
ನವದೆಹಲಿ: ಕೊಚ್ಚಿಯ ಏಷ್ಯಾನೆಟ್ ನ್ಯೂಸ್ ಚಾನೆಲ್ ಕಚೇರಿಗೆ ನುಗ್ಗಿ ಎಸ್ಎಫ್ಐ ಗೂಂಡಾಗಳು ದಾಳಿ ಮಾಡಿರುವುದನ್ನು ಹಾಗೂ ಇದರ ಬೆನ್ನಲೇ ಕೋಳಿಕ್ಕೋಡ್ನ ಏಷ್ಯಾನೆಟ್ ಪ್ರಾದೇಶಿಕ ಕಚೇರಿ ಮೇಲೆ ಪೊಲೀಸ್ ದಾಳಿ ನಡೆಸಿರುವುದನ್ನು ನ್ಯೂಸ್ ಬ್ರಾಡ್ಕಾಸ್ಟರ್ ಡಿಜಿಟಲ್ ಅಸೋಸಿಯೇಷನ್ (NBDA)ತೀವ್ರವಾಗಿ ಖಂಡಿಸಿದೆ.
ಡ್ರಗ್ ಮಾಫಿಯಾ ಹಾಗೂ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ವರದಿ ಬಳಿಕ ಎಸ್ಎಫ್ಐ ಕಾರ್ಯಕರ್ತರು ಕೊಚ್ಚಿಯ ಏಷ್ಯಾನೆಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ದೌರ್ಜನ್ಯ ಕ್ರಮಗಳು ಸ್ವೀಕಾರಾರ್ಹವಲ್ಲ ಮಾತ್ರವಲ್ಲದೆ ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ಪ್ರತಿಪಾದಿಸಲ್ಪಟ್ಟಿರುವ ಮಾಧ್ಯಮದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ಹಾನಿ ಆಗಿದೆ. ಈ ಘಟನೆಯನ್ನು ಎನ್ಡಿಬಿಎ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ಎಸ್ಎಫ್ಐ ಕೃತ್ಯ ಹಾಗೂ ಪೊಲೀಸರ ದಾಳಿ ಯಾವುದೇ ಕಾರಣಕ್ಕೂ ಸಮರ್ಥನೆ ಮಾಡುವಂತದ್ದಲ್ಲ. ಒಂದು ಸುದ್ದಿ ಸಂಸ್ಥೆ ಮೇಲೆ ದಾಳಿ ನಡೆಸಿ ಶೋಧ ನಡೆಸುವುದು ಮಾಧ್ಯಮದ ಮೂಗು ಮುಚ್ಚುವ ಸ್ಪಷ್ಟ ಪ್ರಯತ್ನವಾಗಿದೆ. ಎಂದು ಎನ್ಡಿಬಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಏಷ್ಯಾನೆಟ್ ಕಚೇರಿ ಮೇಲೆ ದಾಳಿ : ಕೇರಳ ಸದನದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಪಕ್ಷಗಳು
ಮಾಧ್ಯಮವನ್ನು ಪ್ರಜಾಪ್ರಭುತ್ವ ನಾಲ್ಕನೇ ಸ್ತಂಭವೆಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವ ಮತ್ತು ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ಪ್ರಸಾರ ಮಾಡುವ ಅದರ ಕಾರ್ಯವೂ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಅನಿವಾರ್ಯ. ಆದ್ದರಿಂದ, ಮಾಧ್ಯಮಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದನ್ನು ತಡೆಯುವ ಯಾವುದೇ ಕ್ರಮವನ್ನು ಸಮರ್ಥಿಸಲಾಗದು. ಇಂತಹ ಕೃತ್ಯ ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಇದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಎನ್ಬಿಡಿಎ ಕೇರಳದ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತದೆ ಎಂದು ಎನ್fಡಿಬಿಎ ಹೇಳಿದೆ.
ಘಟನೆ ಹಿನ್ನೆಲೆ
ಮಲೆಯಾಳಂ ಏಷ್ಯಾನೆಟ್ ನ್ಯೂಸ್ ಚಾನೆಲ್ ಡ್ರಗ್ ಮಾಫಿಯಾ ಬಗ್ಗೆ ನವೆಂಬರ್ 10, 2022 ರಂದು 'ನಾರ್ಕೋಟಿಕ್ಸ್ ಎ ಡರ್ಟಿ ಬಿಸಿನೆಸ್' (Narcotics is a dirty business) ಎಂಬ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಸಂತ್ರಸ್ತೆ 14 ವರ್ಷದ ಬಾಲಕಿಯ ಹೇಳಿಕೆಯನ್ನು ಮರುಸೃಷ್ಟಿಸುವ ಸಲುವಾಗಿ ಬೇರೊಂದು ಬಾಲಕಿಯನ್ನು ಬಳಸಿಕೊಳ್ಳಲಾಗಿತ್ತು. (ಫೋಕ್ಸೋ ಕೇಸುಗಳಲ್ಲಿ ಸಂತ್ರಸ್ತೆಯರ ಹೆಸರು ಗುರುತು ತೋರಿಸುವ ಹಾಗಿಲ್ಲ ಎಂಬ ಕಾರಣ ಚಾನೆಲ್ ಈ ನಿರ್ಧಾರ ಮಾಡಿತ್ತು) ಇದನ್ನೇ ಎಸ್ಎಫ್ಐ ಕಾರ್ಯಕರ್ತರೂ ಇದೊಂದು ಫೇಕ್ನ್ಯೂಸ್ ಎಂದು ಆರೋಪಿಸಿ ಶುಕ್ರವಾರ ಸಂಜೆ ಕೊಚ್ಚಿ ಏಷ್ಯಾನೆಟ್ ನ್ಯೂಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಬೆದರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಪಕ್ಷೇತರ ಶಾಸಕ ಪಿಸಿ ಅನ್ವರ್ ನೀಡಿದ ಸುಳ್ಳು ದೂರಿನ ಮೇರೆಗೆ ಭಾನುವಾರ ಬೆಳಗ್ಗೆ ಕೋಳಿಕ್ಕೋಡ್ನಲ್ಲಿರುವ ಏಷ್ಯಾನೆಟ್ ನ್ಯೂಸ್ ಕಚೇರಿಗೆ ಪೊಲೀಸರು ದಾಳಿ ನಡೆಸಿದ್ದರು.
ಕೋಳಿಕ್ಕೋಡ್ನಲ್ಲಿರುವ ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿರುವುದರ ಹಿಂದೆ ತೀವ್ರ ರಾಜಕೀಯ ಒತ್ತಡವಿರುವುದು ತಿಳಿದು ಬಂದಿದೆ. ಈ ಶೋಧನೆಯ ಹಿಂದೆ ಉನ್ನತ ಮಟ್ಟದ ರಾಜಕೀಯ ಒತ್ತಡವಿತ್ತು. ಗೃಹ ಇಲಾಖೆಯ ಉನ್ನತಾಧಿಕಾರಿಗಳ ತೀವ್ರ ಒತ್ತಡದಿಂದಾಗಿ ಕೋಳಿಕ್ಕೋಡ್ ನಗರ ಪೊಲೀಸರು ಕಾನೂನು ಕ್ರಮಗಳ ಗಣನೆಗೆ ತೆಗೆದುಕೊಳ್ಳದೇ ಚಾನೆಲ್ನ ಪ್ರಾದೇಶಿಕ ಕಚೇರಿಯಲ್ಲಿ ತಪಾಸಣೆ ನಡೆಸಿದರು ಎಂದು ಏಷ್ಯಾನೆಟ್ ನ್ಯೂಸ್ಗೆ ತಿಳಿದು ಬಂದಿದೆ.
ಏಷ್ಯಾನಟ್ ನ್ಯೂಸ್ ಕಚೇರಿ ದಾಳಿಗೆ ಪೊಲೀಸರ ಮೇಲಿತ್ತು ಕೇರಳ ಸರಕಾರದ ತೀವ್ರ ಒತ್ತಡ
ಏಷಿಯಾನೆಟ್ ನ್ಯೂಸ್ ಕಚೇರಿಗೆ ತೆರಳಿ ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಕೋಝಿಕ್ಕೋಡ್ ಪೊಲೀಸರಿಗೆ ಸೂಚನೆ ಬಂದಿತ್ತು. ಆದರೆ ಕೋಝಿಕ್ಕೋಡ್ ನಗರ ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ಸೂಚನೆಗಳ ನಂತರವೂ ಕಚೇರಿಯಲ್ಲಿದ್ದ ಕಂಪ್ಯೂಟರ್ಗಳನ್ನು ವಶಪಡಿಸಿಕೊಳ್ಳುವ ಕ್ರಮದಿಂದ ಹಿಂದೆ ಸರಿದರು.
ಇತ್ತ ಕೊಚ್ಚಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಎಸ್ಎಫ್ಐ ಸಂಘಟನೆಯೂ ಕೇರಳದಲ್ಲಿ ಆಡಳಿತದಲ್ಲಿರುವ ಸಿಪಿಐಎಂನ ವಿದ್ಯಾರ್ಥಿ ವಿಭಾಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ