ಮುಂಬೈ: ಮಹಾರಾಷ್ಟದಲ್ಲಿ ರಸ್ತೆಯೊಂದನ್ನು ಚಾಪೆಯಂತೆ ಮಡಚಲಾಗುತ್ತದೆ. ಹಾಗಂತ ಇದೇನು ಹೊಸ ತಂತ್ರಜ್ಞಾನವೇ ಎಂದು ನಾವು ನೀವು ಭಾವಿಸಿದರೆ ನಮ್ಮಂತಹ ಮೂರ್ಖರೂ ಮತ್ತೊಬ್ಬರಿಲ್ಲ. ಇಲ್ಲಿ ಬಳಕೆಯಾಗಿರುವುದು ತಂತ್ರಜ್ಞಾನವಲ್ಲ, ಬ್ರಹ್ಮಾಂಡ ಭ್ರಷ್ಟಾಚಾರ. ಹೌದು ರಸ್ತೆ ಯೋಜನೆಯೊಂದರ ಕಳಪೆ ಕಾಮಗಾರಿಯಿಂದಾಗಿ ಈ ರಸ್ತೆ ಕೈ ಹಾಕಿದರೆ ದೋಸೆಯಂತೆ ಎದ್ದು ಬರುತ್ತಿದೆ. ಕೇಂದ್ರ ಸಾರಿಗೆ ಸಚಿವರ ರಾಜ್ಯದಲ್ಲಿಯೇ ಈ ಅವಾಂತರ ನಡೆದಿದೆ.
ಸರ್ಕಾರದ ಅದರಲ್ಲೂ ಲೋಕೋಪಯೋಗಿ ಇಲಾಖೆಯ ಯಾವುದೇ ಯೋಜನೆಗಳಿರಲಿ ಅದರಲ್ಲಿ ಸಂಪೂರ್ಣವಾಗಿ ನಿಯೋಜಿಸಿದ ಹಣ ಯೋಜನೆಗೆ ಬಳಕೆಯಾಗುವುದು ತೀರಾ ವಿರಳ, ಮೇಲಿನಿಂದ ಕೆಳಗಿನವರೆಗೆ ಎಲ್ಲರೂ ತಿಂದು ಉಳಿದ ಹಣ ರಸ್ತೆಗೆ ಬೀಳುತ್ತದೆ. ಪರಿಣಾಮ ರಸ್ತೆಗಳು ನಿರ್ಮಿಸಿದ ಮಾರನೇ ದಿನವೂ ಅದಾದ ನಂತರ ಸುರಿದ ಮೊದಲ ಮಳೆಗೂ ತೋಪೆದ್ದು ಹೋಗುತ್ತವೆ. ಇಂತಹ ಘಟನೆಗೆ ಮತ್ತೊಂದು ಉದಾಹರಣೆ ಮಹಾರಾಷ್ಟ್ರದ ಈ ರಸ್ತೆ.
ಬಿಬಿಎಂಪಿ ನಿರ್ಲಕ್ಷ್ಯಕ್ಕೆ ವ್ಯಕ್ತಿಯ ಕಾಲು ಮುರಿತ, ತಲೆಗೆ ಗಂಭೀರ ಗಾಯ, ನೆರವಿಗೆ ಕುಟುಂಬಸ್ಥರ ಮನವಿ!
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾಡ್ ತಾಲೂಕಿನ (Ambad Taluka) ಕರ್ಜತ್-ಹಸ್ತ್ ಪೋಖಾರಿ ಗ್ರಾಮದಲ್ಲಿ (Karjat-Hast Pokhari village) ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PM Rural Road Scheme) ಅಡಿಯಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ರಸ್ತೆ ನಿರ್ಮಾಣಕ್ಕೆ ಜರ್ಮನ್ ತಂತ್ರಜ್ಞಾನ ಬಳಸಲಾಗಿದೆ ಎಂದು ಗುತ್ತಿಗೆದಾರ ರಾಣಾ ಠಾಕೂರ್ ಸ್ಥಳೀಯರಿಗೆ ತಿಳಿಸಿದರು. ಹೀಗಾಗಿ ರಸ್ತೆ ಧೀರ್ಘ ಬಾಳಿಕೆ ಬರಲಿದೆ. ಸದೃಢವಾಗಲಿದೆ ಎಂದು ಗ್ರಾಮಸ್ಥರು ಸಂಭ್ರಮಿಸಿದರು. ಆದರೆ ಇತ್ತೀಚೆಗೆ ಈ ರಸ್ತೆಯನ್ನು ಪರಿಶೀಲಿಸಿದ ಗ್ರಾಮಸ್ಥರು ದಂಗಾಗಿದ್ದರು. ಏಕೆಂದರೆ ರಸ್ತೆಯ ಗುಣಮಟ್ಟ ತೀರಾ ಕಳಪೆಯಾಗಿತ್ತು. ಮುಟ್ಟಿದರೆ ರಸ್ತೆ ಎದ್ದು ಬರುತ್ತಿತ್ತು. ಇದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಥಿನ್ (polythene) ಹಾಗೂ ಡಾಂಬರ್ (asphalt)ಬಳಸಿ ಅಧಿಕಾರಿಗಳು ಗುತ್ತಿಗೆದಾರರು ತರಾತುರಿಯಲ್ಲಿ ಈ ರಸ್ತೆಯನ್ನು ನಿರ್ಮಿಸಿದ್ದರಿಂದ ರಸ್ತೆಯ ಸ್ಥಿತಿ ಇಷ್ಟೊಂದು ಕಳಪೆಯಾಗಿದೆ ಎಂದು ಗ್ರಾಮದ ಜನ ಆರೋಪಿಸಿದ್ದಾರೆ.
ಮಧ್ಯರೈಲ್ವೆಯ ಕಳಪೆ ಕಾಮಗಾರಿ: ಜೀವ ಬಲಿಗಾಗಿ ಕಾದಂತಿವೆ ಕಬ್ಬಿಣದ ತಂತಿಗಳು!
ಅಲ್ಲದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ, ಕಳಪೆ ಗುಣಮಟ್ಟದ ರಸ್ತೆ ನಿರ್ಮಿಸಿದ ಎಂಜಿನಿಯರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಜನ ರಸ್ತೆಯನ್ನು ಚಾಪೆಯಂತೆ ಎಳಿಸಿ ಮಡಚುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಪ್ಪು ನೆಲಹಾಸಿನಂತೆ ಕಾಣುವ ರಸ್ತೆಯನ್ನು ಜನ ಒಂದು ಬದಿಯಿಂದ ದೋಸೆಯಂತೆ ಏಳಿಸುತ್ತಿದ್ದಾರೆ. ಇಂತಹ ರಸ್ತೆ ಎಷ್ಟು ದಿನ ಬಾಳಿಕೆ ಬರುತ್ತೆ ಎಂದು ಜನ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಸ್ಥಳೀಯ ಗುತ್ತಿಗೆದಾರ ರಾಣಾ ಠಾಕೂರ್ ಈ ಬೋಗಸ್ ಕೆಲಸ ಮಾಡಿದ್ದಾನೆ ಎಂದು ಜನ ಕಿಡಿಕಾರಿದ್ದಾರೆ.
ವೀಡಿಯೋ ನೋಡಿದ ನೆಟ್ಟಿಗರು ಕೂಡ ಈ ಕಳಪೆ ಕಾಮಗಾರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನೇಕರು ಇದು ರಸ್ತೆಯ ಅಥವಾ ನೆಲಹಾಸ ಎಂದು ಪ್ರಶ್ನಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ