
ಕೋಲ್ಕತಾ(ಮಾ.29): ಬೀರ್ಭೂಮ್ ಹಿಂಸಾಚಾರ, ಸಿಬಿಐ ರೇಡ್ ಸೇರಿದಂತೆ ಹಲವು ಕಾರಣಗಳಿಂದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ಟಿಎಂಸಿ(TMC) ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಇದು ರಾಜಕೀಯವಾಗಿ ಬಿಜೆಪಿಗೆ(BJP) ಅತೀ ದೊಡ್ಡ ಅಸ್ತ್ರವಾಗಲಿದೆ ಎಂಬುದನ್ನು ಅರಿತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ನಡೆಸುತ್ತಿದೆ. ಇಂತಹ ಪೊಳ್ಳು ಸರ್ಕಾರವನ್ನು ಕಿತ್ತೊಗೆಯಲು ವಿಪಕ್ಷಗಳು ಒಗ್ಗಟ್ಟಾಗಿ ಹೋರಾಡೋಣ ಎಂದು ಬಿಜೆಪಿಯೇತರ ಪಕ್ಷಗಳಿಗೆ ಮಮತಾ ಮನವಿ ಮಾಡಿದ್ದಾರೆ.
2024ರ ಲೋಕಸಭಾ(Loksabha Election 2024) ಚುನಾವಣೆಗೂ ಮುನ್ನ ಮತ್ತೆ ತೃತೀಯ ರಂಗ ರಚನೆಯ ಪರೋಕ್ಷ ಪ್ರಸ್ತಾಪ ಮಾಡಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ದಮನಕಾರಿ ಬಿಜೆಪಿ ಆಡಳಿತದ ವಿರುದ್ಧ ಸಂಘಟಿತ ಹೋರಾಟಕ್ಕೆ ಕರೆ ನೀಡಿದ್ದಾರೆ. ಈ ಕುರಿತು ಬಿಜೆಪಿಯೇತರ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದಿರುವ ಮಮತಾ, ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಸಭೆ ಸೇರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್(Congress) ಮುಳುಗಿದ ಹಡಗು ಎನ್ನುವ ಟೀಕೆ ಮಾಡುತ್ತಿದ್ದ ಮಮತಾ, ಇದೀಗ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೂ ಈ ಪತ್ರ ರವಾನಿಸಿದ್ದಾರೆ.
ಬಿಜೆಪಿಗೆ ಮತ ಕೊಟ್ಟರೆ ಬಂಗಾಳದಲ್ಲಿ ಬದುಕು ಸಾಗಿಸೋದೇ ಕಷ್ಟವಾಗುತ್ತೆ, ಟಿಎಂಸಿ ಶಾಸಕನಿಂದ ಬಹಿರಂಗ ಎಚ್ಚರಿಕೆ!
ಕೇಂದ್ರದ ಬಿಜೆಪಿ ಸರ್ಕಾರ ಸಿಬಿಐ ಸೇರಿದಂತೆ ಹಲವು ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಹೀಗಾಗಿ ಪ್ರಗತಿಪರ ಶಕ್ತಿಗಳು ಜೊತೆಯಾಗಿ ಬಿಜೆಪಿ ವಿರುದ್ಧ ಹೋರಾಡಿದರು ಗೆಲುವು ಸಾಧ್ಯ ಎಂದು ಮಮತಾ ಬ್ಯಾನರ್ಜಿ ವಿಪಕ್ಷಗಳಿಗೆ ಪತ್ರ ಬರೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಪತ್ರವನ್ನು ಹಂಚಿಕೊಂಡಿದೆ.
ಬಿಜೆಪಿ ವಿರುದ್ಧ ಸಂಘಟಿತವಾಗಿ ಹೋರಾಟಡಲು ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಗೆ ಬಿಜೆಪಿಯೇತರ ಹಾಗೂ ಪ್ರಗತಿಪರ ಶಕ್ತಿಗಳು ಪಾಲ್ಗೊಳ್ಳಬೇಕು. ಕೇಂದ್ರದ ವಿರುದ್ಧ ಮುಂದಿನ ನಡೆ, ಮುಂಬರವು ಚುನಾವಣೆಯಲ್ಲಿ ಹೋರಾಟದ ರೂಪುರೇಶೆಯನ್ನು ಈ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ-ಟಿಎಂಸಿ ಶಾಸಕರ ಮಾರಾಮಾರಿ, ಐವರು ಬಿಜೆಪಿ ಶಾಸಕರು ಸಸ್ಪೆಂಡ್!
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿ ಸರ್ಕಾರ, ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ ದಾರಿ ತಪ್ಪಿಸುತ್ತಿದೆ. ವಿಕೇಂದ್ರಿಕರಣ ಆಡಳಿತದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಈ ದೇಶವನ್ನು ಕಾಪಾಡಲು ನಾವು ಒಗ್ಗಟ್ಟಾಗಬೇಕಿದೆ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ವಿಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಬೀರ್ಭೂಮ್ ಹಿಂಸಾಚಾರ
ಪಶ್ಚಿಮ ಬಂಗಾಳದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಆಡಳಿತಾರೂಢ ಟಿಎಂಸಿ ನಾಯಕರೊಬ್ಬರ ಹತ್ಯೆಗೆ ಪ್ರತಿಯಾಗಿ ಇಬ್ಬರು ಮಕ್ಕಳು ಸೇರಿದಂತೆ 8 ಜನರನ್ನು ಬೆಂಕಿ ಹಚ್ಚಿ ಕೊಂದ ಭೀಕರ ಘಟನೆ ಬಿರ್ಬುಮ್ ಜಿಲ್ಲೆಯ ರಾಮಪುರಹಟ್ನಲ್ಲಿ ಇತ್ತೀಚೆಗೆ ನಡೆದಿದೆ.
ರಾಮಪುರಹಟ್ ಪಂಚಾಯಿತಿಯ ಉಪಮುಖ್ಯಸ್ಥ, ಟಿಎಂಸಿ ನಾಯಕ ಬಹಾದ್ದೂರ್ ಶೇಖ್ ಅವರನ್ನು ಸೋಮವಾರ ರಾತ್ರಿ ಹತ್ಯೆ ಮಾಡಲಾಗಿತ್ತು. ಅದಾದ ಕೆಲವೇ ಹೊತ್ತಿನಲ್ಲೇ ಗ್ರಾಮದ 8 ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 8 ಜನರು ಸಜೀವವಾಗಿ ಸುಟ್ಟು ಹೋಗಿದ್ದಾರೆ. ಬೆಂಕಿ ಹಚ್ಚಿದ ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ಸುಟ್ಟಗುಡಿಸಿಲ ಒಳಗೆ 7 ಶವ ಪತ್ತೆಯಾಗಿದೆ. ಓರ್ವ ಗಾಯಾಳು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಸೇರಿ 8 ಮಂದಿಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಟಿಎಂಸಿ ನಾಯಕ, ರಾಮಪುರಹಟ್-1 ಬ್ಲಾಕ್ ಅಧ್ಯಕ್ಷ ಅನಾರುಲ್ ಹೊಸ್ಸೈನ್ ಎಂಬಾತನನ್ನು ಗುರುವಾರ ಬಂಧಿಸಲಾಗಿದೆ. ಹತ್ಯೆಗೆ ಕುಮ್ಮಕ್ಕು ನೀಡಿದ ಹೊಸ್ಸೈನ್ ಬಂಧಿಸುವಂತೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚಿಸಿದ ಬೆನ್ನಲ್ಲೇ ಹೊಸ್ಸೈನ್ನನ್ನು ತಾರಪಿತಾ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ರಾಮಪುರಹಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಇನ್-ಚಾಜ್ರ್ ತ್ರಿದಿಬ್ ಪ್ರಮಾಣಿಕ್ ಅವರನ್ನು ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ