ಬಿಷ್ಣೋಯಿ ಗ್ಯಾಂಗ್‌ ನೆಕ್ಸ್ಟ್‌ ಟಾರ್ಗೆಟ್‌ ರಾಹುಲ್‌ ಗಾಂಧಿ ಎಂದಿದ್ದ ನಟ, ವಿರೋಧ ಬಳಿಕ ಕ್ಷಮೆಯಾಚನೆ

By Santosh NaikFirst Published Oct 22, 2024, 12:19 PM IST
Highlights

ಬಾಬಾ ಸಿದ್ದಿಕಿ ಮರ್ಡರ್‌ ಕೇಸ್‌ನಲ್ಲಿ ಕೇಳಿ ಬರುತ್ತಿರುವ ಬಿಷ್ಣೋಯಿ ಗ್ಯಾಂಗ್‌ನ ಮುಂದಿನ ಟಾರ್ಗೆಟ್‌ ರಾಹುಲ್‌ ಗಾಂಧಿ ಆಗಬೇಕು ಎಂದಿದ್ದ ಒಡಿಯಾ ನಟ ಬುದ್ದಾದಿತ್ಯ ಮೊಹಾಂತಿ ತಮ್ಮ ಹೇಳಿಕೆಗೆ ಸೋಮವಾರ ಕ್ಷಮೆಯಾಚಿಸಿದ್ದಾರೆ.

ಭುವನೇಶ್ವರ (ಅ.22): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತಾಗಿ ವಿವಾದಾತ್ಮಕ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದ ಒಡಿಯಾ ಸಿನಿಮಾ ನಟ ಬುದ್ದಾದಿತ್ಯ ಮೊಹಾಂತಿ ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 'ಬೈ ಬೈ ದುಬೈ' ಒಡಿಯಾ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ನಟ, ತಾವು ಮಾಡಿದ್ದ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹ್ಯೂಮನ್‌ ಎರರ್‌ ಎಂದಿದ್ದಲ್ಲದೆ, ಈ ಘಟನೆ ನನ್ನ ಜೀವನದ ಅತ್ಯಂತ ಕರಾಳ ಕ್ಷಣ ಎಂದು ವಿಡಿಯೋ ಮೆಸೇಜ್‌ನಲ್ಲಿ ತಿಳಿಸಿದ್ದಾರೆ.ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯ ಮುಂದಿನ ಗುರಿ ರಾಹುಲ್‌ಗಾಂಧಿ ಆಗಿರಬೇಕು ಎಂದು ಬುದ್ದಾದಿತ್ಯ ಮೊಹಾಂತಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಬಳಿಕ ವಿವಾದ ಆರಂಭವಾಗಿತ್ತು. ಸಮುಂಬೈನಲ್ಲಿ ಮಾಜಿ ಶಾಸಕ ಬಾಬಾ ಸಿದ್ದಿಕಿ ಹೈಪ್ರೋಫೈಲ್‌ ಹತ್ಯೆಯಲ್ಲಿ ಭಾಗಿಯಾದ ಕಾರಣಕ್ಕಾಗಿ ಬಿಷ್ಣೋಯಿ ಇಂದು ಕುಖ್ಯಾತಿ ಗಳಿಸಿದ್ದಾರೆ.
ಮೊಹಾಂತಿಯವರ ಪೋಸ್ಟ್‌ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದಾದ ಕೆಲ ಹೊತ್ತಿನಲ್ಲಿಯೇ ಅವರು ತಮ್ಮ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದರು. ತನ್ನ ಕ್ಷಮೆಯಾಚನೆಯ ವೀಡಿಯೊದಲ್ಲಿ, ಮೊಹಾಂತಿ ಅವರು ಪೋಸ್ಟ್ ಅನ್ನುಸಂಪೂರ್ಣವಾಗಿ ಅದರ ಪರಿಣಾಮಗಳನ್ನು ಪರಿಗಣಿಸದೆ ಹಂಚಿಕೊಂಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

"ಲಾರೆನ್ಸ್ ಬಿಷ್ಣೋಯ್ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ನಾನು ಹಂಚಿಕೊಂಡ ಪೋಸ್ಟ್ ಹ್ಯೂಮನ್‌ ಎರರ್‌ ಮತ್ತು ನನ್ನ ಜೀವನದ ಕರಾಳ ಕ್ಷಣ. ಇದು ನನ್ನ ನಿಯಂತ್ರಣದಲ್ಲಿಲ್ಲ, ಮತ್ತು ನಾನು ಯೋಚಿಸದೆ ಹಠಾತ್ ಆಗಿ ಹಂಚಿಕೊಂಡೆ. ಆ ಬಳಿಕ ನನ್ನ ಪೋಸ್ಟ್‌ ಆನ್‌ಲೈನ್‌ನಲ್ಲಿ ಶೇರ್‌ ಆಗುತ್ತಿರುವುದನ್ನು ನೋಡಿದೆ. ಈ ಬಗ್ಗೆ ಕೆಲವು ವದಂತಿಗಳು ಕೂಡ ಹರಿದಾಡುತ್ತಿದೆ. ನಾನು ಅವುಗಳನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಮಾಡಿದ್ದು ತಪ್ಪು ಎಂದು ಗೊತ್ತಾದ ತಕ್ಷಣ ಅದನ್ನು ಡಿಲೀಟ್‌ ಮಾಡಿದ್ದೇನೆ' ಎಂದು  ಹೇಳಿದ್ದಾರೆ. ಇದು ನನ್ನ ಗಮನಕ್ಕೆ ಬಂದ ಬೆನ್ನಲ್ಲಿಯೇ ನಾನು ಅದನ್ನು ಡಿಲೀಟ್‌ ಮಾಡಿದ್ದೇನೆ ಎಂದಿದ್ದಾರೆ.

'ನನ್ನ ಗಮನಕ್ಕೆ ಬಂದ ಬಳಿಕ ನಾನು ಇದನ್ನು ಡಿಲೀಟ್‌ ಮಾಡಿದೆ. ಅದರೊಂದಿಗೆ ಫೇಸ್‌ಬುಕ್‌ನಲ್ಲಿ ಕ್ಷಮೆಯನ್ನೂ ಯಾಚಿಸಿದ್ದೇನೆ. ನಾನು ಎಂದಿಗೂ ವಿವಾದದ ಭಾಗವಾಗಲು ಬಯಸಿದವನಲ್ಲ. ನನ್ನ ಪೋಸ್ಟ್‌ಗಳು ಸಾಮಾನ್ಯವಾಗಿ ಸುದ್ದಿಗಳು, ನಂಬಿಕೆಗಳು ಹಾಗೂ ದೇಶದ ಬಗೆಗಿನ ಪ್ರೀತಿಯ ಬಗ್ಗೆ ಇರುತ್ತದೆ. ಒಡಿಶಾ ರಾಜ್ಯವನ್ನು ಪ್ರತಿನಿಧಿಸುವುದು ಹಾಗೂ ರಾಜ್ಯದ ಪ್ರಗತಿಗೆ ಕಾರಣವಾಗುವುದು ಮಾತ್ರವೇ ನನ್ನ ಗುರಿ. ನಾನು ಕಾಂಗ್ರೆಸ್‌ ಪಕ್ಷಕ್ಕೆ ಕೈಮುಗಿದು ಕ್ಷಮೆಯಾಚಿಸುತ್ತಿದ್ದೇನೆ. ನನಗೆ ಗೊತ್ತಿಲ್ಲದೆ ಆಗಿರುವ ತಪ್ಪು ಇದು' ಎಂದು ಹೇಳಿದ್ದಾರೆ.

Latest Videos

ಬಿಷ್ಣೋಯ್ ವಿರುದ್ಧ ವೈರತ್ವ ಅಂತ್ಯಕ್ಕೆ 5 ಕೋಟಿ ರೂ, ಸಲ್ಮಾನ್‌ಗೆ ಬಂದ ಬೆದರಿಕೆ ಮೆಸೇಜ್‌ನಲ್ಲಿ ಟ್ವಿಸ್ಟ್!

ಡಿಲೀಟ್‌ ಆಗಿರುವ ಪೋಸ್ಟ್‌ನಲ್ಲಿ ಮೊಹಾಂತಿ ವಿಶ್ವದ ಗುಪ್ತಚರ ಏಜೆನ್ಸಿಗಳ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಗೆ ಹೋಲಿಕೆ ಮಾಡಿದ್ದರು. 'ಜರ್ಮನಿಗೆ ಗೆಟ್ಸಾಪೋ ಇದೆ. ಇಸ್ರೇಲ್‌ಗೆ ಮೊಸಾದ್‌ ಇದೆ. ಅಮೆರಿಕ್ಕೆ ಸಿಐಎ ಇದೆ. ಈಗ ಭಾರತಕ್ಕೆ ಲಾರೆನ್ಸ್‌ ಬಿಷ್ಣೋಯಿ. ಇವರ ಮುಂದಿನ ಲಿಸ್ಟ್‌ನಲ್ಲಿ ಓವೈಸಿ ಅಥವಾ ರಾಹುಲ್‌ ಗಾಂಧಿ ಇರಬೇಕು' ಎಂದು ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್ ಆಕ್ರೋಶವನ್ನು ಹುಟ್ಟುಹಾಕಿತು, ನಟ ಕಾಂಗ್ರೆಸ್ ನಾಯಕನ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (NSUI) ರಾಜ್ಯ ಘಟಕವು ಭುವನೇಶ್ವರ ಮತ್ತು ಕಟಕ್ ಎರಡರಲ್ಲೂ ಮೊಹಾಂತಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಪನ್ನುನ್ ಕೇಸಲ್ಲಿ ಅಮೆರಿಕದ ಎಫ್‌ಬಿಐ ಹುಡುಕ್ತಿರೋ ಭಾರತೀಯ ವಿಕಾಸ್ ಯಾದವ್ ಯಾರು?

click me!