ಒಡಿಶಾ ರೈಲು ದುರಂತ : ಬಿಜೆಪಿ ಸರ್ಕಾರದ 9ನೇ ವರ್ಷಾಚರಣೆ ರದ್ದು

By Kannadaprabha NewsFirst Published Jun 4, 2023, 9:41 AM IST
Highlights

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಹಿನ್ನೆಲೆ ಬಿಜೆಪಿ ಶುಕ್ರವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9ನೇ ವರ್ಷಾಚರಣೆಯನ್ನು ರದ್ದುಪಡಿಸಿದೆ

ನವದೆಹಲಿ: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಹಿನ್ನೆಲೆ ಬಿಜೆಪಿ ಶುಕ್ರವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9ನೇ ವರ್ಷಾಚರಣೆಯನ್ನು ರದ್ದುಪಡಿಸಿದೆ. ಈ ಕುರಿತು ಟ್ವೀಟ್‌ ಮಾಡಿದ ಬಿಜೆಪಿ ರಾಜ್ಯಧ್ಯಕ್ಷ ಜೆ.ಪಿ.ನಡ್ಡಾ,ಭೀಕರ ರೈಲು ದುರಂತ ಅತೀವ ನೋವುಂಟು ಮಾಡಿದೆ. ಇದರಲ್ಲಿ ಮೃತಪಟ್ಟಎಲ್ಲರಿಗೂ ನಾವು ಸಂತಾಪ ಸೂಚಿಸುತ್ತೇವೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ಶನಿವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 9ನೇ ವರ್ಷಾಚರಣೆಯನ್ನು ಮುಂದೂಡಿದೆ ಎಂದು ತಿಳಿಸಿದರು.

ರೈಲು ದುರಂತಕ್ಕೆ ವಿಪಕ್ಷಗಳ ಕಂಬನಿ: ಸಚಿವ ಅಶ್ವಿನ್‌ ವೈಷ್ಣವ್‌ ರಾಜೀನಾಮೆಗೆ ಒತ್ತಾಯ

ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತದ ಬಳಿಕ ಪ್ರತಿಕ್ರಿಯಿಸಿರುವ ವಿಪಕ್ಷಗಳು ಈ ಘಟನೆಯ ಕುರಿತಾಗಿ ದುಃಖ ವ್ಯಕ್ತಪಡಿಸಿವೆ. ಅಲ್ಲದೇ ರೈಲು ಪ್ರಯಾಣದ ವೇಳೆ ಪ್ರಯಾಣಿಕರ ಭದ್ರತೆ ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. ಕೆಲವು ವಿಪಕ್ಷಗಳು ಈ ದುರ್ಘಟನೆಯ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ.

ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತ: ಸ್ಟೇಶನ್‌ ಮ್ಯಾನೇಜರ್‌ ಎಡವಟ್ಟೇ ದುರಂತಕ್ಕೆ ಕಾರಣ?

ಒಡಿಶಾದಲ್ಲಿ ನಡೆದಿರುವ ರೈಲು ದುರಂತವು ರೈಲು ಜಾಲದ ಕಾರ್ಯಚಟುವಟಿಕೆಯಲ್ಲಿ ಸುರಕ್ಷತೆಗೆ ಏಕೆ ಹೆಚ್ಚಿನ ಪ್ರಾಧನ್ಯತೆ ನೀಡಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಕೇಳಲು ಸಾಕಷ್ಟುಪ್ರಶ್ನೆಗಳಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಸಧ್ಯದ ತುರ್ತು ಆಗಿರುವುದರಿಂದ ಅವರು ಕಾಯಬೇಕು ಎಂದು ಕಾಂಗ್ರೆಸ್‌ ಹೇಳಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಒಡಿಶಾದಲ್ಲಿ ಸಂಭವಿಸಿರುವ ರಾಷ್ಟ್ರೀಯ ದುರಂತದ ಈ ಕ್ಷಣದಲ್ಲಿ ಎಲ್ಲಾ ರೀತಿಯ ಸಹಾಯವನ್ನು ನೀಡುವಂತೆ ನಾನು ಕಾಂಗ್ರೆಸ್‌ ಪಕ್ಷಕ್ಕೆ ಸೂಚನೆ ನೀಡಿದ್ದೇನೆ. ವಿವಿಧ ರಾಜ್ಯಗಳಿಂದ ಹಲವು ಕಾಂಗ್ರೆಸ್‌ ನಾಯಕರು ಶೀಘ್ರದಲ್ಲೇ ಬಾಲಸೋರ್‌ (Balasore) ತಲುಪಲಿದ್ದಾರೆ. ದುಃಖಿತ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ ಎಂದು ಹೇಳಿದರು.

ಪ್ರಯಾಣಿಕರಿಗೆ ಊಟದ ವ್ಯವಸ್ಥೆ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದ ಕಾರಣದಿಂದ ಬೈಯಪ್ಪನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಹಾಗೂ ಯಶವಂತಪುರ ನಿಲ್ದಾಣದಲ್ಲಿ ಉಳಿದಿದ್ದ ಮೂರು ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಬಿಬಿಎಂಪಿಯಿಂದ ಶನಿವಾರ ರಾತ್ರಿ ಊಟೋಪಹಾರದ ವ್ಯವಸ್ಥೆ ಮಾಡಲಾಯಿತು.

ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ತಮ್ಮವರ ಪತ್ತೆಗೆ ಬಂಧುಗಳ ಪರದಾಟ

ಅಪಘಾತದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಎಸ್‌ಎಂವಿಟಿ-ಗುವಾಹಟಿ ರೈಲು ರದ್ದಾಗಿತ್ತು. ಶನಿವಾರ ಬೆಳಗ್ಗೆ ತೆರಳಬೇಕಿದ್ದ ಎಸ್‌ಎಂವಿಟಿ-ಕಾಮಾಕ್ಯ, ಎಸ್‌ಎಂವಿಟಿ-ಹೌರಾ, ಎಸ್‌ಎಂವಿಟಿ-ಬಾಗಲ್‌ಪುರ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ ತೆರಳಬೇಕಿದ್ದ ಸಾವಿರಕ್ಕೂ ಹೆಚ್ಚು ಜನ ನಿಲ್ದಾಣದಲ್ಲೇ ಉಳಿಯಬೇಕಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಪ್ರಯಾಣಿಕರಿಗೆ ಬಿಬಿಎಂಪಿಯಿಂದ ಊಟ, ಮಕ್ಕಳಿಗೆ ಹಾಲನ್ನು ನೀಡಲಾಯಿತು. ಕೆಲವು ಎನ್‌ಜಿಒಗಳು ಬಿಸ್ಕತ್ತು ಸೇರಿ ತಿಂಡಿಯನ್ನು ಪೂರೈಸಿವೆ. ನಿಲ್ದಾಣಗಳಿಗೆ ಬಿಡಬ್ಲೂಎಸ್‌ಎಸ್‌ಬಿ ಮೂಲಕ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಯಿತು. ಜೊತೆಗೆ 50ಕ್ಕೂ ಹೆಚ್ಚು ಮೊಬೈಲ್‌ ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗಿತ್ತು.

click me!