Odisha Train Tragedy: 1,000 ಕ್ಕೂ ಹೆಚ್ಚು ಕಾರ್ಮಿಕರಿಂದ ರಾತ್ರಿ ಹಗಲೆನ್ನದೆ ರೈಲು ಹಳಿ ಜೋಡಣೆ ಕಾರ್ಯ

By Gowthami KFirst Published Jun 4, 2023, 4:07 PM IST
Highlights

ಒಡಿಶಾ ರೈಲು ದುರಂತದ ಬಳಿಕ ಹದಗೆಟ್ಟಿದ್ದ  ಹಳಿಗಳನ್ನು ಸರಿಪಡಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು, ಡೌನ್ ಪ್ರಮುಖ ಹಳಿಗಳ ಜೋಡಣೆ ಮುಕ್ತಾಯಗೊಂಡಿದೆ. ಮಿಕ್ಕ ಹಳಿಗಳ ಜೋಡಣೆ ಕಾರ್ಯ ಭರದಿಂದ ಸಾಗಿದೆ.

ಬೆಂಗಳೂರು (ಜೂ.4): ಶುಕ್ರವಾರ  ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ದುರಂತದ ನಂತರ ರೈಲು ಹಳಿಗಳು ತೀವ್ರವಾಗಿ ಹದಗೆಟ್ಟಿತ್ತು. ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಹಳಿಗಳನ್ನು ಸರಿಪಡಿಸುವ ಕಾರ್ಯ ಭರದಿಂದ ರಾತ್ರಿ ಹಗಲೆನ್ನದೆ ನಡೆಯುತ್ತಿದೆ. ಶನಿವಾರ ಸಂಜೆಯಿಂದ ಬಾಲಸೋರ್‌ನ ಬಹನಾಗಾ ಬಜಾರ್ ನಿಲ್ದಾಣದಲ್ಲಿ (Bahanaga Bazar railway station)   1,000 ಕ್ಕೂ ಹೆಚ್ಚು ಕಾರ್ಮಿಕರು, ರೈಲ್ವೆ ಅಧಿಕಾರಿಗಳು  ಮತ್ತು 7 ಪಾಕೆಟಿಂಗ್ ಯಂತ್ರಗಳು, 140 ಟನ್ ಭಾರ ಎತ್ತುವ ರೈಲ್ವೆ ಕ್ರೇನ್ ಮತ್ತು ನಾಲ್ಕು ರಸ್ತೆ ಕ್ರೇನ್‌ಗಳು ಸೇರಿದಂತೆ ಭಾರೀ ಯಂತ್ರೋಪಕರಣಗಳನ್ನು ರೈಲು ಹಳಿ ಮರುಜೋಡಣೆಗೆ  ಮತ್ತು ಸ್ಥಳ ಸ್ವಚ್ಚಗೊಳಿಸಲು ಬಳಸಲಾಗಿದೆ.

ಈಗಾಗಲೇ ಕೇಂದ್ರ ರೈಲ್ವೆ ಸಚಿವ ಟ್ವೀಟ್ ಮಾಡಿ ಡೌನ್ ಮುಖ್ಯ ಮಾರ್ಗವನ್ನು ಮಧ್ಯಾಹ್ನ 12.05 ಗಂಟೆಗೆ ಸರಿಪಡಿಸಿಲಾಗಿದೆ. ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಗಳು ಭರದಿಂದ ಸಾಗಿವೆ ಎಂದು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಪ್ರಮುಖ ಹಳಿಯನ್ನು ಸರಿಪಡಿಸಿದ ಬಳಿಕ ಲೂಪ್ ಲೈನ್ ಸರಿಪಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಹಳಿಗಳ ಮರುಸ್ಥಾಪನೆ ಕಾರ್ಯವನ್ನು ಪರಿಶೀಲಿಸಿದ್ದಾರೆ. ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ. ಮರುಸ್ಥಾಪನೆ ಕಾರ್ಯವು ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ವೈಷ್ಣವ್ ಹೇಳಿದರು.

Odisha Train Accident Reason: ಒಡಿಶಾ ರೈಲು ಅಪಘಾತಕ್ಕೆ ಕಾರಣ ಪತ್ತೆ!

ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)  ಹೂಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರೈಲ್ವೆಯಲ್ಲಿ ಕವಾಚ್ ಪ್ರೊಟೆಕ್ಷನ್ ಸಿಸ್ಟಮ್ ಎಂಬ ಸ್ವಯಂಚಾಲಿತ ರೈಲು ಸಂರಕ್ಷಣಾ (ATP) ವ್ಯವಸ್ಥೆಯ ಅನುಷ್ಠಾನಕ್ಕೆ PIL ಮಾರ್ಗಸೂಚಿಗಳು/ನಿರ್ದೇಶನಗಳನ್ನು ನೀಡಬೇಕೆಂದು ಪಿಐಎಲ್ ನಲ್ಲಿ ಒತ್ತಾಯಿಸಲಾಗಿದೆ. 

ರೈಲುಗಳು ಡಿಕ್ಕಿ ಹೊಡೆದ ನಂತರ ಹಳಿತಪ್ಪಿದ ಎಲ್ಲಾ 21 ಬೋಗಿಗಳನ್ನು ತೆರವುಗೊಳಿಸಲಾಯಿತು ಮತ್ತು ತಾಜಾ ಹಳಿಗಳನ್ನು 
ಜೋಡಣೆ ಮಾಡಲಾಯಿತು. ಪುರುಷರು ಟ್ರ್ಯಾಕ್‌ಗಳನ್ನು ಹಾಕುವುದು ಮತ್ತು ಲಿಂಕ್ ಮಾಡುವುದು ಕಂಡುಬಂದಿತು ಮತ್ತು ಮಹಿಳೆಯರು ಸೇರಿದಂತೆ ಕೆಲವರು ಜಲ್ಲಿಗಳನ್ನು ಹಾಕುತ್ತಿದ್ದರು. ಹಾನಿಗೊಳಗಾದ ಬೋಗಿಗಳನ್ನು ಹಳಿಗಳಿಂದ ಕೆಳಗೆ ದೂರದಲ್ಲಿರಿಸಲಾಗಿದೆ.

Odisha Train Accident: ಬೆಂಗಳೂರಿನಿಂದ ಹೌರಗೆ ಮತ್ತೆ ರೈಲು ಸಂಚಾರ ಆರಂಭ,

ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಬದುಕುಳಿದ ಸುಮಾರು 137 ಮಂದಿ ಭಾನುವಾರ ಬೆಳಗ್ಗೆ ಭದ್ರಕ್‌ನಿಂದ ವಿಶೇಷ ರೈಲಿನ ಮೂಲಕ ಚೆನ್ನೈಗೆ ಆಗಮಿಸಿದ್ದಾರೆ. 36 ಪ್ರಯಾಣಿಕರಿಗೆ ಸ್ಕ್ರೀನಿಂಗ್ ವಿಧಾನ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು ಮತ್ತು ಅವರಲ್ಲಿ ಮೂವರನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

ಅಪಘಾತದಲ್ಲಿ ಇಷ್ಟೊಂದು ಸಾವಾಗಲು ಕಾರಣ ಏನು?: ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ಸಾವಿನ ಪ್ರಮಾಣ ಭಾರೀ ಪ್ರಮಾಣಕ್ಕೆ ಏರಲು, ರೈಲಿನ ಮುಂಭಾಗದಲ್ಲಿ ಜನರಲ್‌ ಬೋಗಿ, ಸ್ಲೀಪರ್‌ ಬೋಗಿಗಳೇ ಕಾರಣ ಎಂಬುದು ಕಂಡುಬಂದಿದೆ. ಅತಿ ಹೆಚ್ಚು ಹಾನಿಗೊಳಗಾದ ಕೋರಮಂಡಲ್‌ ಎಕ್ಸ್‌ಪ್ರೆಸ್‌ (Coromandel Express) ರೈಲಿನ ಮೊದಲ ಬೋಗಿ ಲಗೇಜ್‌ನದ್ದಾಗಿತ್ತು. ನಂತರದ ಎರಡು ಬೋಗಿ ಜನರಲ್‌ ಬೋಗಿಗಳಾಗಿದ್ದು, ಅದರಲ್ಲಿ ನಿಲ್ಲಲೂ ಜಾಗವಿಲ್ಲದಷ್ಟು ಜನಸಂದಣಿ ಇತ್ತು. ಇನ್ನು ಅದರ ಹಿಂದೆ 5 ಸ್ಲೀಪರ್‌ ಬೋಗಿಗಳಿದ್ದು ಅಲ್ಲಿಯೂ ಜನರು ಕಿಕ್ಕಿರಿದು ತುಂಬಿದ್ದರು. ಅತಿ ಹೆಚ್ಚು ಜನರಿದ್ದ ಜನರಲ್‌ ಬೋಗಿಗಳು ಹಾಗೂ ಸ್ಲೀಪರ್‌ ಬೋಗಿಗಳು ತೀವ್ರತರವಾಗಿ ಹಾನಿಯಾದ ಕಾರಣ ಸಾವಿನ ಪ್ರಮಾಣ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ.

ಒಡಿಶಾದ ಬಾಲಸೋರ್ ಬಳಿ ಭೀಕರ ರೈಲು ಅಪಘಾತ ಈವರೆಗೆ 288 ಮಂದಿ ಸಾವನ್ನಪ್ಪಿದ್ದು, 1000 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. 2000 ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಂಐ-17 ( 2 ಹೆಲಿಕಾಫ್ಟರ್) , 100 ವೈದ್ಯಕೀಯ ತಂಡ, 200 ಆಂಬುಲೆನ್ಸ್, 38 ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿತ್ತು. ರೈಲು ಅಪಘಾತದ ಬಳಿಕ 46 ರೈಲುಗಳನ್ನು ಮಾರ್ಗ ಬದಲಾಯಿಸಲಾಯಿತು. 11 ರೈಲುಗಳ ಪ್ರಯಾಣನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಒಟ್ಟು 90 ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು.
 

click me!