'ಕೊರೋನಾ ಜಾತಿ, ಧರ್ಮ ನೋಡಲ್ಲ: ಇದರ ವಿರುದ್ಧ ಹೋರಾಡಲು ಏಕತೆ, ಭ್ರಾತೃತ್ವ ಬೇಕು'

By Kannadaprabha NewsFirst Published Apr 20, 2020, 8:48 AM IST
Highlights

ಸೋಂಕುವ ಮುನ್ನ ಕೊರೋನಾ ಜಾತಿ, ಧರ್ಮ ನೋಡಲ್ಲ: ಮೋದಿ| ಇದರ ವಿರುದ್ಧ ಹೋರಾಡಲು ಏಕತೆ, ಭ್ರಾತೃತ್ವ ಬೇಕು| ಪ್ರಧಾನಿ ನರೇಂದ್ರ ಮೋದಿ ಕರೆ| ತಬ್ಲೀಘಿ ವಿರುದ್ಧದ ಅಕ್ರೋಶದ ಬೆನ್ನಲ್ಲೇ ಈ ಹೇಳಿಕೆ

ನವದೆಹಲಿ(ಏ.20): ‘ಕೊರೋನಾ ಎಂಬುದು ಜಾತಿ, ಧರ್ಮ, ವರ್ಣ, ಭಾಷೆ ಅಥವಾ ಗಡಿಯನ್ನು ನೋಡುವುದಿಲ್ಲ. ಇದರ ವಿರುದ್ಧ ಹೋರಾಡಲು ಏಕತೆ ಮತ್ತು ಭ್ರಾತೃತ್ವ ಬೇಕು. ಹೋರಾಟಕ್ಕೆ ನಾವು ಒಗ್ಗಟ್ಟಾಗಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್‌ ಹರಡಲು ತಬ್ಲೀಘಿ ಜಮಾತ್‌ ಎಂಬ ಇಸ್ಲಾಮಿಕ್‌ ಧಾರ್ಮಿಕ ಸಂಘಟನೆ ಕಾರಣ ಎಂದು ಇತ್ತೀಚೆಗೆ ದೇಶದ ಒಂದು ವಲಯವು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದ ಸೋಂಕಿಗೆ ಜಾತಿ-ಧರ್ಮದ ಬಣ್ಣ ಲೇಪನವಾಗಿತ್ತು. ಇದರ ಬೆನ್ನಲ್ಲೇ ಟ್ವೀಟ್‌ ಮೂಲಕ ಮೋದಿ ಅವರು ನೀಡಿದ ಈ ಹೇಳಿಕೆಗೆ ಮಹತ್ವ ಬಂದಿದೆ.

ಅಮೆರಿಕದಲ್ಲಿ ‘ಲಾಕ್‌ಡೌನ್‌’ ವಿರುದ್ಧ ಪ್ರತಿಭಟನೆ: ಅದಕ್ಕೆ ಟ್ರಂಪ್‌ ಕುಮ್ಮಕ್ಕು!

‘ಇತಿಹಾಸದ ಪುಟ ನೋಡಿದರೆ ದೇಶಗಳು ಹಾಗೂ ಸಮಾಜಗಳು ಎದುರಾಳಿಗಳಾಗಿ ಹೋರಾಟ ನಡೆಸಿವೆ. ಆದರೆ ನಾವು ಇಂದು ಒಂದೇ ಸವಾಲು ಎದುರಿಸಲು ನಾವು ಒಗ್ಗಟ್ಟಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಇಂದು ಕೊರೋನಾದಿಂದ ದೇಶಕ್ಕೆ ಒಂದು ಅವಕಾಶ ಲಭಿಸಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿಶ್ವಕ್ಕೆ ಸಹಾಯ ಮಾಡಿ ಜಾಗತಿಕ ಸಹಾಯ ಶಕ್ತಿಯಾಗಿ ಹೊರಹೊಮ್ಮಬೇಕು’ ಎಂದು ಮೋದಿ ಕೋರಿದ್ದಾರೆ.

ಇದೇ ವೇಳೆ, ಸಾಮಾಜಿಕ ಮಾಧ್ಯಮ ಲಿಂಕ್‌್ಡ ಇನ್‌ನಲ್ಲೂ ಕೊರೋನಾ ಲಾಕ್‌ಡೌನ್‌ ಬಗ್ಗೆ ಬರೆದಿರುವ ಮೋದಿ, ‘ಲಾಕ್‌ಡೌನ್‌ನಿಂದ ವೃತ್ತಿಪರ ಜೀವನದ ಆಕಾರ ರೇಖೆಗಳನ್ನೇ ಬದಲಾಗಿದೆ. ಮನೆಯೇ ಇಂದು ಕಚೇರಿ ಆಗಿದೆ. ಇಂಟರ್ನೆಟ್‌ ಹೊಸ ಮೀಟಿಂಗ್‌ ರೂಂ ಆಗಿದೆ’ ಎಂದು ಬಣ್ಣಿಸಿದ್ದಾರೆ.

ಕೊರೋ​ನಾ ಭೀತಿ: ಕೊಪ್ಪಳದಲ್ಲಿ 223 ವರದಿಯೂ ನೆಗೆಟಿವ್

‘ನಾನೂ ಹೊಸ ಬದಲಾವಣೆಗೆ ತೆರೆದುಕೊಂಡಿದ್ದೇನೆ. ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಹಾಗೂ ವಿಶ್ವ ನಾಯಕರೊಂದಿಗೆ ವಿಡಿಯೋ ಕಾನ್ಪರೆನ್ಸ್‌ ಮೂಲಕ ಸಭೆ ನಡೆಸುತ್ತಿದ್ದೇನೆ. ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ಗಮನ ಹರಿಸಬೇಕಿದೆ’ ಎಂದಿದ್ದಾರೆ.

‘ಈ ಮೂಲಕ ನಮ್ಮ ಕಚೇರಿ, ವ್ಯವಹಾರ ಹಾಗೂ ವಾಣಿಜ್ಯಿಕ ಚಟುವಟಿಕೆಗಳು ಸಂಕಷ್ಟದ ಸಮಯದಲ್ಲೂ ತಡೆರಹಿತವಾಗಿ ಸಾಗಿ, ಜೀವಹಾನಿ ಆಗದಂತೆ ನೋಡಿಕೊಳ್ಳಬೇಕು. ಹೊಸ ಕೆಲಸದ ಸಂಸ್ಕೃತಿ ಮೂಲಕ ವಿಶ್ವದಲ್ಲೇ ಮುಂಚೂಣಿಯಲ್ಲಿರಬೇಕು’ ಎಂದು ಪ್ರಧಾನಿ ಕರೆ ನೀಡಿದ್ದಾರೆ.

click me!