
ನವದೆಹಲಿ(ಜು.18) ಎನ್ಡಿಎ ದೇಶಕ್ಕಾಗಿ , ದೇಶದ ಜನರಿಗಾಗಿ, ಸುರಕ್ಷತೆಗಾಗಿ ಸಮರ್ಪಿತವಾಗಿದೆ. ಎನ್ಡಿಎಗೆ ದೇಶ ಮೊದಲು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೆಹಲಿಯ ಅಶೋಕ ಹೊಟೆಲ್ನಲ್ಲಿ ನಡೆಯುತ್ತಿರುವ ಎನ್ಡಿಎ ಮಿತ್ರಕೂಟಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎನ್ಡಿಎ ಆಡಳಿತ ಪಕ್ಷದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ಕೆಟ್ಟ ರಾಜಕೀಯ ಮಾಡಿಲ್ಲ. ಸರ್ಕಾರದ ವಿರುದ್ಧ ಮಾತನಾಡಲು ವಿದೇಶಿ ಸಂಸ್ಥೆಗಳ, ವಿದೇಶಗಳ ನೆರವು ಯಾವತ್ತೂ ಕೇಳಿಲ್ಲ ಎಂದು ಮೋದಿ ನೇರವಾಗಿ ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ.
ಎನ್ಡಿಎ ಬಲಿಷ್ಠಗೊಳಿಸಲು ಹಲವು ನಾಯಕರು ಬೆಂಬಲ ನೀಡಿದ್ದಾರೆ.ನಮ್ಮನ್ನು ಅಗಲಿದ ಬಾಳಾ ಸಾಹೇಬ್ ಠಾಕ್ರೆ, ಪ್ರಕಾಶ್ ಸಿಂಗ್ ಬಾದಲ್ ಕೂಡ ಎನ್ಡಿಎಗೆ ಕೂಡುಗೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ, ರಾಷ್ಟ್ರದ ಅಭಿವೃದ್ಧಿ ಮಂತ್ರದೊಂದಿಗೆ ಎನ್ಡಿಎ ಸಾಗಿದೆ. ಈ ಯಾತ್ರೆಯಲ್ಲಿ ನಮಗೆ ಸಾಥ್ ನೀಡಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ ತಿಳಿಸುತ್ತೇನೆ. ಇದೀಗ ನಮ್ಮ ಎನ್ಡಿಎ ಜೊತೆ ಸೇರಿರು ಹೊಸ ಪಕ್ಷಗಳಿಗೆ ಹೃದಯದಿಂದ ಸ್ವಾಗತ ನೀಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಭ್ರಷ್ಟಾಚಾರ ಮುಚ್ಚಿ ಹಾಕಲು ಭಷ್ಟ್ರರೆಲ್ಲಾ ಒಂದಾಗಿದ್ದಾರೆ: ಪ್ರಧಾನಿ ಕುಹಕ
ಕೋಟಿ ಕೋಟಿ ಭಾರತೀಯರು ಹೊಸ ಸಂಕಲ್ಪದೊಂದಿಗೆ ಮುನ್ನುಗ್ಗುತ್ತಿದ್ದಾರೆ. ಮಹತ್ವದ ಕಾಲಗಟ್ಟದಲ್ಲಿ ಎನ್ಡಿಎ ದೇಶವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲು ಪ್ರಮುಖ ಭೂಮಿಕೆಯಾಗಿದೆ. ದಲಿತರು, ದಮನಿತರು, ನಿರ್ಗತಿಗರು, ಬಡವರು ಸೇರಿದಂತೆ ಎಲ್ಲರ ವಿಶ್ವಾಸ ಎನ್ಡಿಎ ಮೇಲಿದೆ. ಭಾರತದ ಅಭಿವೃದ್ಧಿಯಲ್ಲಿ ಜನರು ಎನ್ಡಿಎ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ.
ಒಂದು ರಾಷ್ಟ್ರ ಎಲ್ಲರ ಪರಿಶ್ರಮದಿಂದ ಮುನ್ನಡೆಯುತ್ತದೆ. ಎನ್ಡಿಎ ಎಲ್ಲರ ಪರಿಶ್ರಮ, ಹಾಗೂ ಪ್ರಗತಿಯನ್ನು ಪ್ರತಿನಿಧಿಸುತ್ತದೆ. 90ರ ದಶಕದಲ್ಲಿ ಕಾಂಗ್ರೆಸ್ ಮೈತ್ರಿಯ ಕಸರತ್ತು ಆರಂಭಿಸಿತು. ಕಾಂಗ್ರೆಸ್ ಸರ್ಕಾರ ಕೆಡವಲು ಈ ಮೈತ್ರಿಯನ್ನು ಬಳಸಿಕೊಂಡಿದೆ. ಎನ್ಡಿಎ ಯಾವತ್ತೂ ಯಾವುದೇ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯಲು ಪ್ರಯತ್ನಿಸಿಲ್ಲ. ದೇಶದಲ್ಲಿ ಸ್ಥಿರ ಸರ್ಕಾರ ಇದ್ದರೆ, ಅಭಿವೃದ್ಧಿ ವೇಗ ಹೆಚ್ಚಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದಲ್ಲಿ ಸ್ಥರ ಹಾಗೂ ಸುಭದ್ರ ಸರ್ಕಾರದಿಂದ ಇಡೀ ವಿಶ್ವಕ್ಕೆ ಭಾರತದ ಮೇಲೆ ವಿಶ್ವಾಸ ಹೆಚ್ಚಿದೆ. ಎನ್ಡಿಎ ಮತ್ತೊಂದು ವಿಶೇಷತೆ ಎಂದರೆ ನಾವು ವಿಪಕ್ಷದಲ್ಲಿದ್ದಾಗ ನಾವು ಸಕಾರಾತ್ಮ ರಾಜನೀತಿ ಮಾಡಿದ್ದೇವೆ. ಎನ್ಡಿಎ ಯಾವತ್ತೂ ನೆಗೆಟೀವಿಟಿ ರಾಜಕೀಯ ಮಾಡಿಲ್ಲ. ವಿಪಕ್ಷದಲ್ಲಿದ್ದ ನಾವು ಸರ್ಕಾರದ ಹಲವು ಯೋಜನೆಗಳನ್ನು, ಭ್ರಷ್ಟಾಚಾರಗಳನ್ನು ವಿರೋಧಿಸಿದ್ದೇವೆ. ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದೇವೆ. ಆದರೆ ನಾವು ಯಾವತ್ತೂ ಸರ್ಕಾರದ ವಿರುದ್ಧ ಧ್ವನಿ ಎತ್ತಲು ವಿದೇಶಗಳ ನೆರವು ಕೇಳಿಲ್ಲ ಎಂದು ನೇರವಾಗಿ ಕಾಂಗ್ರೆಸ್ ವಿರುದ್ದ ಮೋದಿ ಹರಿಹಾಯ್ದಿದ್ದಾರೆ.
ಐಎನ್ಡಿಐಎ ಮಹಾಘಟಬಂಧನ್ ಸಭೆ ಮುಗಿಯುತ್ತಿದ್ದಂತೆ ಟ್ವೀಟ್ ಮೂಲಕ ಕುಟುಕಿದ ಪ್ರಧಾನಿ ಮೋದಿ
ಕೇಂದ್ರದ ಹಲವು ಯೋಜನೆಗಳಿಗೆ ಕೆಲ ರಾಜ್ಯಗಳಲ್ಲಿ ಸುಗಮವಾಗಿ ಸಾಗುತ್ತಿಲ್ಲ. ಕೆಲ ರಾಜ್ಯದ ಮುಖ್ಯಮಂತ್ರಿಗಳಿಗೆ ಹಲವು ಪತ್ರ ಬರೆದರೂ ಕೇಂದ್ರ ಕೇಳಿದ ಯಾವುದೇ ದಾಖಲೆ ನೀಡಿಲ್ಲ. ಮೈತ್ರಿ ಭ್ರಷ್ಟಾಚಾರದ ಪರವಾಗಿ, ಮೈತ್ರಿ ಪರಿವಾರವಾದ ಪರವಾಗಿದ್ದರೆ ಅಂತಹ ಮೈತ್ರಿ ದೇಶಕ್ಕೆ ಸಂಕಷ್ಟ ನೀಡಲಿದೆ. 2014ರ ಮೊದಲು ಭಾರತದಲ್ಲಿದ್ದ ಮೈತ್ರಿ ಸರ್ಕಾರ ಯಾವ ಆಡಳಿತ ನೀಡಿದೆ ಅನ್ನೋದು ನಾವು ನೋಡಿದ್ದೇವೆ. ಪ್ರಧಾನಿ ಮೇಲೆ ಮತ್ತೊಬ್ಬರಿಗೆ ಅಧಿಕಾರ, ಪವರ್ ಹೌಸ್ ಸೇರಿದಂತೆ ಗೊಂದಲಗಳು ಭಾರತದ ಅಭಿವೃದ್ಧಿಯನ್ನು ಕುಂಠಿತ ಮಾಡಿತ್ತು ಎಂದು ಮೋದಿ ಹೇಳಿದ್ದಾರೆ.
ಎನ್ಡಿಎ ಮೈತ್ರಿ ಕೂಟದಲ್ಲಿ ಯಾವುದೇ ಪಕ್ಷ ದೊಡ್ಡದು, ಚಿಕ್ಕದು ಎಂದಿಲ್ಲ. ಎಲ್ಲಾ ಪಕ್ಷಗಳು ಅತ್ಯಂತ ಮುಖ್ಯವಾಗಿದೆ. 2014 ಹಾಗೂ 2019ರಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿತ್ತು. ಆದರೆ ಈ ಸರ್ಕಾರ ಎನ್ಡಿಎ ಸರ್ಕಾರವಾಗಿದೆ. ನಾವು ಯಾವತ್ತೂ ಎನ್ಡಿಎ ಬಿಟ್ಟುಕೊಟ್ಟಿಲ್ಲ. ಎನ್ಡಿಎದಲ್ಲಿರುವ ಪಕ್ಷಗಳು ಸಮಾಜದ ಎಲ್ಲಾ ವರ್ಗದ ಜನರ ಜೊತೆ ಕೆಲಸ ಮಾಡುತ್ತದೆ.
ನೀತಿ ಆಯೋಗದ ಅಧ್ಯಯನ ವರದಿ ನೀವು ನೋಡಿಬರಬಹುದು. ಬಡತನದಿಂದ ಭಾರತೀಯರು ಹೊರಬಂದ ವರದಿ, ಐಎಂಎಫ್ ವರದಿಯಲ್ಲೂ ಇದೇ ರೀತಿ ಉಲ್ಲೇಖ ನೀವು ಗಮನಿಸಿರಬಹುದು. ಬಡವರಿಗೆ ಮನೆ ನೀಡುವ ಯೋಜನೆ, ಅವರನ್ನು ಬಡತನದಿಂದ ಹೊರಬರಲು ಯೋಜನೆ, ಅವರಿಗೆ ಶಕ್ತಿ ನೀಡುವ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಡವರು ತಮ್ಮ ಕನಸುಗಳ ಬೆನ್ನಟ್ಟಿ ಹೋಗಲು ನೆರವು ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಜೀವನದ ಉದ್ದಕ್ಕೂ ಕಾಂಗ್ರೆಸ್ ಜೊತೆಗಿದ್ದವರು, ಕಾಂಗ್ರೆಸ್ ನಾಯಕರಾಗಿ ಸೇವೆ ಸಲ್ಲಿಸಿದವರು. ಆದರೆ ಅವರಿಗೆ ಭಾರತ ರತ್ನವನ್ನು ಎನ್ಡಿಎ ನೀಡಿದೆ. ಅವರ ಸೇವೆಯನ್ನು ಎನ್ಡಿಎ ಗೌರವಿಸಿದೆ. ಶರದ್ ಪವಾರ್, ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಲವು ನಾಯಕರು ಬಿಜೆಪಿ ವಿರುದ್ಧವಿದ್ದಾರೆ. ಆದರೆ ಅವರ ಸೇವೆಯನ್ನು ಪರಿಗಣಿಸಿ ಪದ್ಮ ಪ್ರಶಸ್ತಿಯನ್ನು ನೀಡಲು ಎನ್ಡಿಎ ಹಿಂದೇಟು ಹಾಕಿಲ್ಲ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ