ರಾಮ ಮಂದಿರ ಮಂತ್ರಾಕ್ಷತೆ ಮೆರವಣಿಗೆ ಮೇಲೆ ಕಲ್ಲು ತೂರಾಟ, ಭಕ್ತರಿಗೆ ಗಾಯ!

By Suvarna NewsFirst Published Jan 10, 2024, 2:42 PM IST
Highlights

ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಜ.22ರಂದು ನಡೆಯಲಿದೆ. ಇದೀಗ ಮನೆ ಮನೆಗೆ ರಾಮ ಮಂದಿರದ ಮಂತ್ರಾಕ್ಷತೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಆದರೆ ಇದೇ ಮಂತ್ರಾಕ್ಷತೆ ಮೆರವಣಿ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.ನಿರ್ದಿಷ್ಟ ವಲಯದಲ್ಲಿ ಈ ಘಟನೆ ನಡೆದಿದೆ.

ಭೋಪಾಲ್(ಜ.10) ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಕಾರ್ಯಗಳು ಭರದಿಂದ ಸಾಗಿದೆ. ರಾಮ ಭಕ್ತರ ಸಂತಸ ಇಮ್ಮಡಿಗೊಂಡಿದೆ. ಐತಿಹಾಸಿಕ ಕ್ಷಣಕ್ಕಾಗಿ ಕಾತರ ಹೆಚ್ಚಾಗಿದೆ. ಇದರ ನಡುವೆ ಆಯೋಧ್ಯೆ ರಾಮ ಮಂದಿರದಲ್ಲಿ ಪೂಜಿಸಿದ ಮಂತ್ರಾಕ್ಷತೆಯನ್ನು ಪ್ರತಿ ಹಿಂದೂಗಳ ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಆದರೆ ಮಧ್ಯಪ್ರದೇಶದ ಶಾಜಾಪುರದಲ್ಲಿ ದುರ್ಘಟನೆ ನಡೆದಿದೆ. ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸಲು ಮೆರವಣಿಗೆ ಮೂಲಕ ಸಾಗುತ್ತಿದ್ದ ರಾಮ ಭಕ್ತರ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಕಲ್ಲುತೂರಾಟದಲ್ಲಿ ಓರ್ವ ಭಕ್ತ ತೀವ್ರವಾಗಿ ಗಾಯಗೊಂಡಿದ್ದರೆ, ಮತ್ತೆ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಸೋಮವಾರ ಸಂಜೆ 7.30ಕ್ಕೆ ಮಂತ್ರಾಕ್ಷತೆ ಮನೆ ಮನೆಗೆ ತಲುಪಿಸಲು ರಾಮ ಭಕ್ತರ ತಂಡ ಮೆರವಣಿಗೆ ಮೂಲಕ ಸಾಗಿತ್ತು. ಆದರೆ ಶಾಜಾಪುರ ಪಟ್ಟಣ ತಲುಪುತ್ತಿದ್ದಂತೆ ಏಕಾಏಕಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ.  ಇದರಿಂದ ಭಾರಿ ಸಂಘರ್ಷ ನಡೆದಿದೆ. ಮಂತ್ರಾಕ್ಷತೆ ಮೆರವಣಿಗೆ ವೇಳೆ ಜೈ ಶ್ರೀರಾಮ ಗೋಷಣೆ ಕೂಗುತ್ತಾ, ರಾಮನ ಭಜನೆ ಮೂಲಕ ಭಕ್ತರು ಸಾಗಿದ್ದರು. ಇದು ಶಾಜಾಪುರ್ ಮುಸ್ಲಿಮ್ ವಲಯ ತಲುಪುತ್ತಿದ್ದಂತೆ ಸಂಘರ್ಷಕ್ಕೆ ಕಾರಣವಾಗಿದೆ.

Latest Videos

ಜ.17ರಂದು ಆಯೋಧ್ಯೆಯಲ್ಲಿ ಆಯೋಜಿಸಿದ್ದ ರಾಮಲಲ್ಲಾ ಮೆರವಣಿಗೆ ದಿಢೀರ್ ರದ್ದು!

ಕಟ್ಟಡ, ಮನೆಗಳ ಮೇಲಿಂದ ಕಲ್ಲುಗಳನ್ನು ತೂರಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಈ ಮಾಹಿತಿ ತಿಳಿದ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲು ಆಗ್ರಹಿಸಿದೆ. ಇಷ್ಟೇ ಅಲ್ಲ ಆರೋಪಿಗಳ ಮನೆ ದ್ವಂಸಗೊಳಿಸಲು ಒತ್ತಾಯ ಮಾಡಿದೆ.ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಅರುಣ್ ಭಿಮವಾದ್ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನ ನಿರತ ಹಿಂದೂಗಳ ಸಮಾಧಾನ ಮಾಡಿದ್ದಾರೆ. ಇತ್ತ ಕ್ಷಿಪ್ರ ಕಾರ್ಯಾಟಚರಣೆ ನಡೆಸಿದ  ಪೊಲೀಸರು 8 ಆರೋಪಿಗಳ ಬಂಧಿಸಿದ್ದಾರೆ. 

ಶಾಜಾಪುರ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇತ್ತ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜೊತೆಗೆ ರಾಮ ಮಂದಿರ ಮಂತ್ರಾಕ್ಷತೆ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ಅಹಿತಕರ ಘಟನೆಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

 

ರಾಮ ಮಂದಿರ ವಿಡಿಯೋ ರಿಲೀಸ್ ಮಾಡಿದ ಟ್ರಸ್ಟ್, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ದೇಗುಲ!

ಕಲ್ಲು ತೂರಿದೆ 24 ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ. 15 ರಿಂದ 20 ಮಂದಿಯನ್ನು ಗುರುತಿಸಲಾಗಿದೆ. ಈ ಪೈಕಿ 8 ಮಂದಿಯನ್ನು ಬಂಧಿಸಲಾಗಿದೆ.
 

click me!