ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಸಚಿನ್ ಪೈಲಟ್ ಅವರ ಬಹಿರಂಗ ಕಿತ್ತಾಟದಿಂದ ಒಡೆದ ಮನೆಯಂತಾಗಿರುವ ರಾಜಸ್ಥಾನ ರಾಜ್ಯ ಕಾಂಗ್ರೆಸ್ನಲ್ಲಿ ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪಕ್ಷದ ಹೈಕಮಾಂಡ್ ‘ಸಂಧಾನ ಸೂತ್ರವೊಂದನ್ನು’ ಕಂಡುಕೊಂಡಿದೆ.
ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಸಚಿನ್ ಪೈಲಟ್ ಅವರ ಬಹಿರಂಗ ಕಿತ್ತಾಟದಿಂದ ಒಡೆದ ಮನೆಯಂತಾಗಿರುವ ರಾಜ್ಯ ಕಾಂಗ್ರೆಸ್ನಲ್ಲಿ ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪಕ್ಷದ ಹೈಕಮಾಂಡ್ ‘ಸಂಧಾನ ಸೂತ್ರವೊಂದನ್ನು’ ಕಂಡುಕೊಂಡಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಪಕ್ಷ ಪ್ರಕಟಿಸಿದೆ.
ರಾಜಸ್ಥಾನದ ಚುನಾವಣೆಗೆ ತಂತ್ರಗಾರಿಕೆ ರೂಪಿಸಲು ಗುರುವಾರ ಎಐಸಿಸಿ ನಾಯಕರ ಸಭೆ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಮುಂತಾದವರು ಪಾಲ್ಗೊಂಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ರಾಜಸ್ಥಾನದಲ್ಲಿ ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಯಾವತ್ತೂ ನಮ್ಮ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸುವುದಿಲ್ಲ. ಒಗ್ಗಟ್ಟಾಗಿ ಚುನಾವಣೆಗೆ ಹೋದರೆ ನಾವು ಗೆಲ್ಲಬಹುದು ಎಂದು ಎಲ್ಲಾ ನಾಯಕರೂ ಹೇಳಿದ್ದಾರೆ’ ಎಂದು ತಿಳಿಸಿದರು. ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ರಾಜಸ್ಥಾನದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು. ಗೆಲ್ಲುವ ಸಾಧ್ಯತೆಯೊಂದೇ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡವಾಗಲಿದೆ ಎಂದೂ ಹೇಳಿದರು.
ತನ್ನದೇ ಸರ್ಕಾರದ ವಿರುದ್ಧ ಸಚಿನ್ ಪೈಲಟ್ 5 ದಿನಗಳ ಜನ ಸಂಘರ್ಷ ಯಾತ್ರೆ
ಪೈಲಟ್ ಬೇಡಿಕೆಗೆ ಅಸ್ತು:
ಇದೇ ವೇಳೆ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂಬ ಸಚಿನ್ ಪೈಲಟ್ ಅವರ ಬೇಡಿಕೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಗೆಹ್ಲೋಟ್ ಸರ್ಕಾರ ತನಿಖೆ ಆರಂಭಿಸಲಿದೆ ಎಂದು ಮೂಲಗಳು ಹೇಳಿವೆ. ಮುಖ್ಯಮಂತ್ರಿ ಗೆಹ್ಲೋಟ್ ಅವರು ವಸುಂಧರಾ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಪೈಲಟ್ ಆರೋಪಿಸುತ್ತಿದ್ದರು.
Rajasthan Political Crisis: ಪೈಲಟ್ ವಿಮಾನ ಮತ್ತೆ ಕ್ರ್ಯಾಶ್, ಅಶಕ್ತ ಹೈಕಮಾಂಡ್ ವಿರುದ್ಧ ಗೆಹ್ಲೋಟ್ ಗೇಮ್