
ನವದೆಹಲಿ(ಏ.29); ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಜನ ಲಸಿಕೆಯತ್ತ ಮುಖ ಮಾಡಿದ್ದಾರೆ. ಇತ್ತ ಸರ್ಕಾರ ಮಕ್ಕಳಿಗೆ ಲಸಿಕೆ ನೀಡಲು ಸಜ್ಜಾಗಿದೆ. 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಮೊದಲು ಸೇರೋ ಸರ್ವೆ ನಡೆಸುವ ಅಗತ್ಯವಿದೆ ಅನ್ನೋ ಅಭಿಪ್ರಾಯವವನ್ನು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ( NTAGI) ವ್ಯಕ್ತಪಡಿಸಿದೆ. ಈ ಕುರಿತು ಶೀಘ್ರದಲ್ಲೇ ಸರ್ಕಾರಕ್ಕೆ ಸಲಹೆ ನೀಡುವ ಸಾಧ್ಯತೆ ಇದೆ.
ಮಕ್ಕಳ ದೇಹದಲ್ಲಿನ ಪ್ರತಿಕಾಯಗಳ ಮಟ್ಟ ಎಷ್ಟಿದೆ? ಅನ್ನೋದು ತಿಳಿಯುವ ಅಗತ್ಯವಿದೆ. ಈ ಮಕ್ಕಳ ಪ್ರತಿಕಾಯಗಳ ಮಟ್ಟ ಅರಿತ ಬಳಿಕ 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡವುದು ಒಳಿತು ಅನ್ನೋದು NTAGI ಹೇಳಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ NTAGI ಸಲಹೆ ನೀಡಲಿದೆ.
ಕರ್ನಾಟಕದಲ್ಲೂ ಕೋವಿಡ್ ಆತಂಕ?: ಸಚಿವ ಸುಧಾಕರ್ ಪ್ರತಿಕ್ರಿಯೆ
ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮಕ್ಕಳಿಗೂ ಲಸಿಕೆ ನೀಡಬೇಕು ಅನ್ನೋ ಮಾತುಗಳು ಕೇಳಿಬರುತ್ತಿದೆ.ಆದರೆ ಮಕ್ಕಳ ಲಸಿಕೆ ಅವಶ್ಯಕತೆ ಹಾಗೂ ಸುರಕ್ಷತೆ ಕುರಿತು ಅಷ್ಟೇ ಚರ್ಚೆಗಳಾಗುತ್ತಿದೆ. ಹೀಗಾಗಿ ಸಭೆ ಸೇರಿದ NTAGI ಸಮಿತಿ ಹಲವು ಸುತ್ತಿನ ಚರ್ಚೆ ನಡೆಸಿದೆ.
ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆ ಬಳಿಕವೇ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವಿಯಾ ಹೇಳಿದ್ದಾರೆ. 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯೋಲಾಜಿಕಲ್ ಇ ಕೋವಿಡ್ ಲಸಿಕೆ ತುರ್ತು ಬಳಕೆಗೆ DCGI ಅನುಮತಿ ನೀಡಿದೆ. ಇನ್ನು 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಭಾರತ ಬಯೋಟೆಕ್ ಕೋವಾಕ್ಸಿನ್ ಲಸಿಕೆಗೂ ಅನುಮತಿ ನೀಡಿದೆ.
5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕುರಿತು ತಜ್ಞರ ಸಮಿತಿ ಶಿಫಾರಸು ಆಧರಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ಈ ನಡುವೆ, ಲಸಿಕಾಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಸಭೆ ಶುಕ್ರವಾರ ನಿಗದಿಯಾಗಿದ್ದು, ಆ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Covid 19 Spike: ಕೋವಿಡ್ 4ನೇ ಅಲೆ ಭೀತಿ ಎದುರಿಸಲು ರಾಜ್ಯ ಸರ್ಕಾರದಿಂದ ಸಿದ್ದತೆ!
ಸುದ್ದಿಗಾರರೊಂದಿಗೆ ಮಾತನಾಡಿದ ಮಾಂಡವೀಯ, ತಜ್ಞರ ಸಮಿತಿ ಶಿಫಾರಸು ಬಂದ ಬಳಿಕ ಮಕ್ಕಳ ಲಸಿಕಾಕರಣ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಕೋವಿಡ್ ಸೋಂಕಿನ ಕುರಿತು ಬುಧವಾರವಷ್ಟೇ ಮುಖ್ಯಮಂತ್ರಿಗಳ ಜತೆ ಸಂವಾದ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಶಾಲೆಗಳಲ್ಲಿ ವಿಶೇಷ ಅಭಿಯಾನ ನಡೆಸುವ ಮೂಲಕ ಎಲ್ಲ ಅರ್ಹ ಮಕ್ಕಳಿಗೂ ಲಸಿಕೆ ನೀಡುವುದು ಸರ್ಕಾರದ ಆದ್ಯತೆ ಎಂದು ಹೇಳಿದ್ದರು.
5ರಿಂದ 12 ವರ್ಷದೊಳಗಿನ ಮಕ್ಕಳ ಬಳಕೆಗಾಗಿ ಕೋರ್ಬೆವ್ಯಾಕ್ಸ್ ಹಾಗೂ 6ರಿಂದ 12 ವರ್ಷದೊಳಗಿನ ಮಕ್ಕಳಿಗಾಗಿ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡುವುದಕ್ಕೆ ಔಷಧ ನಿಯಂತ್ರಣ ಸಂಸ್ಥೆ ಡಿಸಿಜಿಐ ಮಂಗಳವಾರ ಅನುಮೋದನೆ ನೀಡಿದೆ. ಸರ್ಕಾರ ಅನುಮತಿ ನೀಡಿದರೆ ಈ ವರ್ಗದ ಮಕ್ಕಳಿಗೆ ಲಸಿಕಾಕರಣ ಆರಂಭವಾಗುವ ನಿರೀಕ್ಷೆ ಇದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಏರಿಕೆ ದಾಖಲಾಗಿದ್ದು, 24 ಗಂಟೆಗಳ ಅವಧಿಯಲ್ಲಿ 3,303 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. 46 ದಿನಗಳ ನಂತರ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 3000 ಗಡಿಯನ್ನು ದಾಟಿದೆ.ಇದೇ ವೇಳೆಯಲ್ಲಿ 39 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 16,980ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.66ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.61ರಷ್ಟಿದೆ.ಕೋವಿಡ್ ಚೇತರಿಕೆ ದರವು ಶೇ. 98.74 ರಷ್ಟಿದೆ. ದೇಶದಲ್ಲಿ ಈವರೆಗೆ 188.40 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ