ಬಾಲಸೋರ್: ಒಡಿಶಾದ ಬಾಲಸೋರ್ ಬಳಿ ಭೀಕರ ರೈಲು ದುರಂತ ಸಂಭವಿಸಿದ ತಕ್ಷಣ ಸ್ಥಳೀಯರು ಬಹುಬೇಗ ದೌಡಾಯಿಸಿ ನೂರಾರು ಜನರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತ ಸಂಭವಿಸಿದ ಮಾಹಿತಿ ಲಭಿಸುತ್ತಿದ್ದಂತೆಯೇ ರಕ್ತದಾನಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ದೌಡಾಯಿಸಿ ರಕ್ತದಾನ ಮಾಡಿದ್ದಾರೆ. ಈ ಮೂಲಕ ಸಾವಿನ ಅಂಚಿನಲ್ಲಿದ್ದ ನೂರಾರು ಗಾಯಾಳುಗಳು ಹಾಗೂ ಪ್ರಯಾಣಿಕರಿಗೆ ರಕ್ತ ನೀಡಿ ಅವರ ಜೀವ ಉಳಿಸಿದ್ದಾರೆ.
ರಂಜಿತ್ ಗಿರಿ, ಬಿಪ್ರದ ಬಾಗ್, ಆಶಾ ಬೆಹೆರಾ, ಅಶೋಕ್ ಬೇರಾ ಎಂಬುವವರು ದುರಂತ ಸಂಭವಿಸಿದ ಬಹಾನಗಾ ಬಜಾರ್ ರೈಲು ನಿಲ್ದಾಣದ ಸನಿಹವೇ ಸಂಜೆ 7 ಗಂಟೆಗೆ ಇದ್ದರು. ಚಹಾ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದರು. ಆಗ ಈ ಅವಘಡ ಸಂಭವಿಸಿದೆ. ಈ ಬಗ್ಗೆ ಮಾತನಾಡಿದ ಬಾಗ್, 'ನಾವು ಚಹಾ ಸೇವಿಸುತ್ತಿದ್ದೆವು. ಆಗ ಭಾರಿ ಶಬ್ದ ಹಾಗೂ ಚೀರಾಟ ಕೇಳಿಸಿತು. ತಕ್ಷಣವೇ ನಾವು ಸ್ಥಳಕ್ಕೆ ದೌಡಾಯಿಸಿದೆವು. ಆಗ ದೃಶ್ಯ ಭೀಕರವಾಗಿತ್ತು. ಕೂಡಲೇ ರೈಲಿನಲ್ಲಿ ಸಿಲುಕಿದ್ದ ಹಾಗೂ ಹೊರಗೆ ಬಿದ್ದಿದ್ದ ಜನರ ರಕ್ಷಣೆಗೆ ಧಾವಿಸಿದೆವು. ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳಿಗೆ ಫೋನ್ ಮಾಡಿದೆವು ನಾವು ಸುಮಾರು 50 ಗಾಯಾಳುಗಳನ್ನು ರಕ್ಷಿಸಿದೆವು. ನಮ್ಮದೇ ಬೈಕು (bike) ಹಾಗೂ ಇತರ ವಾಹನದಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದೆವು. ಆದರೆ ಬಳಿಕ ಕತ್ತಲಾದ ಕಾರಣ ಸಹಾಯ ಮುಂದುವರಿಸಲು ಕಷ್ಟವಾಯಿತು' ಎಂದರು.
ಅನೇಕ ಗಾಯಾಳುಗಳು ಮೊಬೈಲ್ (Mobile Phone) ಕಳೆದುಕೊಂಡಿದ್ದರು. ಹೀಗಾಗಿ ಸ್ಥಳೀಯರು ತಮ್ಮ ಫೋನುಗಳನ್ನು ಬಳಸಿ ಗಾಯಾಳುಗಳಿಗೆ ಅವರ ಬಂಧುಗಳೊಂದಿಗೆ ಮಾತನಾಡಲು ಸಹಾಯ ಕೂಡ ಮಾಡಿದರು. ಇದೇ ವೇಳೆ ಬೇರಾ ಅವರು, ಅಪಘಾತದ ಕಾರಣ ಪೋಷಕರಿಂದ ದೂರವಾದ ಇಬ್ಬರು ಮಕ್ಕಳನ್ನು ನೋಡಿಕೊಂಡರು.
ಜೀವ ಉಳಿಸಿದ ಸಹಸ್ರಾರು ರಕ್ತದಾನಿಗಳು: ಒಂದೇ ರಾತ್ರಿ ಸುಮಾರು 4000 ಯೂನಿಟ್ ರಕ್ತ ಸಂಗ್ರಹ
ಒಡಿಶಾದ (Odisha) ಬಾಲಸೋರ್ (Balasore) ಸನಿಹ ರೈಲು ದುರಂತ ಸಂಭವಿಸಿದ ಮಾಹಿತಿ ಲಭಿಸುತ್ತಿದ್ದಂತೆಯೇ ರಕ್ತದಾನಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ದೌಡಾಯಿಸಿ ರಕ್ತದಾನ ಮಾಡಿದ್ದಾರೆ. ಈ ಮೂಲಕ ಸಾವಿನ ಅಂಚಿನಲ್ಲಿದ್ದ ನೂರಾರು ಗಾಯಾಳುಗಳು ಹಾಗೂ ಪ್ರಯಾಣಿಕರಿಗೆ ರಕ್ತ ನೀಡಿ ಅವರ ಜೀವ ಉಳಿಸಿದ್ದಾರೆ. ರಕ್ತದಾನಿಗಳು ನಾಮುಂದು ತಾಮುಂದು ಎಂಬಂತೆ ಆಸ್ಪತ್ರೆಯ ರಕ್ತದಾನ ಕೊಠಡಿ ಮುಂದೆ ಸರದಿ ಸಾಲಲ್ಲಿ ನಿಂತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.
ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ತಮ್ಮವರ ಪತ್ತೆಗೆ ಬಂಧುಗಳ ಪರದಾಟ
ಕಟಕ್ ಎಸ್ಸಿಬಿ ಮೆಡಿಕಲ್ ಕಾಲೇಜು ಮುಖ್ಯಸ್ಥ ಡಾ. ಜಯಂತ ಪಾಂಡಾ (Jayanth Panda) ಮಾತನಾಡಿ, ಯುವಕರು ಭಾರಿ ಪ್ರತಿಕ್ರಿಯೆ ತೋರಿದರು. ನೂರಾರು ಯುವಕರು ನಮ್ಮಲ್ಲಿಗೆ ಬಂದು ರಕ್ತದಾನ ಮಾಡಿದರು. ಕಟಕ್, ಭದ್ರಕ್ ಹಾಗೂ ಬಾಲಸೋರ್ನಲ್ಲಿ ಶುಕ್ರವಾರ ಒಂದೇ ರಾತ್ರಿ 4000 ಯೂನಿಟ್ ರಕ್ತ ಸಂಗ್ರಹ ಆಗಿದೆ. ಅದನ್ನು ಅಗತ್ಯವಿರುವ ಗಾಯಾಳುಗಳಿಗೆ ನೀಡಿ ಪ್ರಾಣ ಕಾಪಾಡಲಾಗಿದೆ ಎಂದರು.
ಬಾಲಸೋರ್ ಜಿಲ್ಲಾಸ್ಪತ್ರೆಯ ಉಪ ಮುಖ್ಯಸ್ಥ ಡಾ ಮೃತ್ಯುಂಜಯ ಮಿಶ್ರಾ (Mritunjaya Mishra) ಮಾತನಾಡಿ, ರಕ್ತದಾನಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಯುವಕರು ಬಂದಿದ್ದು ನೋಡಿಯೇ ನಮಗೆ ಅಚ್ಚರಿ ಆಯಿತು. ನಮ್ಮ ಆಸ್ಪತ್ರೆಯೊಂದರಲ್ಲೇ ಶುಕ್ರವಾರ ರಾತ್ರಿ 500 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ರಕ್ತದಾನಿಗಳಿಗೆ ಧನ್ಯವಾದ. ಅವರ ರಕ್ತದಾನದಿಂದ ಇಂದು ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ