
ಮಣಿಪುರ(ಜು.20) ಕಳೆದ ಕೆಲ ತಿಂಗಳುಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹಲವು ಅಮಾಯಕ ಜೀವಗಳು ಬಲಿಯಾಗಿದೆ. ಕುಕಿ ಹಾಗೂ ಮೇಟಿ ಸಮುದಾಯದ ನಡುವಿನ ಹೋರಾಟ ಇಡೀ ರಾಜ್ಯವನ್ನೇ ಸುಟ್ಟಿದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಇದೀಗ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಅಮಾನವೀಯ ಘಟನೆ ಭಾರತವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿ, ಕಠಿಣ ಕ್ರಮಕ್ಕೆ ಸೂಚಿಸಿದ್ದರು. ಇದೀಗ ಬೆತ್ತಲೆ ಮೆರವಣಿಗೆ ಪ್ರಕರಣದ ಪ್ರಮುಖ ಆರೋಪಿ 32 ವರ್ಷದ ಹುರಿಯಮ್ ಹೆರೊದಾಸ್ ಮೇಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೆರವಣಿಗೆ ವೇಳೆ ಮಹಿಳೆಯನ್ನು ಬಲವಂತವಾಗಿ ಹಿಡಿದು ಸಾಗುತ್ತಿದ್ದ ಹುರಿಯಮ್ ಹೆರೊದಾಸ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದೀಗ ಇತರ ಆರೋಪಿಗಳಿಗೆ ಹುಡುಕಾಟ ತೀವ್ರಗೊಳಿಸಲಾಗಿದೆ.
ಮಣಿಪುರದ ಪೈಶಾಚಿಕ ಘಟನೆ, ಇಬ್ಬರು ಮಹಿಳೆಯರನ್ನು ಬೆತ್ತಲೇ ಮೆರವಣಿಗೆ ಮಾಡಿಸಿ ಗ್ಯಾಂಗ್ ರೇಪ್!
ಬೆತ್ತಲೆ ಮೆರವಣಿಗೆಯುದ್ದಕ್ಕೂ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ವೈರಲ್ ವಿಡಿಯೋದಲ್ಲಿ ಕಾಣುವ ಹಸಿರು ಟಿ ಶರ್ಟ್ ಹಾಕಿದ ಹುರಿಯಮ್ನನ್ನು ಪೊಲೀಸರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಜೊತೆಗಿರುವ ಹಾಗೂ ಇತರರಿಗೆ ಹುಡುಕಾಟ ತೀವ್ರಗೊಂಡಿದೆ. ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ಎಸಗಲಾಗಿದೆ. 21ಕ್ಕೂ ಹೆಚ್ಚು ಬಂಡುಕೋರರ ಗುಂಪು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಅತ್ಯಾಚಾರದಿಂದ ಮಹಿಳೆಯರನ್ನು ರಕ್ಷಿಸಲು ಬಂದ 19 ವರ್ಷದ ಸಹೋದರನನ್ನು ಬಂಡುಕೋರರ ಗುಂಪು ಹತ್ಯೆ ಮಾಡಿದೆ. ಈ ಘಟನೆ ಬಳಿಕ ಇಬ್ಬರು ಮಹಿಳೆಯರನ್ನು ರಸ್ತೆ ಮೂಲಕ ಬೆತ್ತಲೆ ಮೆರವಣಿಗೆ ಮಾಡಲಾಗಿದೆ.
ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತ ಕೆರಳಿದೆ. ಮಣಿಪುರದಲ್ಲಿನ ಕಾನೂನು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ ಕುರಿತು ಮಣಿಪುರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದಾರೆ. ಕಳೆದ 6 ತಿಂಗಳಿನಿಂದ ಹಿಂಸಾಚಾರ, ಅತ್ಯಾಚಾರಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಮತ್ತೆ ಮತ್ತೆ ಈ ಘಟನೆಗಳು ಮರುಕಳಿಸುತ್ತಿರುವುದೇಕೆ ಅನ್ನೋ ಹಲವು ಪ್ರಶ್ನೆಗಳು ಎದ್ದಿದೆ.
ಮಣಿಪುರ ಕಿಚ್ಚಿಗೆ ನಮ್ಮನ್ನು ವೇದಿಕೆ ಮಾಡ್ಕೋಬೇಡಿ: ಮೈತೇಯಿ, ಕುಕಿ ಸಮುದಾಯಗಳಿಗೆ ಸುಪ್ರೀಂ ಎಚ್ಚರಿಕೆ
ಈ ಘಟನೆ ಮೇ 4ರಂದು ಕಂಗ್ಪೋಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಇಬ್ಬರು ಮಹಿಳೆಯರು ಕುಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿಡಿಯೋದಲ್ಲಿ ದಾಖಲಾಗಿರುವಂತೆ ಮೈತೇಯಿ ಸಮುದಾಯದ ಪುರುಷರ ಗುಂಪು ಇವರನ್ನು ಬೆತ್ತಲೆಯಾಗಿ ಮೆರವಣಿಗೆ ಕರೆದೊಯ್ದಿದ್ದಾರೆ. ಈ ವೇಳೆ ಮಹಿಳೆಯರು ಸಹಾಯಕ್ಕಾಗಿ ಬೇಡಿಕೊಂಡಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆದಿವಾಸಿ ಒಕ್ಕೂಟ ಐಟಿಎಲ್ಎಫ್, ಇಂತಹ ದುಷ್ಕೃತ್ಯ ಎಸಗಿರುವುದಲ್ಲದೇ ಇದನ್ನು ಹಂಚಿಕೊಂಡಿರುವುದು ಅವರ ಕ್ರೌರ್ಯವನ್ನು ತೋರಿಸುತ್ತದೆ. ಇದರ ವಿರುದ್ಧ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ