ಸೋಂಕು ತಡೆ ಔಷಧ ಸಿಂಪಡಣೆ ಅಪಾಯಕಾರಿ

By Kannadaprabha NewsFirst Published Apr 20, 2020, 9:29 AM IST
Highlights

ಸೋಂಕು ತಡೆ ಔಷಧ ಸಿಂಪಡಣೆ ಅಪಾಯಕಾರಿ |  ಇದರಿಂದ ದೈಹಿಕ, ಮಾನಸಿಕ ಆರೋಗ್ಯಕ್ಕೆ ಅಪಾಯ | ಮೈಒಳಗಿನ ಕೊರೋನಾ ವೈರಾಣು ಇದರಿಂದ ಸಾಯಲ್ಲ | ಸೋಂಕಿತ ಮುಟ್ಟಿದ ವಸ್ತುವಿನ ಮೇಲೆ ಇದನ್ನು ಸ್ಪ್ರೇ ಮಾಡಬೇಕು

ನವದೆಹಲಿ (ಏ. 20): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸೋಂಕು ನಿವಾರಕಗಳನ್ನು ಮೈಮೇಲೆ ಸಿಂಪಡಿಸುವುದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಾನಿಕಾರಕ ಎಂದು ಕೇಂದ್ರ  ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಅನೇಕ ಕಡೆ ‘ಸೋಂಕು ನಿವಾರಕ ಟನೆಲ್‌ಗಳು’ ಎಂಬ ಹೆಸರಿನಲ್ಲಿ ‘ಗುಹೆ’ಗಳನ್ನು ಸೃಷ್ಟಿಸಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವುದು ಜನಪ್ರಿಯವಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಎಚ್ಚರಿಕೆ ಮಹತ್ವ ಪಡೆದಿದೆ.

ಈ ಸಂಬಂಧ ಸಲಹೆ ಸೂಚನೆಗಳನ್ನು ಸರ್ಕಾರ ಭಾನುವಾರ ಹೊರಡಿಸಿದೆ. ‘ಕೊರೋನಾ ವೈರಸ್‌ನ ಪ್ರಭಾವಕ್ಕೆ ಮನುಷ್ಯನೊಬ್ಬ ಒಳಗಾಗಿದ್ದ ಎಂದರೆ, ದೇಹದೊಳಗೆ ಸೇರಿಕೊಂಡಿರುವ ವೈರಾಣುವು ಬಾಹ್ಯ ಸೋಂಕು ನಿವಾರಕದಿಂದ ಸತ್ತು ಹೋಗಲ್ಲ. ಬಟ್ಟೆಮೇಲೆ ಅಥವಾ ದೇಹದ ಮೇಲೆ ಅದನ್ನು ಪ್ರೋಕ್ಷಿಸುವುದು ಪರಿಣಾಮಕಾರಿ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ’ ಎಂದು ಸಚಿವಾಲಯ ತಿಳಿಸಿದೆ.

ಒಂದೇ ದಿನ 33 ಸಾವಿರ ಕೊರೋನಾ ಕೇಸ್, ಅಮೆರಿಕದಲ್ಲಿ ವೈರಸ್ ಬಿರುಗಾಳಿ!

ಸೋಂಕು ನಿವಾರಕಗಳನ್ನು ವೈದ್ಯರು ಬಳಸುವ ಸಾಧನಗಳು ಮತ್ತು ಕೊರೋನಾ ಪೀಡಿತ ಮುಟ್ಟಿದ ವಸ್ತುಗಳ ಮೇಲಿನ ಸೋಂಕನ್ನು ಹೋಗಲಾಡಿಸಲು ಬಳಸಲಾಗುತ್ತದೆ. ಮಾನವನ ದೇಹದ ಮೇಲೆ ಇದರ ಬಳಕೆ ಅಪಾಯಕಾರಿ ಎಂದು ಸ್ಪಷ್ಟಪಡಿಸಲಾಗಿದೆ.

ಇತ್ತೀಚೆಗೆ ಜಿಲ್ಲೆ ಹಾಗೂ ಸ್ಥಳೀಯ ಮಟ್ಟದಲ್ಲಿ ‘ಸೋಡಿಯಂ ಹೈಪೋಕ್ಲೋರೈಟ್‌’ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿರುವುದು ಮಾಧ್ಯಮಗಳಲ್ಲಿ ಸಾಕಷ್ಟುಪ್ರಚಾರ ಪಡೆದಿದೆ. ಇದರಿಂದ ವೈರಾಣು ಸಾಯುತ್ತದೆಯೇ ಎಂಬ ಸ್ಪಷ್ಟೀಕರಣ ಕೇಳಲಾಗಿತ್ತು. ಇದಕ್ಕೆ ಸಚಿವಾಲಯ ಕೆಳಗಿನಂತೆ ಸ್ಪಷ್ಟನೆ ನೀಡಿದೆ.

ಅಮೆರಿಕದಲ್ಲಿ ‘ಲಾಕ್‌ಡೌನ್‌’ ವಿರುದ್ಧ ಪ್ರತಿಭಟನೆ: ಅದಕ್ಕೆ ಟ್ರಂಪ್‌ ಕುಮ್ಮಕ್ಕು!

ಸಲಹೆ ಸೂಚನೆಗಳು:

- ಅಪಾಯಕಾರಿ ಕೀಟ ನಾಶ ಹಾಗೂ ವೈದ್ಯಕೀಯ ಸಲಕರಣೆಗಳ ಮೇಲೆ ವೈರಾಣು ನಿವಾರಣೆಗಾಗಿ ಸೋಂಕು ನಿವಾರಕ ಬಳಸಲಾಗುತ್ತದೆ.

- ಸೋಂಕಿತ ಅಥವಾ ಶಂಕಿತನು ಸ್ಪರ್ಶಿಸಿದ್ದಾನೆ ಎನ್ನಲಾದ ವಸ್ತು, ಪ್ರದೇಶಗಳ ಮೇಲೆ ಸೋಂಕು ನಿವಾರಕವನ್ನು ಸ್ಪ್ರೇ ಮಾಡಲಾಗುತ್ತದೆ.

- ಇದನ್ನು ಸ್ಪ್ರೇ ಮಾಡುವ ಮುನ್ನ ಕೈಗವಸು ಧರಿಸುವಂಥ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

- ಸಮೂಹವೊಂದರ ಮೇಲೆ ಅಥವಾ ವ್ಯಕ್ತಿಯೊಬ್ಬನ ಮೇಲೆ ಇದನ್ನು ಯಾವುದೇ ಸಂದರ್ಭದಲ್ಲಿ ಸಿಂಪಡಿಸಬಹುದು ಎಂಬ ಶಿಫಾರಸು ಮಾಡಿಲ್ಲ.

- ಸಮೂಹದ ಮೇಲೆ ಅಥವಾ ವ್ಯಕ್ತಿಯ ಮೇಲೆ ಇದನ್ನು ಪ್ರೋಕ್ಷಿಸುವುದು ದೈಹಿಕ ಹಾಗೂ ಮಾನಸಿಕವಾಗಿ ಅಪಾಯಕಾರಿ.

- ಇದು ಕಣ್ಣುರಿ, ಚರ್ಮದ ಉರಿ ಅಥವಾ ವಾಂತಿ, ವಾಕರಿಕೆಗೂ ಕಾರಣವಾಗಬಹುದು.

- ಸೋಡಿಯಂ ಹೈಪೋಕ್ಲೋರೈಟ್‌ ವಾಸನೆ ಸೇವಿಸಿದರೆ ಮೂಗು, ಶ್ವಾಸಕೋಶ, ಗಂಟಲಿನ ಸಮಸ್ಯೆ ಆಗಬಹುದು. ಉಸಿರಾಟದ ತೊಂದರೆ ಸೃಷ್ಟಿಯಾಗಬಹುದು.

- ‘ಸೋಂಕು ನಿವಾರಕ ಪ್ರೋಕ್ಷಿಸಲಾಗಿದೆ. ನಮಗೇನೂ ಆಗಲ್ಲ ಬಿಡು’ ಎಂದು ಜನರು ತಪ್ಪು ತಿಳಿದು, ಕೈತೊಳೆಯುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಬಿಡಬಹುದು.

click me!