಟ್ಟುನಿಟ್ಟಿನ ಕ್ರಮಗಳು ಎಷ್ಟುಪರಿಣಾಮಕಾರಿಯಾಗಿದೆ ಎಂಬುದರ ಮೇಲೆ ಕೊರೋನಾ 3ನೇ ಅಲೆ ಹೇಗಿರಲಿದೆ ಎಂಬುದು ನಿರ್ಧಾರವಾಗಲಿದೆ. ಒಂದು ವೇಳೆ ಕಠಿಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ 3ನೇ ಅಲೆ ಬರುವುದನ್ನು ತಡೆಯಬಹುದಾಗಿದೆ’ ಎಂದರು.

"

‘ಸೋಂಕು ಪರೀಕ್ಷೆ, ಚಿಕಿತ್ಸೆ ಹಾಗೂ ನಿಗ್ರಹವನ್ನು ಪರಿಣಾಮಕಾರಿಯಾಗಿ ಮುಂದುವರಿಸಿದರೆ, ರೋಗ ಲಕ್ಷಣ ಇಲ್ಲದೇ ಹೋದರೂ ಹರಡಬಹುದಾದ ಸೋಂಕನ್ನು ತಡೆಗಟ್ಟಬಹುದಾಗಿದೆ. ಇದು ಕಷ್ಟಕರ. ಆದರೆ, ನಾವು ಅದನ್ನು ಮಾಡಲೇಬೇಕಿದೆ. ಸೋಂಕು ಹರಡಲು ಅವಕಾಶ ನೀಡಿದರೆ ಮಾತ್ರವೇ ಅದು ಹರಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಸೋಂಕು ಹರಡುವುದಕ್ಕೆ ಅವಕಾಶವೇ ಇಲ್ಲದಿದ್ದರೆ ಸೋಂಕು ತನ್ನಿಂದ ತಾನೇ ತಗ್ಗಲಿದೆ’ ಎಂದರು.

3ನೇ ಅಲೆ ತಡೆ ಸಾಧ್ಯವೇ ಇಲ್ಲ: ಮೋದಿ ಸಲಹೆಗಾರ ಎಚ್ಚರಿಕೆ!

‘ಹೆಚ್ಚಿನ ಪ್ರಮಾಣದ ಜನರು ಲಸಿಕೆ ಪಡೆದುಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮತ್ತು ಇತರ ಕಟ್ಟುನಿಟ್ಟಿನ ಕ್ರಮಗಳಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬಹುದಾಗಿದೆ. ಒಂದು ವೇಳೆ ಜನರು ಕೊರೋನಾ ಮುಗಿದಿದೆ ಎಂದು ಭಾವಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದೇ ಹೋದರೆ ಕೊರೋನಾ ಸೋಂಕು ಹರಡಲು ನಾವೇ ಅವಕಾಶ ನೀಡಿದಂತಾಗಲಿದೆ’ ಎಂದು ಎಚ್ಚರಿಸಿದರು.

ಬುಧವಾರ ಸುದ್ದಿಗೋಷ್ಠಿಯ ವೇಳೆ ಮಾತನಾಡಿದ್ದ ರಾಘವನ್‌, ‘ಕೊರೋನಾ 3ನೇ ಅಲೆಯನ್ನು ತಡೆಯುವುದು ಅಸಾಧ್ಯ. ಇನ್ನಷ್ಟುವ್ಯಾಪಕವಾಗಿ ಕೊರೋನಾ ದಾಳಿ ನಡೆಸಲಿದೆ’ ಎಂದು ಹೇಳಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!