Assembly Elections: ಪಂಜಾಬ್ ಚುನಾವಣಾ ದಿನಾಂಕ ಬದಲು, ಫೆ. 20ಕ್ಕೆ ಮತದಾನ!

By Suvarna NewsFirst Published Jan 17, 2022, 2:45 PM IST
Highlights

* ವಾರದ ಹಿಂದೆ ಪಂಚರಾಜ್ಯ ಚುನಾವಣೆಗೆ ದಿನಾಂಕ ಘೋಷಿಸಿದ್ದ ಚುನಾವಣಾ ಆಯೋಗ

* ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿದ ಆಯೋಗ

* ಫೆ. 20ಕ್ಕೆ ನಡೆಯಲಿದೆ ಪಂಜಾಬ್ ಮತದಾನ

ಚಂಡೀಗಢ(ಜ.17): ಉತ್ತರ ಪ್ರದೇಶ, ಗೋವಾ, ಪಂಜಾಬ್ ಸೇರಿದ<ತೆ ಒಟ್ಟು ಐದು ರಾಜ್ಯಗಳ ಚುನಾವಣೆ (Five States Elections)ನಡೆಯಲಿದ್ದು, ಕೆಲ ದಿನಗಳ ಹಿಂದಷ್ಟೇ ಚುನಾವಣಾ ಆಯೋಗವು ಮತದಾನದ ದಿನಾಂಕ ಘೋಷಿಸಿತ್ತು. ಇದರ ಅನ್ವಯ ಫೆ. 14ಕ್ಕೆ ಪಂಜಾಬ್ ಚುನಾವಣೆ (Punjab Elections) ನಡೆಯುವುದಿತ್ತು. ಆದರೀಗ ಚುನಾವಣಾ ಆಯೋಗ (Election Commission Of India) ಕೊಂಚ ಬದಲಾವಣೆ ಮಾಡಿದ್ದು, ಚುನಾವಣಾ ದಿನಾಂಕವನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. 

ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣಾ ದಿನಾಂಕ ಮರುಪರಿಶೀಲಿಸುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Punjab Chief Minister Charanjit Singh Channi) ಕೂಡಾ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಫೆಬ್ರವರಿ 16 ರಂದು ರವಿದಾಸ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕನಿಷ್ಠ ಆರು ದಿನಗಳ ಕಾಲ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದರು. 

Punjab Election 2022 : ಚುನಾವಣೆ ಮುಂದೂಡಿ, ಪಂಜಾಬ್ ಮುಖ್ಯಮಂತ್ರಿಯಿಂದ ಚುನಾವಣಾ ಆಯೋಗಕ್ಕೆ ಪತ್ರ!

ಗುರು ರವಿದಾಸ್ ಅವರ ಜನ್ಮದಿನ (Birth Anniversary of Shri Guru Ravidas) ಫೆಬ್ರವರಿ 16 ರಂದು.ಆಚರಿಸಲಾಗುತ್ತಿದ್ದು, ಪಂಜಾಬ್‌ನ ಜನಸಂಖ್ಯೆಯ ಶೇಕಡಾ 32 ರಷ್ಟಿರುವ ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಗಳು, ಸಮುದಾಯದ ಹೆಚ್ಚಿನ ಸಂಖ್ಯೆಯ ಜನರು "ಫೆಬ್ರವರಿ 10 ರಿಂದ 16 ರವರೆಗೆ ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡಲಿದ್ದಾರೆ" ಎಂದು ಪತ್ರದಲ್ಲಿ ಚನ್ನಿ ಹೇಳಿದ್ದರು. ಈ ನಿಟ್ಟಿನಲ್ಲಿ ಮತದಾನ ಮಾಡಲು ಸಾಧ್ಯವಾಗದೇ ಇರಬಹುದು ಎಂದು ತಿಳಿಸಿದ್ದರು.

ಜನವರಿ 13 ರಂದು ಕಾಂಗ್ರೆಸ್ ಪಕ್ಷವು ಲಿಖಿತ ಮನವಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಮತದಾರರು ಸಂತ ರವಿದಾಸ್ ಜಿ ಅವರಿಗೆ ಸಂಬಂಧಿಸಿದ ಸ್ಥಳಗಳಿಗೆ ಧಾರ್ಮಿಕ ಭೇಟಿಗೆ ಹೋಗುತ್ತಾರೆ ಎಂದು ತಿಳಿಸಿತ್ತು. ಪ್ರತಿ ವರ್ಷ ಫೆಬ್ರವರಿ 10 ರಿಂದ 16 ರವರೆಗೆ ಸಾಕಷ್ಟು ಸಂಖ್ಯೆಯ ಎಸ್‌ಸಿ ಮತದಾರರು ವಾರಣಾಸಿಗೆ ಭೇಟಿ ನೀಡುತ್ತಾರೆ, ಆದ್ದರಿಂದ ಪಂಜಾಬ್‌ನಲ್ಲಿ ಮತದಾನಕ್ಕೆ ನಿಗದಿತ ದಿನಾಂಕವನ್ನು ರವಿದಾಸ್ ಜಯಂತಿಯವರೆಗೆ ಮುಂದೂಡಬೇಕು ಎಂದು ಪಕ್ಷವು ತಿಳಿಸಿತ್ತು.

Punjab Elections: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಚನ್ನಿ, ಸಿದ್ದುಗೆ ಟಿಕೆಟ್ ಸಿಕ್ಕಿದೆ ನೋಡಿ

ನಂತರ ಬಿಜೆಪಿ ಕೂಡ ಚುನಾವಣಾ ಆಯೋಗಕ್ಕೆ ಇದೇ ರೀತಿಯ ವಿನಂತಿಯನ್ನು ಮಾಡಿ, ಅದೇ ಕಾರಣವನ್ನು ಪುನರುಚ್ಚರಿಸಿತ್ತು. ಮತದಾನದಿಂದ ಅನೇಕ ಮತದಾರರು ತಮ್ಮ ಧಾರ್ಮಿಕ ಪ್ರವಾಸವನ್ನು ಕಳೆದುಕೊಳ್ಳುತ್ತಾರೆ ಅಥವಾ ಫೆಬ್ರವರಿ 14 ರಂದು ಮತದಾನಕ್ಕೆ ಗೈರಾಗುತ್ತಾರೆ ಎಂದು ಹೇಳಿತ್ತು. ರವಿದಾಸ್ ಜಯಂತಿಯನ್ನು ಉಲ್ಲೇಖಿಸಿ ಆಮ್ ಆದ್ಮಿ ಪಕ್ಷ ಸೋಮವಾರವೂ ಆಯೋಗಕ್ಕೆ ಅದೇ ಮನವಿ ಮಾಡಿತ್ತು. 

ಇವೆಲ್ಲವನ್ನು ಪರಿಗಣಿಸಿದ ಚುನಾವಣಾ ಆಯೋಗ ಈಗ ಚುನಾವಣಾ ದಿನಾಂಕವನ್ನು ಬದಲಾಯಿಸಿದೆ. 

click me!